10 ಕೋಟಿ ರೂ ವೆಚ್ಚದಲ್ಲಿ ಆನೇಕಲ್ನಲ್ಲಿ ಕ್ರೀಡಾಂಗಣ ನಿರ್ಮಾಣ: ಡಿಸಿಎಂ ಡಿಕೆ ಶಿವಕುಮಾರ್
10 ಕೋಟಿ ರೂಪಾಯಿ ವೆಚ್ಚದಲ್ಲಿ ಆನೇಕಲ್ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
Published: 26th September 2023 01:17 PM | Last Updated: 26th September 2023 06:16 PM | A+A A-

ಆನೇಕಲ್ ನಲ್ಲಿ ಡಿಕೆ ಶಿವಕುಮಾರ್
ಬೆಂಗಳೂರು: 10 ಕೋಟಿ ರೂಪಾಯಿ ವೆಚ್ಚದಲ್ಲಿ ಆನೇಕಲ್ನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆನೇಕಲ್ನಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅವರು, 'ಅತ್ತಿಬೆಲೆ, ಸರ್ಜಾಪುರ ಭಾಗಕ್ಕೆ ಕಾವೇರಿ ನೀರು ಮತ್ತು ಮೆಟ್ರೋ ಯೋಜನೆ ವಿಸ್ತರಣೆ ಮಾಡಲಾಗುವುದು. ಅತ್ತಿಬೆಲೆ ಮತ್ತು ಸರ್ಜಾಪುರ ಅಭಿವೃದ್ಧಿ ಹೊಂದುತ್ತಿದ್ದು, ಕೈಗಾರಿಕಾ ಪ್ರದೇಶಗಳಾಗಿ ಬೆಳವಣಿಗೆ ಕಾಣುತ್ತಿವೆ. ಈ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆ. ಆನೇಕಲ್ಗೆ ಸ್ಟೇಡಿಯಂ ಬೇಕು ಎಂದು ಶಾಸಕರಾದ ಶಿವಣ್ಣ ಮನವಿ ಮಾಡಿದ್ದರು, ಅದರಂತೆ 10 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಮೂಲಸೌಕರ್ಯಗಳಿಗೆ ನಮ್ಮ ಸರ್ಕಾರದಲ್ಲಿ ಮೊದಲ ಆದ್ಯತೆ' ಎಂದು ಹೇಳಿದರು.
ಇದನ್ನೂ ಓದಿ: ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಅಭೂತಪೂರ್ವ ಸ್ಪಂದನೆ: ಸಾರ್ವಜನಿಕರಿಂದ 6,684 ಅಹವಾಲು ಸಲ್ಲಿಕೆ
ಜನತಾ ದರ್ಶನದಲ್ಲಿ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಬಗರ್ಹುಕುಂ, ಸ್ಮಶಾನ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ತೊಂದರೆಗಳನ್ನು ಜನತಾ ದರ್ಶನದ ಮೂಲಕ ಪ್ರತಿ ತಿಂಗಳು ಬಗೆಹರಿಸುತ್ತೇವೆ. ಅನೇಕಲ್ನಲ್ಲಿ ತಹಸೀಲ್ದಾರ್ ನ್ಯಾಯಾಲಯ ಆಗಬೇಕು ಎಂದು ಮನವಿ ಮಾಡಿದ್ದಾರೆ, ಪ್ರತಿ ವಾರ ಇಲ್ಲಿಯೇ ಕೋರ್ಟ್ ನಡೆಸುವಂತೆ ಸೂಚನೆ ನೀಡಿದ್ದೇನೆ. 136 ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದೀರಿ. ಅದಕ್ಕೆ ನಾವು ನಿಮ್ಮ ಋಣ ತೀರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದರು.
