ಸ್ತ್ರೀರೋಗ ತಜ್ಞರು, ಫೈನಾನ್ಶಿಯರ್‌ಗಳನ್ನು ಗುರಿಯಾಗಿಸಿಕೊಂಡು ಹಣ ಸುಲಿಗೆಗೆ ಸಂಚು ರೂಪಿಸಿದ್ದ ಗ್ಯಾಂಗ್‌ ಬಂಧನ

ಕಲಬುರಗಿಯಲ್ಲಿ ಸ್ತ್ರೀರೋಗ ತಜ್ಞರೊಬ್ಬರ ಕೊಲೆ ಯತ್ನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ರಾಜ್ಯದ ಸ್ತ್ರೀರೋಗ ತಜ್ಞರು, ಫೈನಾನ್ಶಿಯರ್‌ಗಳನ್ನು ಗುರಿಯಾಗಿಸಿಕೊಂಡು ಅವರಿಂದ ಭಾರಿ ಹಣ ಸುಲಿಗೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಲಬುರಗಿ: ಕಲಬುರಗಿಯಲ್ಲಿ ಸ್ತ್ರೀರೋಗ ತಜ್ಞರೊಬ್ಬರ ಕೊಲೆ ಯತ್ನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಆರೋಪಿಗಳು ರಾಜ್ಯದ ಸ್ತ್ರೀರೋಗ ತಜ್ಞರು, ಫೈನಾನ್ಶಿಯರ್‌ಗಳನ್ನು ಗುರಿಯಾಗಿಸಿಕೊಂಡು ಅವರಿಂದ ಭಾರಿ ಹಣ ಸುಲಿಗೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ಸರ್ಫುದ್ದೀನ್ ಮತ್ತು ಕಮರುದ್ದೀನ್ ಎಂದು ಗುರುತಿಸಲಾಗಿದೆ.

ಹಣವನ್ನು ಸುಲಿಗೆ ಮಾಡಲು ರಾಜ್ಯದ ಎಲ್ಲಾ ಪ್ರಸಿದ್ಧ ಮತ್ತು ಯಶಸ್ವಿ ಸ್ತ್ರೀರೋಗ ತಜ್ಞರು ಮತ್ತು ಫೈನಾನ್ಶಿಯರ್‌ಗಳ ವಿವರಗಳನ್ನು ಸಂಗ್ರಹಿಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. 

ಆರೋಪಿಗಳು ಹೆಚ್ಚಿನ ಶುಲ್ಕ ವಿಧಿಸುವ ಸ್ತ್ರೀರೋಗ ತಜ್ಞರು ಮತ್ತು ಭಾರಿ ಬಡ್ಡಿ ವಿಧಿಸುವ ಫೈನಾನ್ಶಿಯರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು.

ಕಲಬುರಗಿಯ ಖ್ಯಾತ ಸ್ತ್ರೀರೋಗ ತಜ್ಞ ಜಯಪ್ರಕಾಶ ಪಾಟೀಲರನ್ನು ಗುರಿಯಾಗಿಸಿಕೊಂಡು ಈ ಗ್ಯಾಂಗ್ ಯೋಜನೆ ರೂಪಿಸಿತ್ತು. ಪಾಟೀಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಅವರನ್ನು ಟಾರ್ಗೆಟ್ ಮಾಡಿದರೆ ಅದು ಇತರರಲ್ಲಿಯೂ ಭಯ ಸೃಷ್ಟಿಸುತ್ತದೆ ಎಂದು ಆರೋಪಿಗಳು ಭಾವಿಸಿದ್ದರು.

ಪಾಟೀಲರ ಚಲನವಲನಗಳನ್ನು ಒಂದು ತಿಂಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ ತಂಡ ಜೂನ್‌ನಲ್ಲಿ ಅವರಿಗೆ ಕರೆ ಮಾಡಿತ್ತು. ಈ ವೇಳೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಗ್ಯಾಂಗ್, 30,000 ಡಾಲರ್‌ಗಳನ್ನು ತಮ್ಮ ಖಾತೆಗಳಿಗೆ ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಜಮೆ ಮಾಡುವಂತೆ ಒತ್ತಾಯಿಸಿದ್ದರು.

ವೈದ್ಯ ಪಾಟೀಲ್ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 31 ರಂದು, ಕಾರಿನಲ್ಲಿ ಹೋಗುತ್ತಿದ್ದಾಗ, ವೈದ್ಯರನ್ನು ಅಡ್ಡಗಟ್ಟಲಾಗಿತ್ತು ಮತ್ತು ನಗರದ ಹೊರವಲಯದಲ್ಲಿರುವ ಸಾಥ್ ಮೈಲ್ ಪ್ರದೇಶದ ಬಳಿ ಅವರ ಮೇಲೆ ಗುಂಡು ಹಾರಿಸಲಾಯಿತು. ಆದರೆ, ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

ಆರೋಪಿಗಳು ಭೂಗತ ಲೋಕದಲ್ಲಿ ಹೆಸರು ಗಳಿಸಿ ಹಣ ಸಂಪಾದಿಸಲು ಬಯಸಿದ್ದರು. ಕಲಬುರಗಿಯಲ್ಲಿ ಮತ್ತೊಂದು ಗ್ಯಾಂಗ್ ಕಾರ್ಯಾಚರಿಸುತ್ತಿದ್ದರಿಂದ ರಾಯಚೂರನ್ನು ಅಪರಾಧ ಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದರು ಎಂದು ಬಳ್ಳಾರಿ ರೇಂಜ್ ಐಜಿ ಲೋಕೇಶ್ ಕುಮಾರ್ ತಿಳಿಸಿದ್ದಾರೆ. 

ಸರ್ಫುದ್ದೀನ್ ಕ್ರಿಪ್ಟೋ ಕರೆನ್ಸಿ ವಿಷಯಗಳಲ್ಲಿ ಪರಿಣತಿ ಹೊಂದಿದ್ದ. ಅಪರಾಧ ಮಾಡಲು ಬೇರೆ ರಾಜ್ಯದಿಂದ ದೇಶಿ ನಿರ್ಮಿತ ಪಿಸ್ತೂಲ್ ಅನ್ನು ಖರೀದಿಸಲಾಗಿತ್ತು. ವೈದ್ಯ ಪಾಟೀಲ ಹತ್ಯೆ ಮಾಡುವ ಉದ್ದೇಶದಿಂದ ಆರೋಪಿಗಳು ಗುಂಡು ಹಾರಿಸಿದ್ದಾರೆ. ಆರೋಪಿಗಳು ಪಾಟೀಲರ ಕಾರಿಗೆ ಗುಂಡು ಹಾರಿಸಿದ್ದರು. ಆದರೆ, ಅದೃಷ್ಟವಶಾತ್ ಗುಂಡುಗಳು ಕಾರಿನ ಬಾನೆಟ್‌ಗೆ ತಗುಲಿದ್ದವು ಎಂದು ಅವರು ವಿವರಿಸಿದರು.

ಈ ಸಂಬಂಧ ರಾಯಚೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com