
ಬೆಂಗಳೂರು: ನಮ್ಮ ಸ್ಟೈಫಂಡ್ ಹೆಚ್ಚಳದ ಮನವಿಗೆ ಸರ್ಕಾರ ಸ್ಪಂದಿಸುವವರೆಗೆ ರೆಸಿಡೆಂಟ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಯಲಿದೆ ಎಂದು ಕರ್ನಾಟಕ ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಡಾ.ಸಿರೀಶ್ ಶಿವರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಸ್ಟೈಫಂಡ್ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರೆಸಿಡೆಂಟ್ ವೈದ್ಯರ ಸಂಘ ಇಂದಿನಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದೆ.
ನಮ್ಮ ಬೇಡಿಕೆ ಈಡೇರಿಸುವವರೆಗೆ ಶಸ್ತ್ರಚಿಕಿತ್ಸಕರು, ಸ್ನಾತಕೋತ್ತರ ಪದವೀಧರರು, ಸೂಪರ್ ಸ್ಪೆಷಾಲಿಟಿ ರೆಸಿಡೆಂಟ್ಸ್ ವೈದ್ಯರು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಿರಿಯ ರೆಸಿಡೆಂಟ್ ವೈದ್ಯರನ್ನು ಒಳಗೊಂಡ ಎಲ್ಲಾ ತುರ್ತು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಡಾ.ಶಿವರಾಮಯ್ಯ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
"2020ರಲ್ಲಿ ಕೊನೆಯ ಬಾರಿ ಸ್ಟೈಫಂಡ್ ಹೆಚ್ಚಳ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದಸ್ಟೈಫಂಡ್ ಹೆಚ್ಚಳ ಮಾಡಿಲ್ಲ. ಇತರ ರಾಜ್ಯಗಳು ಪ್ರತಿ ವರ್ಷ ಅಥವಾ ಪ್ರತಿ ಮೂರು ವರ್ಷಗಳಿಗೊಮ್ಮೆ ಸ್ಟೈಫಂಡ್ ಹೆಚ್ಚಳ ಮಾಡುತ್ತವೆ. ನಾವು ವಿರಾಮವಿಲ್ಲದೆ 24 ರಿಂದ 48 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಆದರೂ ನ್ಯಾಯಯುತವಾಗಿ ನಮಗೆ ಸ್ಟೈಫಂಡ್ ಸಿಗುತ್ತಿಲ್ಲ ಎಂದಿದ್ದಾರೆ.
ಇತರ ರಾಜ್ಯಗಳ ಸ್ಥಾನಿಕ ವೈದ್ಯರಿಗೆ ನೀಡುತ್ತಿರುವ ಸ್ಟೈಫಂಡ್ ಗೂ ಕರ್ನಾಟಕದಲ್ಲಿ ನೀಡುತ್ತಿರುವ ಸ್ಟೈಫಂಡ್ ಗೂ ವ್ಯತ್ಯಾಸವಿದೆ. ಆದ್ದರಿಂದ ಇತರೆ ರಾಜ್ಯಗಳಿಗೆ ಸರಿಸಮನಾಗಿ ಸ್ಟೈಫಂಡ್ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಶಿವರಾಮಯ್ಯ ಹೇಳಿದ್ದಾರೆ.
"ಈ ಸಂಬಂಧ ನಾವು ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ ಮತ್ತು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಆದರೆ ಸ್ಟೈಫಂಡ್ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರೆಸಿಡೆಂಟ್ ವೈದ್ಯರನ್ನು ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಒತ್ತಡಕ್ಕೆ ಸಿಲುಕಿಸಿದೆ. ಇದರಿಂದ ರೋಗಿಗಳ ಆರೈಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ" ಎಂದು ಅವರು ತಿಳಿಸಿದರು.
Advertisement