ಆನೇಕಲ್ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ "ಜನತಾದರ್ಶನ" ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಸರ್ಕಾರವನ್ನೇ ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ಜನತಾ ದರ್ಶನ ನಡೆಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಇಂದಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀನು ವಿಚಾರ, ರಸ್ತೆ ಸಮಸ್ಯೆ, ಮೂಲ ಸೌಕರ್ಯ ಕೊರತೆ… pic.twitter.com/MLXBQVvT1G
— DK Shivakumar (@DKShivakumar) September 25, 2023
ರಾಜ್ಯಕ್ಕೆ ಮಳೆ ಬೀಳಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿ. ಕಾವೇರಿ ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಯಲ್ಲಿ ಜನರು ಭಾಗವಹಿಸಬಾರದು, ಶಾಂತಿಯುತವಾಗಿ ತಮ್ಮ ಆಗ್ರಹವನ್ನು ತಿಳಿಸಬೇಕು ಎಂದು ಮನವಿ ಮಾಡಿದರು. ಗೃಹಲಕ್ಷ್ಮೀ 2 ಸಾವಿರ ಸಹಾಯಧನ ಯೋಜನೆಯ ಪ್ರಯೋಜನ ಪಡೆದ ಮಹಿಳೆಯರಿಗೆ ಫಲಾನುಭವಿ ಪತ್ರ ವಿತರಣೆ ಮಾಡಲಾಯಿತು.ಬೆಂಗಳೂರು ನಗರ ಜಿಲ್ಲೆಯಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ 10ಕೋಟಿ ರೂ. ಅನುದಾನ ಮಂಜೂರು ಮಾಡಲಾಗುವುದು ಹಾಗೂ ಇದರ ಸಂಬಂಧವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಡಿ. ಕೆ ಶಿವಕುಮಾರ್ ಭರವಸೆ ನೀಡಿದರು.
ಇದನ್ನೂ ಓದಿ: ದಕ್ಷತೆಯಿಂದ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ, ಇಲ್ಲವೇ ಜಾಗ ಖಾಲಿ ಮಾಡಿ: ಅಧಿಕಾರಿಗಳಿಗೆ ಡಿಸಿಎಂ ವಾರ್ನಿಂಗ್
ಆನೇಕಲ್ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲು ಶಾಸಕರು ಮತ್ತು ಸಂಸದರು ಮನವಿ ಮಾಡಿದ್ದು. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕಾವೇರಿ ನೀರು ಪೂರೈಕೆ ಮಾಡಲಾಗುವುದು. ಜನತಾ ದರ್ಶನದಲ್ಲಿ ಸರ್ವಜನಿಕರು ನೀಡಿರುವ ಎಲ್ಲಾ ಅರ್ಜಿಗಳ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು, ಆನೇಕಲ್ಗೆ ವಕೀಲ ಸಂಘದ ವತಿಯಿಂದ ಬೇಡಿಕೆಯನ್ನು ಸಲ್ಲಿಸಿದ್ದು ಎಸಿ ಕೋರ್ಟ್ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಆನೇಕಲ್ನಲ್ಲಿ ರಸ್ತೆ, ಕುಡಿಯುವ ನೀರಿನ ಅಗತ್ಯತೆ, ಸಾರ್ವಜನಿಕ ಶೌಚಾಲಯ, ಸ್ಮಶಾನ ಮತ್ತಿತರ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಪಕ್ಷದ ಪ್ರಣಾಳಿಕೆಯಲ್ಲಿ ನಮೂದಿಸಿದ್ದ ಖಾತರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ ಎಂದರು. ಈ ಸಂದರ್ಭದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಕೆಲವು ಆಯ್ದ ಫಲಾನುಭವಿಗಳಿಗೆ 2,000 ರೂ ಚೆಕ್ ವಿತರಿಸಲಾಯಿತು. ಬಿಜೆಪಿ ಏನಾದರೂ ನೀಡಿದೆಯೇ? ಕಾಂಗ್ರೆಸ್ ಏನು ಹೇಳುತ್ತದೋ ಅದನ್ನು ಮಾಡಲಿದೆ ಎಂದು ಶಿವಕುಮಾರ್ ಹೇಳಿದರು.