
ಕಲಬುರಗಿ: ವಚನ ದರ್ಶನ ಪುಸ್ತಕ ಲೋಕಾರ್ಪಣೆ ಸಮಾರಂಭಕ್ಕೂ ಮುನ್ನ ಹಾಗೂ ಬಿಡುಗಡೆ ಸಂದರ್ಭದಲ್ಲಿ ಪ್ರತಿಭಟನೆಯ ಬಿಸಿ ಎದುರಾಯಿತು.
ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಆಶ್ರಯದಲ್ಲಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶನಿವಾರ(ಆಗಸ್ಟ್ 3) ಸಂಜೆ 6 ಕ್ಕೆ ಆಯೋಜಿಸಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆರಂಭವಾಗುವ ವೇಳೆ ಸಭಾಂಗಣದೊಳಗೆ ನುಗ್ಗಲು ಯತ್ನಿಸಿದ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ರವೀಂದ್ರ ಶಾಬಾದಿ, ಆರ್.ಜಿ. ಶೆಟಕಾರ, ಪ್ರಭುಲಿಂಗ ಮಹಾಗಾಂವಕರ, ಸುನಿಲ್ ಮಾನ್ಪಡೆ ಸೇರಿದಂತೆ ಹಲವರನ್ನು ತಡೆದ ಪೊಲೀಸರು, ವಶಕ್ಕೆ ಪಡೆದರು.
ಸಂಘ ಪರಿವಾರ ಪ್ರೇರಿತ ವಿಶ್ವ ಗುರು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ, ಶರಣ ಚಳುವಳಿಯ ನಿಜ ತಿರುಚಿ ಅವರ ತತ್ವ ,ಚಿಂತನೆ ಚಳುವಳಿ, ಅಯೋಧ್ಯೆ ಪ್ರಕಾಶಿತ ಆರ್ಎಸ್ಎಸ್ ಪ್ರಕಟಿತ ವಚನ ದರ್ಶನ, ಕೃತಿ ವಿರೋಧಿಸಿ ಕಪ್ಪು ಬಟ್ಟೆ ಪ್ರದರ್ಶಿಸಿ, ಪ್ರತಿಭಟನೆ ಮಾಡಿದರು.
ಬಸವಣ್ಣನವರ ಭಾವಚಿತ್ರ ಋಷಿ ಮುನಿಯಂತೆ ಮಾಡಿದ್ದು, ಕೊರಳಲ್ಲಿ ತುಳಸಿ ಮಾಲೆ ಹಾಕಿರುವುದು, ಬಿಲ್ಲು- ಬಾಣಗಳನ್ನು ತೋರಿಸಿರುವುದು ಬಸವಣ್ಣನವರಿಗೆ ಹಾಗೂ ಬಸವ ತತ್ವಕ್ಕೆ ಮಾಡಿದ ಅಪಚಾರ ಎಂದು ಪ್ರತಿಭಟಿಸಿ ಘೋಷಣೆ ಕೂಗಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ, ಗದಗದ ಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ದಾವಣಗೆರೆಯಲ್ಲೂ ಪ್ರತಿಭಟನಾಕಾರರ ಗುಂಪೊಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಮೇಲೆ ಬಂದು ವಚನಾನಂದ ಸ್ವಾಮೀಜಿ ಅವರನ್ನು ಅಲ್ಪ ಜ್ಞಾನಿಗಳು ಎಂದು ನಿಂದಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈವೇಳೆ ವೇದಿಕೆಯಲ್ಲಿದ್ದವರಿಗೆಲ್ಲ ಪ್ರತಿಭಟನಾ ಪತ್ರ ನೀಡಿದರು.
ಪುಸ್ತಕವು ಬಸವಣ್ಣನ ಬೋಧನೆಗಳಿಗೆ ವಿರುದ್ಧವಾಗಿದೆ ಮತ್ತು ಅನೇಕ ಪ್ರಮುಖ ಲಿಂಗಾಯತ ನಂಬಿಕೆ ವ್ಯವಸ್ಥೆಗಳ ಏಕಪಕ್ಷೀಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ತೆರಳಿದ ಪ್ರತಿಭಟನಾಕಾರರಲ್ಲಿ ಒಬ್ಬರಾದ ಕೃಷಿಕ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ಎಂ.ವಿಶ್ವೇಶ್ವರಯ್ಯ ಹೆಮ್ಮಬೆನ್ನತ್ತೂರು, ನಾನು ಇನ್ನೂ ಪುಸ್ತಕ ಓದಿಲ್ಲ. ನಾವು ಅರ್ಥಮಾಡಿಕೊಂಡಂತೆ, ಪುಸ್ತಕವು ಸಮಾಜ ಸುಧಾರಕ ಶ್ರೀ ಬಸವಣ್ಣನವರನ್ನು ಅಪೂರ್ಣವಾಗಿ ಪ್ರತಿನಿಧಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ಬಸವಣ್ಣನವರು ಕಲ್ಯಾಣದಲ್ಲಿ ಆರಂಭಿಸಿದ ವಚನ ಚಳವಳಿಯು ಒಂದು ಭಕ್ತಿ ಚಳವಳಿ ಮತ್ತು ಅದರ ಉದ್ದೇಶ ಸಾಧಕನ ಆತ್ಮೋನ್ನತಿ ಎಂದು ಪ್ರತಿಪಾದಿಸುವುದೇ ಒಂದು ಮಹಾನ್ ಷಡ್ಯಂತ್ರ ಎಂದು ಹೇಳಿದರು.
ಈ ವೇಳೆ ವೇದಿಕೆಯಲ್ಲಿದ್ದ ಸ್ವಾಮೀಜಿ ಕೂಡ ಪತ್ರವನ್ನು ಓದಿ ಪ್ರತಿಭಟನಾಕಾರರ ಮಾತಿಗೆ ಒಪ್ಪಿಗೆ ಸೂಚಿಸಿದರು. ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದವರಲ್ಲಿ ಹೆಸರಾಂತ ಸಂಶೋಧರ ರಾಜೂರು ವೀರಣ್ಣ ಕೂಡ ಇದ್ದರು.
Advertisement