ಬೆಂಗಳೂರು: ವಿಭೂತಿಪುರ ಕೆರೆಯ ಹೂಳು ತೆಗೆಯುವ, ಕೊಳಚೆ ನೀರು ಸಂಸ್ಕರಿಸುವ ಮತ್ತು ಕೆರೆಗೆ ನೀರು ತುಂಬಿಸುವ ಕುರಿತು ಸುಳ್ಳು ಭರವಸೆಗಳನ್ನು ನೀಡಿದ್ದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೆರೆ ವಿಭಾಗದ ವಿರುದ್ಧ ಕಾರ್ಯಕರ್ತರು ಮತ್ತು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಭೂತಿಪುರ ಕೆರೆಯ ಹೂಳು ತೆಗೆದು ಮಾರ್ಚ್ ಅಂತ್ಯದೊಳಗೆ ಶುದ್ಧೀಕರಿಸಿದ ನೀರು ಬಿಡುವುದಾಗಿ ಬಿಬಿಎಂಪಿ ಭರವಸೆ ನೀಡಿತ್ತು. ಆದರೆ, ಇದುವರೆಗೆ ಏನೂ ಮಾಡಿಲ್ಲ ಎಂದು ತಲ ಕಾವೇರಿ ಲೇಔಟ್ ಮತ್ತು ಬಸವನಗರದ ಕೆರೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಪರಿಸರ ಕಾರ್ಯಕರ್ತೆ ಸತ್ಯವಾಣಿ ಶ್ರೀಧರ್ ಮಾತನಾಡಿ, ತಾವು ಮತ್ತು ಇತರ ಕೆಲವು ಸ್ವಯಂಸೇವಕರು ಕೆರೆಗೆ ಕಾಯಕಲ್ಪ ನೀಡಲು ಮತ್ತು ಸಂಸ್ಕರಿಸಿದ ನೀರಿನಿಂದ ಕೆರೆಯನ್ನು ತುಂಬಿಸಲು ಬಿಬಿಎಂಪಿ ಕೆರೆ ಇಲಾಖೆ ಮತ್ತು ಸ್ಥಳೀಯ ಎಂಜಿನಿಯರ್ಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಆದರೆ, ನಮ್ಮ ಮನವಿ ನನೆಗುದಿಗೆ ಬಿದ್ದಿದೆ ಎಂದರು.
'ಕೆರೆಯ ಹೂಳು ತೆಗೆದು ನೀರು ತುಂಬಿಸುವುದರಿಂದ 45 ಎಕರೆ ವಿಸ್ತೀರ್ಣದ ಕೆರೆಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೋರ್ವೆಲ್ ರೀಚಾರ್ಜ್ಗೆ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಾವು ಅಧಿಕಾರಿಗಳನ್ನು ಹೂಳು ತೆಗೆಯಲು, ಒಳಚರಂಡಿ ಸಂಸ್ಕರಣಾ ಘಟಕವನ್ನು (ಎಸ್ಟಿಪಿ) ಸ್ಥಾಪಿಸಲು ಮತ್ತು ಒತ್ತುವರಿಯನ್ನು ತೆರವುಗೊಳಿಸಲು ಒತ್ತಾಯಿಸುತ್ತಿದ್ದೇವೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಬಿಬಿಎಂಪಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಸತ್ಯವಾಣಿ ಹೇಳಿದರು.
ಕಳೆದ ವರ್ಷ ಮಳೆಯ ಅಭಾವ ಹಾಗೂ ಬಿಬಿಎಂಪಿ ಹೂಳು ತೆಗೆಯಲು ಮತ್ತು ಸಂಸ್ಕರಿಸಿದ ನೀರನ್ನು ಬಿಡಲು ವಿಫಲವಾದ ಕಾರಣ ಅಕ್ಕಪಕ್ಕದ ಪ್ರದೇಶಗಳಲ್ಲಿನ ಬೋರ್ವೆಲ್ಗಳು ಬತ್ತಿ ಜಲಚರಗಳ ಸಾವಿಗೆ ಕಾರಣವಾಗಿವೆ ಎಂದರು.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕೆರೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭೂಪ್ರದಾ, 1.5 ಎಕರೆ ಜೌಗು ಪ್ರದೇಶದಲ್ಲಿ ಅರ್ಧದಷ್ಟು ಭಾಗವನ್ನು ತೆರವುಗೊಳಿಸಲಾಗಿದ್ದು, ಉಳಿದ ಭಾಗವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
Advertisement