ಸೂಚನೆ ನೀಡದೆ ಏಕಾಏಕಿ ವಿಮಾನಗಳ ಹಾರಾಟ ರದ್ದುಪಡಿಸಿದ ಗೋ ಫಸ್ಟ್: ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರಿಗೆ ಸಮಸ್ಯೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಗೋಫಸ್ಟ್ ವಿಮಾನ ಹಾರಾಟ ಹಠಾತ್ ರದ್ದಾಗಿದ್ದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ನಂತರ ಸಂಜೆಯ ವೇಳೆಗೆ ಏರ್‌ಲೈನ್‌ನಿಂದ ಅಧಿಕೃತ ಹೇಳಿಕೆ ಬಂತು.
ಗೋ ಫಸ್ಟ್
ಗೋ ಫಸ್ಟ್

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಗೋಫಸ್ಟ್ ವಿಮಾನ ಹಾರಾಟ ಹಠಾತ್ ರದ್ದಾಗಿದ್ದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಯಿತು. ನಂತರ ಸಂಜೆಯ ವೇಳೆಗೆ ಏರ್‌ಲೈನ್‌ನಿಂದ ಅಧಿಕೃತ ಹೇಳಿಕೆ ಬಂತು. ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದ್ದು ಇದರಿಂದಾಗಿ ಇಂದು ಮೇ 3, ನಾಳೆ 4 ಮತ್ತು ನಾಡಿದ್ದು 5 ರಂದು ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ ಎಂಬ ಹೇಳಿಕೆ ಬಂತು. 

ಟರ್ಮಿನಲ್ ಒಂದರಿಂದ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿದಿನ ಸರಾಸರಿ 15 ವಿಮಾನಗಳು ನಿರ್ಗಮಿಸುತ್ತವೆ. ನಿನ್ನೆ ಮಧ್ಯಾಹ್ನ 2.15ರಿಂದ ಸಂಜೆ 5.15ರವರೆಗೆ ಐದು ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಲಕ್ನೋ (G8 808), ವಾರಣಾಸಿ (G8 407), ಗೋವಾ (G8 542), ಕೊಚ್ಚಿ (G8 542) ಮತ್ತು ಅಹಮದಾಬಾದ್ (G8 803) ಗೆ ವಿಮಾನಗಳು ಟೇಕ್ ಆಫ್ ಆಗಲಿಲ್ಲ. ನಿನ್ನೆ ಬೆಳಗಿನ ವಿಮಾನ, G8 802 ಪೋರ್ಟ್ ಬ್ಲೇರ್‌ಗೆ 10.50 ಕ್ಕೆ ಹೊರಡಬೇಕಾಗಿತ್ತು, ಅದನ್ನು ಸಹ ರದ್ದುಗೊಳಿಸಲಾಯಿತು.

ಹಲವು ಪ್ರಯಾಣಿಕರು ಸಿಟ್ಟು, ಕೋಪಗಳಿಂದ ಕೂಗಾಡುತ್ತಿದ್ದುದು, ಕಿರುಚಾಡುತ್ತಿದ್ದುದು ಕಂಡುಬಂತು. ಹಠಾತ್ ಈ ರೀತಿ ವಿಮಾನ ಹಾರಾಟ ರದ್ದುಗೊಂಡಿರುವುದು ಸಾರ್ವಜನಿಕರಲ್ಲಿ ಗೊಂದಲವುಂಟುಮಾಡಿದ್ದಲ್ಲದೆ ತೊಂದರೆಯುಂಟಾಯಿತು. ಸಾರ್ವಜನಿಕರು ವಿಮಾನಯಾನ ಸಿಬ್ಬಂದಿ ಬಳಿ ಹೋಗಿ ಸರಿಯಾದ ಕಾರಣ ಕೇಳಿದ್ದಲ್ಲದೆ ವಿಮಾನ ಟಿಕೆಟ್ ದರದ ಮರುಪಾವತಿಗೆ ಒತ್ತಾಯಿಸಿದರು. 

ಏರ್‌ಲೈನ್‌ನ ವಕ್ತಾರರಲ್ಲಿ ಕೇಳೋಣವೆಂದು ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ ಸಂದೇಶಗಳಿಗೂ ಉತ್ತರಿಸಲಿಲ್ಲ, ಮೇಲ್ ಕಳುಹಿಸುವಂತೆ ಸೂಚಿಸಿದರು. 

ಸ್ನೇಹಿತನ ವಿವಾಹದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ರೋಷನ್ ಕುಮಾರ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ನಾನು ಇಂದು ಬುಧವಾರಕ್ಕೆ ಟಿಕೆಟ್ ಬುಕ್ ಮಾಡಿದ್ದೆ. ಈಗ ರದ್ದುಪಡಿಸಬೇಕಾಗಿ ಬಂತು. ಏಪ್ರಿಲ್ 29 ರಂದು 6,900 ರೂಪಾಯಿಗೆ ಟಿಕೆಟ್ ಬುಕ್ ಮಾಡಿದೆ. ಮರುದಿನ, ನನ್ನ ವಿಮಾನದ ಸಮಯವನ್ನು ಬೆಳಿಗ್ಗೆ 9.15 ರಿಂದ 11 ಕ್ಕೆ ಬದಲಾಯಿಸಲಾಗಿದೆ ಎಂದು ನನಗೆ ಮೇಲ್ ಬಂದಿತು. ಈಗ ಅದನ್ನು ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ನಾನು ಈಗ 8,900 ರೂಪಾಯಿಗೆ ಕೊನೆಯ ನಿಮಿಷದ ಟಿಕೆಟ್ ಖರೀದಿಸಿದೆ. 30 ನಿಮಿಷಗಳ ಕಾಲ ಪ್ರಯತ್ನಿಸಿದ ನಂತರ, ನಾನು ಅವರ ಕಾಲ್ ಸೆಂಟರ್ ನ್ನು ತಲುಪಲು ಸಾಧ್ಯವಾಯಿತು ನನ್ನ ಮೂಲ ಟಿಕೆಟ್ ದರವನ್ನು ಪಾವತಿ ಮಾಡುತ್ತಾರೆ ಎಂದು ಹೇಳಿದ್ದಾರೆ ಆದರೆ ಯಾವಾಗ ಸಿಗುತ್ತದೆ ಎಂಬ ಬಗ್ಗೆ ವಿವರಗಳಿಲ್ಲ ಎಂದರು.

ಗೋ ಫ್ಲೈಯರ್ಸ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಗೋಫಸ್ಟ್ ಏರ್‌ಲೈನ್ಸ್‌ನ ಸ್ಥಿತಿ ಚಿಂತಾಜನಕ. ನನ್ನ ತಂದೆಯ ಹೃದಯ ಚಿಕಿತ್ಸೆಗಾಗಿ ಕರೆದುಕೊಂಡು ಬರಲು ಕೊಚ್ಚಿಯಿಂದ ಬೆಂಗಳೂರಿಗೆ ಎರಡು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದೆ, ವಿಮಾನ ರದ್ದುಗೊಂಡವು. ಎಲ್ಲಾ ಗ್ರಾಹಕ ಸೇವಾ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ, ತಲುಪಲು ಸಾಧ್ಯವಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕರು ತಮ್ಮ ಸಂಕಷ್ಟದ ಬಗ್ಗೆ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com