ಬೆಂಗಳೂರು: ವಿಮಲ್ ಸೇರಿದಂತೆ ಇನ್ನಿತರ ಪಾನ್ ಮಸಾಲ (ತಂಬಾಕು ಉತ್ಪನ್ನ) ಜಾಹೀರಾತು ತೆರವುಗೊಳಿಸುವಂತೆ ಆಗ್ರಹಗಳು ವ್ಯಕ್ತವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಬಸ್ ಗಳ ಮೇಲಿನ ತಂಬಾಕು ಜಾಹೀರಾತುಗಳ ಕೈಬಿಡುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ನಿಗಮಕ್ಕೆ ಸೂಚನೆ ನೀಡಿದೆ.
ಸಾರಿಗೆ ಬಸ್'ಗಳ ಮೇಲೆ ತಂಬಾಕು ಜಾಹೀರಾತುಗಳ ಪ್ರಕಟಿಸಲಾಗುತ್ತಿದೆ ಎಂದು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿತ್ತು.
ವರದಿ ಬೆನ್ನಲ್ಲೇ ಯುವಕರ ಹಾದಿ ತಪ್ಪಿಸುವ ಜಾಹೀರಾತುಗಳ ಪ್ರಕಟಿಸದಂತೆ ಸಾರಿಗೆ ಸಂಸ್ಧೆಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.
ಮೇ 4ರಂದು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು, ಕೆಎಸ್'ಆರ್'ಟಿಸಿ ಮತ್ತು ಬಿಎಂಟಿಸಿ ಎಂಡಿಗಳಿಗೆ ಪತ್ರ ಬರೆದಿದ್ದು, “ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ವಿಮಲ್, ಕೂಲ್ ಲಿಪ್ ಮತ್ತು ಆರ್ಎಮ್ಡಿಯಂತಹ ಬ್ರ್ಯಾಂಡ್ಗಳ ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತುಗಳನ್ನು ಹಾಕಿರುವುದು ನಮ್ಮ ಗಮನಕ್ಕೆ ಬಂದಿದೆ. ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು COTPA ನ ಸೆಕ್ಷನ್ 5 ಮತ್ತು ವಿಶ್ವ ಆರೋಗ್ಯ ಸಂಸ್ಥೆಯ FCTC ಆರ್ಟಿಕಲ್ 5.3 ರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇಂತಹ ಜಾಹೀರಾತುಗಳು ಯುವಕರು ಹಾಗೂ ಮಕ್ಕಳನ್ನು ಹಾದಿ ತಪ್ಪಿಸಲಿವೆ. ಹೀಗಾಗಿ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ.
Advertisement