ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಯ ಸದಸ್ಯತ್ವದ ಹೆಸರಲ್ಲಿ ಕೋಟ್ಯಂತರ ರೂ ವಂಚನೆ ಮಾಡುತ್ತಿದ್ದ ಗ್ಯಾಂಗ್ ವೊಂದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಯ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಬರೊಬ್ಬರಿ 4.30 ಕೋಟಿ ರೂ ಪಡೆದುಕೊಂಡು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಕಲಿ ಸಹಿಯಿರುವ ಸರ್ಕಾರದ ಟಿಪ್ಪಣಿ ನಡಾವಳಿ ಪತ್ರಗಳನ್ನು ನೀಡಿ ವಂಚಿಸಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ತಾವರೆಕರೆಯ ಭುವನಪ್ಪ ಲೇಔಟ್ ನ ರಿಯಾಜ್ ಅಹ್ಮದ್(41 ವರ್ಷ) ಮಲ್ಲೇಶ್ವರಂನ , 7ನೇ ಕ್ರಾಸ್ ನ ಯೂಸುಫ್ ಸುದ್ದಿಕಟ್ಟಿ(47) ಮೂಡಿಗೆರೆಯ ಚಂದ್ರಪ್ಪ.ಸಿ (44) ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯ ರುದ್ರೇಶ್ (35) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿ ಪೊಲೀಸ್ ಠಾಣೆಯಲ್ಲಿ ನೀಲಮ್ಮ ಎಂ ಅವರು ನೀಡಿರುವ ದೂರಿನಲ್ಲಿ ರಿಯಾಜ್ ಎಂಬುವರು ತನ್ನ ಸ್ನೇಹಿತರಾದ ಯೂಸಫ್, ಚೇತನ್ ಶಂಕರ್, ಚಂದ್ರಪ್ಪ, ಮಹೇಶ. ರುದ್ರೇಶ, ಹರ್ಷವರ್ಧನ ಸೇರಿ ಕೆಪಿಎಸ್ ಸಿ ಸದಸ್ಯತ್ವ ಕೊಡಿಸುವುದಾಗಿ,ಅದಕ್ಕೆ 5 ಕೋಟಿ ರೂ ಕೊಡಬೇಕಾಗುವುದಾಗಿ ನಂಬಿಸಿ ಹಂತಹಂತವಾಗಿ ಒಟ್ಟು 4.30 ಕೋಟಿ ರೂಗಳನ್ನು ನಗದಾಗಿ ಮತ್ತು ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ,ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಉಳಿದ ಆರೋಪಿಗಳ ಪತ್ತೆಗೆ ಶೋಧ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆರೋಪಿಗಳು ಹಣದಾಸೆಗೆ ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ, ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು, ಇನ್ನೂ ಕೆಲವು ವಂಚನೆ ನಡೆಸಿರುವ ಮಾಹಿತಿಯಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
Advertisement