ಬೆಂಗಳೂರು: ಟೈಮ್ ಕೆಟ್ಟರೆ ಹುಲ್ಲು ಕೂಡ ಹುಲಿಯಾಗುತ್ತದೆ ಎಂಬ ಮಾತಿದೆ.. ಇದಕ್ಕೆ ಇಂಬು ನೀಡುವಂತೆ ತನ್ನ ಪಾಡಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಕೋಲೆ ಬಸವ ಗುದ್ದಿದ್ದು, ಟ್ರಕ್ ಚಾಲಕ ಸಮಯ ಪ್ರಜ್ಞೆಯಿಂದ ಆತನ ಜೀವ ಉಳಿದಿದೆ.
ಹೌದು.. ಬೆಂಗಳೂರಿನಲ್ಲಿ ಮತ್ತೊಂದು ಆತಂಕಕಾರಿ ಅಪಘಾತ ಸಂಭವಿಸಿದ್ದು, ಇಲ್ಲಿ ಅಪಘಾತವಾಗಿರುವುದು ಯಾವುದೇ ವಾಹನದಿಂದಲ್ಲ.. ಬದಲಿಗೆ ಬೀದಿ ಬೀದಿ ಅಲೆಯುವ ಕೋಲೆ ಬಸವನಿಂದ... ಹೌದು.. ಬೈಕ್ ನಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಕೋಲೆ ಬಸವ ಏಕಾಏಕಿ ದಾಳಿ ಮಾಡಿದ್ದು, ಪವಾಡಸದೃಶವಾಗಿ ಬೈಕ್ ಸವಾರ ಬದುಕುಳಿದಿದ್ದಾನೆ.
ಕೋಲೆ ಬಸವನ ಅಟ್ಟಹಾಸ ಮತ್ತು ನೆಲಕ್ಕುರುಳಿದ ಬೈಕ್ ಸವಾರನ ಪ್ರಾಣ ಉಳಿಸಿದ ಟ್ರಕ್ ಚಾಲಕನ ಸಮಯ ಪ್ರಜ್ಞೆಯ ವಿಡಿಯೋ ಸಮೀಪ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಏನಿದು ಘಟನೆ?
ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ರಸ್ತೆಯ ಬದಿಯಲ್ಲಿ ಮಾಲಕಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಕೋಲೆಬಸವ, ಇದ್ದಕ್ಕಿದ್ದಂತೆ, ಯಾವುದೇ ಪ್ರಚೋದನೆಯಿಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಎಗರಿ ಗುದ್ದಿದೆ. ಬೈಕ್ ಪಲ್ಟಿ ಹೊಡೆದಿದ್ದು, ಸವಾರ ರಸ್ತೆಗೆ ಬಿದ್ದಿದ್ದಾರೆ.
ಪಕ್ಕದಲ್ಲಿ ಕ್ಯಾಂಟರ್ ಹಾದುಹೋಗುತ್ತಿದ್ದು, ಇನ್ನೇನು ಸವಾರನ ಮೇಲೆ ಹರಿದುಹೋಯಿತು ಎನ್ನುವಾಗಲೇ ಕ್ಷಣದಲ್ಲಿ ಕ್ಯಾಂಟರ್ ಚಾಲಕ ಥಟ್ಟನೆ ಬ್ರೇಕ್ ಹಾಕಿ ವಾಹನ ನಿಲ್ಲಿಸಿದ್ದಾನೆ. ಆ ಮೂಲಕ ಬೈಕ್ ಸವಾರ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ಬಸವ ಗುದ್ದಿದ್ದರಿಂದ ಬೈಕ್ ಸವಾರನಿಗೆ ಕೊಂಚ ಪೆಟ್ಟಾಗಿದ್ದು, ಹೆಚ್ಚೇನೂ ಗಂಭೀರವಾಗಿಲ್ಲ.
ಯಾವ ಘಟನೆ ಬಸವನ ಪ್ರಚೋದಿಸಿತು.. ಎಂದು ತಿಳಿಯುತ್ತಿಲ್ಲವಾದರೂ, ಕ್ಯಾಂಟರ್ ಚಾಲಕನ ಸಮಯ ಪ್ರಜ್ಞೆ ಮಾತ್ರ ಎಲ್ಲರ ಶ್ಲಾಘನೆಗೆ ಪಾತ್ರವಾಗುತ್ತಿದೆ.
Advertisement