ಬರದ ಸಂದರ್ಭದಲ್ಲಿ ಸ್ಪೀಕರ್ ಖಾದರ್ ಓಡಾಟಕ್ಕೆ ಹೊಸ ಫಾರ್ಚೂನರ್ ಕಾರು ಬೇಕಿತ್ತಾ: ಬಸನಗೌಡ ಪಾಟಿಲ್ ಯತ್ನಾಳ ಕಿಡಿ

ಕರ್ನಾಟಕ ರಾಜ್ಯ ತೀವ್ರ ಬರಗಾಲದಲ್ಲಿರುವಾಗ ಸ್ಪೀಕರ್ ಯುಟಿ ಖಾದರ್ ಓಡಾಟಕ್ಕೆ ಹೊಸ ದುಬಾರಿ ಫಾರ್ಚೂನರ್ ಕಾರು ಬೇಕಿತ್ತಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ತೀವ್ರ ಬರಗಾಲದಲ್ಲಿರುವಾಗ ಸ್ಪೀಕರ್ ಯುಟಿ ಖಾದರ್ ಓಡಾಟಕ್ಕೆ ಹೊಸ ದುಬಾರಿ ಫಾರ್ಚೂನರ್ ಕಾರು ಬೇಕಿತ್ತಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಓಡಾಟಕ್ಕೆ ಹೊಸ ಮಾದರಿಯ, ಕಪ್ಪು ಬಣ್ಣದ ಐಷಾರಾಮಿ ಫಾರ್ಚೂನರ್ ಕಾರು ಖರೀದಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಟ್ವೀಟ್ ಮಾಡಿರುವ ಅವರು, ‘ದುಂದುವೆಚ್ಚಗಳನ್ನು ಕಡಿಮೆ ಮಾಡಿ, ಇರುವ ವಾಹನವನ್ನೇ ಮಾರ್ಪಾಡು ಮಾಡಿಕೊಂಡು ಬಳಸಿ ಬೊಕ್ಕಸಕ್ಕೆ ಹೊರೆಯಾಗದೆ ಇರುವ ಹಾಗೆ ಮಾಡಿ ಮೇಲ್ಪಂಕ್ತಿ ಹಾಕಿ ಕೊಡಬೇಕಾಗಿದ್ದ ಸಭಾಧ್ಯಕ್ಷರು ಐಷಾರಾಮಿ ಕಾರನ್ನು ಖರೀದಿ ಮಾಡುವ ಅವಶ್ಯವಿರಲಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೆ ‘ರಾಜ್ಯ ಭೀಕರ ಬರದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ 223 ತಾಲೂಕುಗಳು ಬರ ಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿರುವಾಗ ಈ ರೀತಿಯಾದ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಬೇಕಿತ್ತು’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಯು.ಟಿ. ಖಾದರ್ ಅವರಿಗೆ ವಿಧಾನಸಭೆ ಸಚಿವಾಲಯದಿಂದ ಹೊಸ ಕಾರು (ಕೆಎ 11 ಜಿಎ 1) ಒದಗಿಸಲಾಗಿದ್ದು, ವಿಶೇಷ ವಿನ್ಯಾಸ ಮಾಡಿರುವುದರಿಂದ 41 ಲಕ್ಷ ವೆಚ್ಚ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಾರಿನ ವಿಶೇಷತೆ
360 ಡಿಗ್ರಿ ಕ್ಯಾಮೆರಾ, ಪ್ರಯಾಣದ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್‌ಇಡಿ ಲೈಟ್ ಸೌಲಭ್ಯವನ್ನು ಈ ಕಾರು ಹೊಂದಿದ್ದು, ಜಿಆರ್ ಕಿಟ್ ಅಳವಡಿಸುವ ಮೂಲಕ ಕಾರಿಗೆ ವಿಶೇಷ ವಿನ್ಯಾಸ ಕೂಡಾ ಮಾಡಲಾಗಿದೆ. ಕಾರು ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದ್ದು, ರಾಜ್ಯಪಾಲರ ಹೊರತಾಗಿ ವಿಧಾನ ಸಭಾಧ್ಯಕ್ಷರಿಗೆ ಮಾತ್ರ ಈ ಲಾಂಛನ ಅಳವಡಿಸಲು ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com