ಬೆಂಗಳೂರು: ಕುಡಿದ ಮತ್ತಿನಲ್ಲಿ ಕುಂಟ ಎಂದು ಅಪಹಾಸ್ಯ ಮಾಡಿದ ಎಂಬ ಕಾರಣಕ್ಕೆ ಕೋಪಗೊಂಡು ಸ್ನೇಹಿತನ ತಲೆ ಮೇಲೆ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಮೃತನನ್ನು ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ವಿಜಯ್ ಕುಮಾರ್ ಅಲಿಯಾಸ್ ವಿಜಿ (38) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಚಾಲಕರಾಗಿರುವ ಗಿರೀಶ್ ಮತ್ತು ಲೋಕೇಶ್ ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಶ್ರೀಗಂಧಕಾವಲ್ನಲ್ಲಿರುವ ಚಾಮುಂಡೇಶ್ವರಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ವಿಜಯ್ ಕುಮಾರ್ ಚಾಮುಂಡೇಶ್ವರಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಆದರೆ ಆಗಾಗ್ಗೆ ಬಾರ್'ಗೆ ಭೇಟಿ ನೀಡುತ್ತಿದ್ದ.
ಇದನ್ನೂ ಓದಿ: ಬೆಳಗಾವಿ: ಮರಳು ತುಂಬಿದ ಲಾರಿ ಹರಿದು ಮಹಿಳೆ ಸಾವು
ಬುಧವಾರ ಸಂಜೆ ವಿಜಯ್ ಕುಮಾರ್ ಬಾರ್ಗೆ ಭೇಟಿ ನೀಡಿ ಮದ್ಯ ಸೇವಿಸುತ್ತಿದ್ದಾಗ ಲೋಕೇಶ್ ಜತೆ ಗೆಳೆಯ ಗಿರೀಶ್ ಕೂಡ ಸ್ಥಳಕ್ಕೆ ಬಂದಿದ್ದ. ಇವರಿಬ್ಬರು ಕುಡಿಯಲು ಹಣ ನೀಡುವಂತೆ ವಿಜಯ್'ನನ್ನು ಕೇಳಿದ್ದಾರೆ. ಈ ವೇಳೆ ವಿಜಯ್ ತನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾನೆ. ಈ ವೇಳೆ ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ರಾತ್ರಿ 11.20ರ ಸುಮಾರಿಗೆ ಬಾರ್ನಿಂದ ಹೊರಬಂದ ಮೂವರ ನಡುವೆ ಮತ್ತೆ ಜಗಳವಾಗಿದೆ.
ಗಾಯದಿಂದಾಗಿ ಗಿರೀಶ್ ಕುಂಟುತ್ತಾ ಹೊರಬಂದಿದ್ದ. ಇದನ್ನು ಕಂಡು ವಿಜಯ್ ಕುಂಟ ಎಂದು ಅಪಹಾಸ್ಯ ಮಾಡಿದ್ದಾನೆ. ಈ ವೇಳೆ ಮತ್ತೆ ಜಗಳ ಆರಂಭವಾಗಿದೆ. ಗಿರೀಶ್ ಬೆಂಬಲಕ್ಕೆ ಆತನ ಸ್ನೇಹಿತ ಲೋಕೇಶ್ ಬಂದಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿದ್ದು, ಲೋಕೇಶ್ ಹಾಗೂ ಗಿರೀಶ್ ಇಬ್ಬರೂ ಸೇರಿ ವಿಜಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು, ಹತ್ಯೆ ಮಾಡಿದ್ದಾರೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement