
ಬೆಂಗಳೂರು: ಸರ್ಕಾರ ಉಚಿತ ಬಸ್ ಪ್ರಯಾಣ ಘೋಷಣೆ ಮಾಡುವುದರ ಮೂಲಕ ಮಹಿಳೆಯರು ಖುಷಿ ಪಡುವಂತೆ ಮಾಡಿದೆ. ಆದರೆ, ನಗರದಲ್ಲಿ ಬಸ್ ನಿಲ್ದಾಣಗಳಲ್ಲಿ ಸೂಕ್ತ ಮೂಲಸೌಕರ್ಯಗಳಿಲ್ಲದೆ ಜನತೆ ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.
ನಗರದ ಬಹುತೇಕ ಬಸ್ ನಿಲ್ದಾಣಗಳು ಸೂಕ್ತ ನಿರ್ವಹಣೆ ಪಾಳು ಬಿದ್ದ ಸ್ಥಳಗಳಾಗಿ ಕಾಣತೊಡಗಿವೆ. ಮುರಿದ ಸೀಟು, ಹಾನಿಗೊಳಗಾದ ಶೆಲ್ಟರ್ ಗಳು, ದೀಪಗಳ ಕೊರತೆ, ಶುಚಿತ್ವ ನಿರ್ವಹಣೆಯಿಲ್ಲದಿರುವುದು, ತ್ಯಾಜ್ಯ ಸಮಸ್ಯೆಗಳು ಜನರಿಗೆ ಸಕಷ್ಟಗಳನ್ನು ಎದುರು ಮಾಡಿವೆ.
ಇದೀಗ ಈ ನಿಲ್ದಾಣಗಳು ಪ್ರಯಾಣಿಕರಿಗೆ ಅನುಕೂಲ ನೀಡುವ ಬದಲು ಆಟೋರಿಕ್ಷಾ, ಕ್ಯಾಬ್ ಹಾಗೂ ಖಾಸಗಿ ವಾಹನಗಳ ನಿಲುಗಡೆ ಸ್ಥಳವಾಗಿ ಬದಲಾಗುತ್ತಿವೆ ಎಂದು ಹಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲ ಬಸ್ ನಿಲ್ದಾಣಗಳಲ್ಲಿ ಸೂಚನ ಫಲಕಗಳೂ ಇಲ್ಲದಿರುವುದರಿಂದ ನಿಲ್ದಾಣ ಗುರ್ತಿಸಲು ಪ್ರಯಾಣಿಕರು ಸಂಕಷ್ಟಪಡುವಂತಾಗಿದೆ.
ಆರ್'ಟಿ.ನಗರ ಪೊಲೀಸ್ ಠಾಣೆ ಮತ್ತು ಜಯಮಹಲ್ ಬಳಿಯಿರುವ ಕೆಲವು ನಿಲ್ದಾಣಗಳಲ್ಲಿ ಹಾಳಾಗಿರುವ ಕುರ್ಚಿಗಳು ಕಂಡು ಬಂದರೆ, ಕೆಲವು ನಿಲ್ದಾಣಗಳು ಕಸದಿಂದ ಗಬ್ಬು ನಾರುತ್ತಿರುವುದು ಕಂಡು ಬಂದಿದೆ.
ಬಸ್ ನಲ್ಲಿ ಪ್ರಯಾಣಿಸುವ ವಯೋವೃದ್ಧರು ಬಸ್ ಗೆ ಕಾಯುವಾಗ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆ. ಆದರೆ, ಆಸನಗಳು ಮುರಿದ ಸ್ಥಿತಿಯಲ್ಲಿದ್ದು, ಬಳಕೆ ಸಾಧ್ಯವಾಗದಂತಾಗಿದೆ ಎಂದು ಚಂದ್ರ (65) ಎಂಬುವವರು ಹೇಳಿದ್ದಾರೆ.
ಸಿಟಿಜನ್ ಫಾರ್ ಸಿಟಿಜನ್ (C4C) ಸಂಸ್ಥಾಪಕ ರಾಜ್ಕುಮಾರ್ ದುಗ್ಗರ್ ಮಾತನಾಡಿ, ಸ್ಥಳೀಯ ಬಸ್ ನಿಲ್ದಾಣಗಳಲ್ಲಿನ ಸಮಸ್ಯೆಗಳು ತೀವ್ರವಾಗಿವೆ. ಕೆಲವು ನಿಲ್ದಾಣಗಳಲ್ಲಿ ದೀಪ ಕೊರತೆಗಳಿವೆ. ಅವ್ಯವಸ್ಥೆಗಳಿಂದಾಗಿ ಬಸ್ ನಿಲ್ದಾಣ ಸ್ಥಳಗಳನ್ನು ಆಟೋ ಹಾಗೂ ಕ್ಯಾಬ್ ಚಾಲಕರು ವಾಹನಗಳ ನಿಲುಗಡೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರಯಾಣಿಕರ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಸಂಜೆ ವೇಳೆ ಸಾಮಾನ್ಯ ಬೀದಿ ದೀಪಗಳನ್ನು ಹೊರತುಪಡಿಸಿದರೆ, ನಿಲ್ದಾಣಗಳಲ್ಲಿ ಬೆಳಕಿನ ವ್ಯವಸ್ಥೆಗಳಿಲ್ಲ. ಯಾವುದೇ ಅಹಿತಕರ ಘಟನೆ ನಡೆದರೂ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಗಳಿಲ್ಲ. ಬಸ್ ನಿಲ್ದಾಣಗಳು ಜನನಿಬಿಡ ಪ್ರದೇಶಗಳಾಗಿದ್ದು, ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು ಹೆಚ್ಚಿರುವುದು ನಿರ್ಣಾಯಕವಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಸರಿಯಾದ ಬೆಳಕಿನ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಗತಿಗಳು ಕಂಡು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಗಮನ ಆದಾಯ ಹೆಚ್ಚಳದ ಮೇಲೆ ಕೇಂದ್ರೀಕೃತವಾಗಿದೆ, ಸಾರ್ವಜನಿಕ ಅನುಕೂಲಕ್ಕಾಗಿ ಆದ್ಯತೆ ನೀಡುವ ಬದಲು ಜಾಹೀರಾತು ಅವಕಾಶಗಳನ್ನು ಹೆಚ್ಚಿಸಲು ಬಸ್ ನಿಲ್ದಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ನಾಗರೀಕರೊಬ್ಬರು ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ.
ಈ ನಡುವೆ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸಮಸ್ಯೆ ಶೀಘ್ರಗತಿಯಲ್ಲಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Advertisement