ನಮ್ಮ ಮೆಟ್ರೋ ಮಾರ್ಗಗಳಲ್ಲಿ ಸುರಕ್ಷತೆ ಕ್ರಮಗಳ ಕುರಿತು IISc ತಂಡದಿಂದ ಪರಿಶೀಲನೆ!
ಮುಂಬರುವ ಮೂರು ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಬಿಎಂಆರ್ಸಿಎಲ್ IISc ಯ ತಂಡವೊಂದನ್ನು ನಿಯೋಜಿಸಿದೆ.
Published: 11th March 2023 03:31 PM | Last Updated: 11th March 2023 04:50 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುಂಬರುವ ಮೂರು ಮಾರ್ಗಗಳ ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಬಿಎಂಆರ್ಸಿಎಲ್ IISc ಯ ತಂಡವೊಂದನ್ನು ನಿಯೋಜಿಸಿದೆ.
ಕಳೆದ ಬುಧವಾರದಿಂದಲೇ ಕೆಲಸ ಆರಂಭಿಸಿರುವ ತಂಡ 75 ದಿನಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ. ನಿರ್ಮಾಣ ಹಂತದಲ್ಲಿರುವ ಹೊರ ವರ್ತುಲ ರಸ್ತೆ ಮಾರ್ಗ (ಕೆಆರ್ ಪುರಂನಿಂದ ಸಿಲ್ಕ್ ಬೋರ್ಡ್), ವಿಮಾನ ನಿಲ್ದಾಣ ಮಾರ್ಗ (ಕೆಆರ್ ಪುರಂನಿಂದ ಕೆಐಎ) ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಸುರಂಗ ಕಾರಿಡಾರ್ಗಳನ್ನು ಮೂವರು ಸದಸ್ಯರ ತಂಡ ಪರಿಶೀಲಿಸಲಿದೆ.
ಕಳೆದ ಜನವರಿ 10ರಂದು ನಾಗವಾರದ ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ವೊಂದು ಮಹಿಳೆ ಮತ್ತು ಆಕೆಯ ಮಗನ ಮೇಲೆ ಬಿದ್ದು ಸಾವನ್ನಪ್ಪಿದ್ದರು. ಅಲ್ಲದೆ ಬಿಎಂಆರ್ಸಿಎಲ್ನ ಬ್ಯಾರಿಕೇಡ್ಗಳು ಮತ್ತು ಸಿಂಕ್ಹೋಲ್ಗಳನ್ನು ಒಳಗೊಂಡ ಸಣ್ಣ ಅಪಘಾತಗಳು ಕಳೆದ ತಿಂಗಳು ಸಂಭವಿಸಿತ್ತು. ಇದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಈ ಉಪಕ್ರಮವನ್ನು ಕೈಗೊಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ: ಕಬ್ಬಿಣದ ತುಂಡು ಬಿದ್ದು ಕಾರು ಜಖಂ
ತಂಡದ ಸದಸ್ಯರು: ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಜೆ.ಎಂ.ಚಂದ್ರ ಕಿಶನ್, ಸುಸ್ಥಿರ ತಂತ್ರಜ್ಞಾನಗಳ ಕೇಂದ್ರದ ಸಹ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ರಾವ್ ಮತ್ತು ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಈ ಹಿಂದೆ ಕೆಲಸ ಮಾಡಿದ ರಮೇಶ್ ಬಾಬು ನಾರಾಯಣಪ್ಪ ಪರಿಶೀಲನೆ ನಡೆಸಲಿದ್ದಾರೆ.
ಪ್ರೊ.ಕಿಶನ್ ಮಾತನಾಡಿ, ಮೆಟ್ರೊ ನಿರ್ಮಾಣದ ಸ್ಥಳಗಳಲ್ಲಿ ಬ್ಯಾರಿಕೇಡಿಂಗ್ ಸೇರಿದಂತೆ ಎಲ್ಲ ಸುರಕ್ಷತಾ ಅಂಶಗಳನ್ನು ಪರಿಶೀಲಿಸುತ್ತೇವೆ. ನಾವು ಒದಗಿಸಿದ ಮಾರ್ಗಸೂಚಿಗಳನ್ನು ಅಧ್ಯಯನ ಮಾಡುತ್ತೇವೆ ಮತ್ತು ಗುತ್ತಿಗೆದಾರರು ಅವುಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುತ್ತೇವೆ. ಸೈಟ್ಗಳಲ್ಲಿ ಟ್ರಾಫಿಕ್ ದೃಶ್ಯ ಮತ್ತು ಹತ್ತಿರದ ಜಂಕ್ಷನ್ಗಳನ್ನು ಸಹ ವಿವರವಾಗಿ ಪರಿಶೀಲಿಸಲಾಗುವುದು ಎಂದರು.