ಎಲ್ಲೆಂದರಲ್ಲಿ ಸಿಗರೇಟ್, ಬೀಡಿ ತುಂಡುಗಳ ಬಿಸಾಡುತ್ತೀರಾ? ದಂಡ ಕಟ್ಟಲು ಸಿದ್ಧರಾಗಿ!

ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್ ತುಂಡುಗಳ ನಿರ್ಲಕ್ಷ ವಿಲೇವಾರಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್ ತುಂಡುಗಳ ನಿರ್ಲಕ್ಷ ವಿಲೇವಾರಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮುಂದಾಗಿದೆ.

ಸಿಗರೇಟ್ ತುಂಡುಗಳ ವಿಲೇಗೆ ನಿಯಮ ರೂಪಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನ.1ರಂದು ಉನ್ನತ ಅಧಿಕಾರ ಸಮಿತಿಯನ್ನು ಕೆಎಸ್​ಪಿಸಿಬಿ ರಚಿಸಿತ್ತು. ಪ್ರೊ. ಯು.ಎಸ್. ವಿಶಾಲ್ ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಇದೀಗ ಈ ಸಮಿತಿಯು ಕೆಲ ನಿಯಮಗಳನ್ನು ರೂಪಿಸಿದೆ. ಸಿಗರೇಟ್ ತುಂಡುಗಳ ಕಸದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಿಗರೇಟ್ ತಯಾರಕರು ಸಿಗರೇಟ್ ತುಂಡುಗಳ ಕಸದಿಂದ ಪರಿಸರ ಮತ್ತು ಆರೋಗ್ಯದ ಅಪಾಯ ಕುರಿತು ಮಾಹಿತಿ ನಮೂದಿಸಬೇಕು. ಸಾರ್ವಜನಿಕ ಪ್ರದೇಶ, ಹೊರಾಂಗಣ, ಒಳಾಂಗಣ ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಹಾಕಲಿದ್ದು, ದಂಡ ವಿಧಿಸುವ ನಿಬಂಧನೆಯನ್ನು ಸ್ಥಳೀಯ ಅಧಿಕಾರಿಗಳು ತಮ್ಮ ಬೈಲಾಗಳಲ್ಲಿ ಸೇರಿಸಿಕೊಳ್ಳಬಹುದು. ಸಿಗರೇಟ್ ತುಂಡುಗಳ ಕಸ ಹಾಕುವುದನ್ನು ನಿಷೇಧಿಸಲಾಗಿದೆ.

ಸಿಗರೇಟ್ ತುಂಡು ಕಸ ಹಾಕುವುದಕ್ಕೆ ದಂಡ ವಿಧಿಸಲು ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಒಣ ತ್ಯಾಜ್ಯದೊಂದಿಗೆ ಸಿಗರೇಟ್ ತುಂಡು ಪ್ರತ್ಯೇಕಿಸಬೇಕು. ಸುರಕ್ಷಿತವಾಗಿ ಸಿಗರೇಟ್ ತುಂಡು ವಿಲೇವಾರಿ ಮಾಡುವ ಸೂಚನೆಗಳನ್ನು ಪ್ರತಿ ಸಿಗರೇಟ್ ಪ್ಯಾಕೆಟ್​ನಲ್ಲಿ ತಯಾಕರು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಾರ್ಗಸೂಚಿಯಲ್ಲಿ ಕೆಎಸ್​ಪಿಸಿಬಿ ಉಲ್ಲೇಖಿಸಿದೆ.

ಸಮಿತಿಯ ನಿಯಮಗಳ ಕುರಿತು ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ತಂಬಾಕು ತಯಾರಕರು ಸೇರಿದಂತೆ ಮಧ್ಯಸ್ಥಗಾರರ ಸಭೆಯನ್ನು ಮಾರ್ಚ್ 15 ರಂದು ಕರೆಯಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com