ಬೆಂಗಳೂರು: ಐಟಿ ರಾಜಧಾನಿ ಬೆಂಗಳೂರಿನ ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೆಂಗೇರಿ ಸಮೀಪ ಕೊಮ್ಮಘಟ್ಟ ಸರ್ಕಲ್ ಅರುಣಾಚಲಂ ರಸ್ತೆಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ.
ಜೆ.ಜೆ.ನಗರದ ಸದ್ದಾಂ ಪಾಷಾ ಎಂಬ 20 ವರ್ಷದ ಯುವಕ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಆತನ ಜೊತೆಗೆ ಬೈಕ್ ನಲ್ಲಿದ್ದ ಮತ್ತಿಬ್ಬರು ಉಮ್ರಾನ್ ಪಾಷಾ ಮತ್ತು ಮುಬಾರಕ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದೇನು?: ಜಲಮಂಡಳಿ ಸಿಬ್ಬಂದಿ ಪೈಪ್ ಅಳವಡಿಸಲು ಗುಂಡಿ ತೋಡಿದ್ದರು. ರಾತ್ರಿ ವೇಳೆ ಮೂವರು ಯುವಕರು ಬೈಕ್ ನಲ್ಲಿ ಕುಳಿತುಕೊಂಡು ವೇಗವಾಗಿ ಬಂದಿದ್ದರಿಂದ ರಭಸಕ್ಕೆ ಬೈಕ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಗುಂಡಿಗೆ ಬಿದ್ದಿದ್ದಾರೆ. ಮೃತ ಯುವಕ ಸದ್ದಾಂ ಪಾಷಾ ಸಂಬಂಧಿಕರು ಮತ್ತು ಸ್ಥಳೀಯರು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರ್ಘಟನೆ ಬಳಿಕ ಬ್ಯಾರಿಕೇಡ್ ಅಳವಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೃತ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸುತ್ತಿದ್ದಾರೆ. ವರ್ಷದ ಹಿಂದೆ ಉಲ್ಲಾಳ ಕೆರೆ ಬಳಿ ಇದೇ ರೀತಿಯ ಪೈಪ್ಲೈನ್ ಅಳವಡಿಕೆ ಕಾಮಗಾರಿ ವೇಳೆ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಂಡಿ ಪಕ್ಕ ಯಾವುದೇ ಬ್ಯಾರಿಕೇಡ್ ಅಳವಡಿಸದಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ.
Advertisement