ಬೆಂಗಳೂರು: ಮಹಿಳೆಯೊಬ್ಬರಿಗೆ ಅವಾಚ್ಯ ಪದ ಬಳಕೆ ಆರೋಪದ ಮೇರೆಗೆ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಕಾಮಿಡಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶಿವರಾಜ್ ಕೆ.ಆರ್. ಪೇಟೆ ವಿರುದ್ಧ ನಗರದ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾರದಾ ಬಾಯಿ ಎಂಬ ಮಹಿಳೆ ದೂರು ದಾಖಲಿಸಿದ್ದು, ತನ್ನ ವಿರುದ್ಧ ಅವಾಚ್ಯ ಪದದಿಂದ ನಿಂದಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಾರ್ಚ್ 30ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ತನ್ನನ್ನು ʻಯಾವಳೆ ನೀನು? ಎಂದು
ಕರೆದು ಅವಮಾನ ಮಾಡಿರುವ ಶಿವರಾಜ್ ಕೆ.ಆರ್. ಪೇಟೆ ಅವರನ್ನು ಠಾಣೆಗೆ ಕರೆದು, ಸೂಕ್ತ ಕ್ರಮ ತಗೆದುಕೊಳ್ಳುವಂತೆ ಮಹಿಳೆ ಕೋರಿದ್ದಾರೆ.
ಏನಿದು ದೂರು: ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ನ ಹಿಂಭಾಗದ ಪೆಟ್ರೋಲ್ ಬಂಕ್ ಹತ್ತಿರ ಶಿವರಾಜ್ ಕೆ ಆರ್ ಪೇಟೆ ಅವರು ಕಾರನ್ನು ನನ್ನ ಕಾರಿಗೆ ಟಚ್ ಮಾಡಿದರು. ಅಲ್ಲದೇ ಯಾವಳೆ ನೀನು? ಅಲ್ಲಾಡಿಸಿಕೊಂಡು ಹೋಗ್ತಿಯಾ! ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಶಾರದಾ ಬಾರಿ ದೂರಿನ ಅನ್ವಯ ಎನ್ ಸಿಆರ್ ದಾಖಲಿಸಿಕೊಂಡ ಪೊಲೀಸರು, ಶಿವರಾಜ್ ಕೆ.ಆರ್. ಪೇಟೆ ಮಹಿಳೆಯನ್ನೂ ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement