ಮದುವೆಯಾದ ಮರುದಿನವೇ ಹಳೆ ಲವ್ವಿಡವ್ವಿ ಬಯಲು; ಬೆಂಗಳೂರು ಟ್ರಾಫಿಕ್ ನಲ್ಲೇ ಪತ್ನಿ ಬಿಟ್ಟು ಪತಿ ಪರಾರಿ!

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವವಿವಾಹಿತ ವ್ಯಕ್ತಿಯೊಬ್ಬ ಟ್ರಾಫಿಕ್‌ನಲ್ಲೇ ತನ್ನ ಪತ್ನಿ ಮತ್ತು ಕಾರು ಬಿಟ್ಟು ಓಡಿ ಹೋದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಟ್ರಾಫಿಕ್
ಬೆಂಗಳೂರು ಟ್ರಾಫಿಕ್

ಬೆಂಗಳೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನವವಿವಾಹಿತ ವ್ಯಕ್ತಿಯೊಬ್ಬ ಟ್ರಾಫಿಕ್‌ನಲ್ಲೇ ತನ್ನ ಪತ್ನಿ ಮತ್ತು ಕಾರು ಬಿಟ್ಟು ಓಡಿ ಹೋದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಮಹದೇವಪುರ ಟೆಕ್‌ಕಾರಿಡಾರ್‌ನಲ್ಲಿ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾಗ ಕಾರಿನ ಬಾಗಿಲು ತೆರೆದು ನವ ವಿವಾಹಿತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ. ಫೆಬ್ರವರಿ 16ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಫೆಬ್ರವರಿ 15 ರಂದು ಈ ವ್ಯಕ್ತಿ ಮದುವೆಯಾಗಿದ್ದು, ಮಾರನೇ ದಿನವೇ ಅಂದರೆ ಫೆಬ್ರವರಿ 16ರಂದು ತನ್ನ ಪತ್ನಿಯನ್ನು ಟ್ರಾಫಿಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಅಷ್ಟಕ್ಕೂ ನವವಿವಾಹಿತ ಓಡಿ ಹೋಗಿದ್ದೇಕೆ ಎಂಬುದು ತಿಳಿದರೆ ಅಚ್ಚರಿಯಾಗುತ್ತದೆ.

ಪರಾರಿಯಾಗಿರುವ ಪತಿ ಗೋವಾದಲ್ಲಿ ಕೆಲಸ ಮಾಡುತ್ತಿದ್ದಾಗ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಫೆಬ್ರವರಿ 15ರಂದು ಇವರ ವಿವಾಹವಾಗಿದ್ದು. ಅದರ ಮರು ದಿನವೇ ಅನೈತಿಕ ಸಂಬಂಧದ ಬಗ್ಗೆ ತಾನು ಮದುವೆಯಾದ ಹುಡುಗಿಗೆ ಗೊತ್ತಾಗಿದೆ. ಇದರಿಂದ ಹೆದರಿದ ಹುಡುಗ ಪತ್ನಿಯನ್ನು ಟ್ರಾಫಿಕ್ ನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ನವ ದಂಪತಿಗಳು ಮದುವೆಯಾದ ಮರುದಿನ ಚರ್ಚ್​ನಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುವ ಸಂದರ್ಭದಲ್ಲಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯವನ್ನು ಬಳಸಿಕೊಂಡ ವರ ಜಾರ್ಜ್ (ಹೆಸರು ಬದಲಾವಣೆ ಮಾಡಲಾಗಿದೆ) ಕಾರಿನ ಬಾಗಿಲು ತೆರೆದು ಓಡಿ ಹೋಗಿದ್ದಾನೆ. ಇದನ್ನು ಕಂಡು ಹೆಂಡತಿ ಕೂಡಾ ಅವನನ್ನು ಹಿಂಬಾಲಿಸಲು ಪ್ರಯತ್ನಿಸಿದಳು. ಆದರೆ ಆತನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆತ ಓಡಿ ಹೋದ ಬಳಿಕ ಮಾರ್ಚ್ 5ರಂದು ಆ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾಳೆ. ಗಂಡ ಅನೈತಿಕ ಸಂಬಂಧ ಹೊಂದಿದ್ದ ಹುಡುಗಿ, ಅವರಿಬ್ಬರು ಆತ್ಮೀಯವಾಗಿ ಇರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಭಯಗೊಂಡ ವರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಎರಡು ವಾರ ಕಳೆದರೂ ವರ ಇನ್ನೂ ಪತ್ತೆಯಾಗಿಲ್ಲ ಎಂದು ಪೋಲಿಸರು ತಿಳಿಸಿದ್ದಾರೆ.

22 ವರ್ಷ ವಯಸ್ಸಿನ ನವ ವಧುವಿನ ಪ್ರಕಾರ, ಆಕೆಯ ಗಂಡ ಜಾರ್ಜ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದವರಾಗಿದ್ದು, ಕರ್ನಾಟಕ ಮತ್ತು ಗೋವಾದಲ್ಲಿ ಕಂಪೆನಿಯನ್ನು ನಡೆಸಿಕೊಂಡು ಹೋಗಲು ತನ್ನ ತಂದೆಗೆ ಸಹಾಯ ಮಾಡುತ್ತಿದ್ದನು. ಅವರು ಗೋವಾದಲ್ಲೇ ಇದ್ದು ಕಂಪೆನಿಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿ ಜಾರ್ಜ್ ಅಕ್ರಮ ಸಂಬಂಧವನ್ನು ಹೊಂದಿದ್ದ. ಇವರಿಬ್ಬರ ಮದುವೆ ನಿಶ್ಚಯವಾದಾಗ ಅಕ್ರಮ ಸಂಬಂಧವನ್ನು ಕೊನೆಗೊಳಿಸುವುದಾಗಿ ಜಾರ್ಜ್ ಹೆಂಡತಿಗೆ ಹೇಳಿದ್ದಾನೆ. ಆದರೂ ತನ್ನ ಗಂಡ ಮತ್ತೆ ಆಕೆಯನ್ನು ಭೇಟಿಯಾಗುತ್ತಿದ್ದ ಎಂದು ಪತ್ನಿ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com