ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಹಲ್ಲೆ, ಚಿನ್ನದ ಸರ ಕಸಿದು ದುಷ್ಕರ್ಮಿಗಳು ಪರಾರಿ
ಬೆಂಗಳೂರು: ಜೆಪಿ ನಗರ 7ನೇ ಹಂತದ ಬ್ರಿಗೇಡ್ ಮಿಲೇನಿಯಂ ರಸ್ತೆಯಲ್ಲಿ ಮಂಗಳವಾರ ಮುಂಜಾನೆ 54 ವರ್ಷದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿರುವ ಕಳ್ಳರು ಆಟೋದಲ್ಲಿ ಪರಾರಿಯಾಗಿದ್ದಾರೆ. 5.15 ರಿಂದ 5.30 ರ ನಡುವೆ ಆರ್ ವಸಂತಾ ಎಂಬುವವರು ಬೆಳಗಿನ ವಾಕ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಗ್ಯಾಂಗ್ನ ಇಬ್ಬರು ಆಟೋದಿಂದ ಕೆಳಗಿಳಿದು ಆಕೆಯ ಸರ ದೋಚಿಕೊಂಡು ದೂರದಲ್ಲಿ ನಿಂತಿದ್ದ ಆಟೋ ಕಡೆಗೆ ಓಡಲಾರಂಭಿಸಿದ್ದಾರೆ. ಆಕೆ ವಿರೋಧಿಸಲು ಮುಂದಾದಾಗ ಆರೋಪಿಗಳು ಹಿಂತಿರುಗಿ ಆಕೆಯ ಮುಖಕ್ಕೆ ಹೊಡೆದು ಆಟೋದಲ್ಲಿ ಪರಾರಿಯಾಗಿದ್ದಾರೆ. ದಾಳಿಯಿಂದಾಗಿ ವಸಂತ ಅವರ ಹಲ್ಲು ಸಂಪೂರ್ಣ ಮುರಿದಿದೆ. ಬಾಯಿಯಿಂದ ರಕ್ತ ಬರುತ್ತಿದ್ದ ಆಕೆಯನ್ನು ಕಾಲೇಜು ವಿದ್ಯಾರ್ಥಿಗಳು ಬೈಕ್ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಜೆಪಿ ನಗರ 7ನೇ ಹಂತದ ನವೋದಯ ನಗರದ ನಿವಾಸಿ ವಸಂತ ಎಂಬುವವರು ಗೃಹಿಣಿಯಾಗಿದ್ದು, ಕಳೆದ ಐದು ವರ್ಷಗಳಿಂದ ಬೆಳಗಿನ ನಡಿಗೆಯಲ್ಲಿ ಇದೇ ಮಾರ್ಗದಲ್ಲಿ ತೆರಳುತ್ತಿದ್ದರು.
'ಸಂತ್ರಸ್ತೆಯ ಇತರ ಹಲ್ಲುಗಳು ಸಹ ಹಾನಿಗೊಳಗಾಗಿವೆ ಮತ್ತು ಅದನ್ನು ತೆಗೆದುಹಾಕಬೇಕಾಗಿದೆ. ಹಿಂದಿನಿಂದ ಬಂದ ಆರೋಪಿಗಳಲ್ಲಿ ಒಬ್ಬಾತ ಆಕೆಯನ್ನು ಹಿಡಿದುಕೊಂಡರೆ, ಮತ್ತೋರ್ವ ಸರ ಕಸಿದುಕೊಂಡಿದ್ದಾನೆ. ಹತ್ತಿರದ ಟ್ಯೂಷನ್ ಸೆಂಟರ್ಗೆ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಂತ್ರಸ್ತೆಯನ್ನು ತಮ್ಮ ಬೈಕ್ನಲ್ಲಿ ಪೊಲೀಸ್ ಠಾಣೆಗೆ ಕರೆತಂದರು' ಎಂದು ಅಧಿಕಾರಿಯೊಬ್ಬರು ಹೇಳಿದರು.
ದೂರು ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಆರೋಪಿಗಳು ಪರಾರಿಯಾದ ಆಟೋ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ದಾಳಿಕೋರರೊಬ್ಬರ ಮುಖವನ್ನು ವಸಂತ ಅವರು ನೋಡಿದ್ದು, ಆರೋಪಿಗಳ ಸುಳಿವು ಸಿಗುವ ನಿರೀಕ್ಷೆಯಲ್ಲಿ ಪೊಲೀಸರು ಆಕೆಗೆ ದರೋಡೆಕೋರರ ಚಿತ್ರಗಳನ್ನು ತೋರಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.