ಬೆಳಗಾವಿ: ಎತ್ತುಗಳನ್ನು ಸಾಗಿಸುತ್ತಿದ್ದ ಇಬ್ಬರ ಮೇಲೆ ಗೋರಕ್ಷಕರಿಂದ ಹಲ್ಲೆ, ದೂರು-ಪ್ರತಿದೂರು ದಾಖಲು

ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧದ ಬಳಿ ಭಾನುವಾರ ಗೋರಕ್ಷಕರ ಗುಂಪೊಂದು ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆದು ಚಾಲಕ ಸೇರಿದಂತೆ ಇಬ್ಬರನ್ನು ಥಳಿಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧದ ಬಳಿ ಭಾನುವಾರ ಗೋರಕ್ಷಕರ ಗುಂಪೊಂದು ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ತಡೆದು ಚಾಲಕ ಸೇರಿದಂತೆ ಇಬ್ಬರನ್ನು ಥಳಿಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಗಾಯಗೊಂಡವರನ್ನು ಕೇರಳದ ನಿವಾಸಿಗಳಾದ ಉಮರ್ ಟಿಕೆ (46) ಮತ್ತು ಸುನೀಲ್ ಕುಮಾರ್ ನಾಯರ್ (38) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಹಸುಗಳನ್ನು ಹತ್ಯೆ ಮಾಡಲು ಟ್ರಕ್‌ನಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿತ್ತು. ಬಳಿಕ ಲಾರಿ ಹಿಂಬಾಲಿಸಿ ಸುವರ್ಣ ವಿಧಾನಸೌಧದ ಬಳಿ ತಡೆದಿದ್ದಾರೆ. ಈ ವೇಳೆ ಟ್ರಕ್‌ಗೆ ಕಲ್ಲು ತೂರಿ ಚಾಲಕ ಮತ್ತು ಆತನ ಸಹಚರನನ್ನು ಥಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗೋರಕ್ಷಕರ ಗುಂಪನ್ನು ನಿಭಾಯಿಸಲು ಹರಸಾಹಸ ಪಡಬೇಕಾಯಿತು.

ಪ್ರಾತಿನಿಧಿಕ ಚಿತ್ರ
ಗೋರಕ್ಷಕರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ: 5 ಬಂಧನ

ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ನಿಂತು ಸಮಸ್ಯೆ ವಿಚಾರಿಸಿದರು. ಶ್ರೀರಾಮ ಸೇನೆ ಹಿಂದೂಸ್ತಾನ್ ಮುಖ್ಯಸ್ಥ ರಮಾಕಾಂತ್ ಕೊಂಡುಸ್ಕರ್ ಮತ್ತು ಮಾಜಿ ಶಾಸಕ ಸಂಜಯ್ ಪಾಟೀಲ್ ಕೂಡ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ವಿಚಾರಿಸಿದರು.

ಟ್ರಕ್‌ನಲ್ಲಿ ಹಸುಗಳಿರಲಿಲ್ಲ. ಅವೆಲ್ಲವೂ ಎತ್ತುಗಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲಾರಿಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳನ್ನು ಬಿಡಿಸಲು ಗೋರಕ್ಷಕ ದಳದ ಸಿಬ್ಬಂದಿ ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಇದೇ ವೇಳೆ ಪೊಲೀಸರು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಶೆಟ್ಟರ್ ಯುವಕರಿಗೆ ಮನವರಿಕೆ ಮಾಡಿ ಸಮಾಧಾನಪಡಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.

ಪ್ರಾತಿನಿಧಿಕ ಚಿತ್ರ
ವ್ಯಕ್ತಿಯ ಮೇಲೆ ಗೋರಕ್ಷಕರಿಂದ ಹಲ್ಲೆ: ಇಬ್ಬರ ಬಂಧನ

ಪೊಲೀಸರು ಸೋಮವಾರ ಎರಡು ದೂರು ದಾಖಲಿಸಿಕೊಂಡಿದ್ದಾರೆ. ಶಹಾಪುರದ ವೀರಾಪುರ ಗಲ್ಲಿ ನಿವಾಸಿ ಭರತ್ ಗುಂಡು ನಾವಗೆ ಎಂಬುವವರು ಲಾರಿ ಚಾಲಕ ಸುನೀಲ್ ಕುಮಾರ್ ಹಾಗೂ ಕ್ಲೀನರ್ ಉಮರ್ ವಿರುದ್ಧ ದೂರು ನೀಡಿದ್ದಾರೆ. ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಪರ್ಮಿಟ್ ಇಲ್ಲದೆ ಸುಮಾರು 25 ಎತ್ತುಗಳನ್ನು ವಧೆ ಮಾಡಲು ಸಾಗಿಸುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರ ಸುವರ್ಣ ವಿಧಾನಸೌಧದ ಬಳಿ 50ಕ್ಕೂ ಹೆಚ್ಚು ಜನರು ದೊಣ್ಣೆ ಹಿಡಿದುಕೊಂಡು ಲಾರಿ ತಡೆದಿದ್ದಾರೆ ಎಂದು ಲಾರಿ ಚಾಲಕ ಸುನೀಲ್ ಕುಮಾರ್ ಪ್ರತಿದೂರು ದಾಖಲಿಸಿದ್ದಾರೆ. ಅಶ್ಲೀಲ ಭಾಷೆ ಬಳಸಿ ಥಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಸದ್ಯ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಹಿರೇಬಾಗೇವಾಡಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com