ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಹೇಳಿಕೆ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಎಂಬ ಪಂಚ ಗ್ಯಾರಂಟಿ ಯೋಜನೆಗಳಿಂದ 1.2ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ...
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಎಂಬ ಪಂಚ ಗ್ಯಾರಂಟಿ ಯೋಜನೆಗಳಿಂದ 1.2ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ ಎಂಬ ಸರ್ಕಾರದ ಹೇಳಿಕೆ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಗುರುವಾರ ಕಿಡಿಕಾರಿದರು.

ವಿಧಾನಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಖಾತರಿ ಯೋಜನೆಗಳಿಂದಾಗಿ 1.2 ಕೋಟಿ ಕುಟುಂಬಗಳು ಬಿಪಿಎಲ್ ವರ್ಗದಿಂದ ಹೊರಬಂದು ಮಧ್ಯಮ ವರ್ಗದ ಸ್ಥಿತಿಗೆ ಏರಿವೆ ಎಂದು ರಾಜ್ಯಪಾಲರು ಹೇಳಿದ್ದರು. ಹಾಗಿದ್ದರೆ, ಸರ್ಕಾರದ ಇತ್ತೀಚಿನ ಜನಸ್ಪಂದನ ಕಾರ್ಯಕ್ರಮಕ್ಕೆ 20,000 ಕ್ಕೂ ಹೆಚ್ಚು ಜನರು ಹಾಜರಿದ್ದದ್ದು ಏಕೆ?" ಎಂದು ಪ್ರಶ್ನಿಸಿದರು.

ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ನಾಯಕರ ನಿದ್ದೆಗೆಡಿಸಿದ ಕುಮಾರಸ್ವಾಮಿ! (ಸುದ್ದಿ ವಿಶ್ಲೇಷಣೆ)

‘ನಾನು ಹಿಂದೆ ಮನಮೋಹನ್‌ ಸಿಂಗ್ ಅವರ ‘ಮನಮೋಹನಾಮಿಕ್ಸ್‌’ ಬಗ್ಗೆ ಕೇಳಿದ್ದೇನೆ. ಈಗ ಮೋದಿ ಅವರ ‘ಮೋದಿನಾಮಿಕ್ಸ್‌’ ಬಗ್ಗೆ ತಿಳಿದಿದ್ದೇನೆ. ಜಪಾನ್‌ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ‘ಅಬೆನಾಮಿಕ್ಸ್‌’ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಆದರೆ, ‘ಸಿದ್ದನಾಮಿಕ್ಸ್‌’ ಬಲು ಅಪಾಯಕಾರಿ’.

‘ಒಂದು ಕೈಯಲ್ಲಿ ಗ್ಯಾರಂಟಿಗಳನ್ನು ಕೊಟ್ಟು ಜನರನ್ನು ಬಡತನದಿಂದ ಮಧ್ಯಮವರ್ಗಕ್ಕೆ ತಂದಿದ್ದೇನೆ ಎನ್ನುವ ರಾಜ್ಯ ಸರ್ಕಾರ, ಹಾಗೆ ಕೊಟ್ಟು ಹತ್ತು ಕೈಗಳಲ್ಲಿ ಹೀಗೆ ಆ ಹಣವನ್ನು ಕಿತ್ತುಕೊಳ್ಳುತ್ತಿದೆ. ಈ ಸಿದ್ದನಾಮಿಕ್ಸ್‌ ರಾಜ್ಯವನ್ನು ವಿನಾಶದ ಅಂಚಿಗೆ ದೂಡುತ್ತಿದೆ’ ಎಂದು ದೂರಿದರು.

‘ಗ್ಯಾರಂಟಿಗಳ ಮೂಲಕ ಜನರ ಆರ್ಥಿಕ ಶಕ್ತಿ, ಖರೀದಿ ಶಕ್ತಿ ಹೆಚ್ಚಿದೆ ಎನ್ನುವ ಸರ್ಕಾರ, ಮುದ್ರಾಂಕ ಶುಲ್ಕವನ್ನು ಐದು ಪಟ್ಟು ಹೆಚ್ಚಿಸಿದೆ. ಮಾರ್ಗಸೂಚಿ ದರ ಆಸ್ತಿ ದರಕ್ಕಿಂತಲೂ ಹೆಚ್ಚಾಗಿದೆ. ಅಬಕಾರಿ ಸುಂಕ ಏರುತ್ತಲೇ ಇದೆ. ತೆರಿಗೆ ಮೂಲಕ ಜನರನ್ನು ಹೀರುವ ಆರ್ಥಿಕತೆಯು ರಾಜ್ಯದ ಅಭಿವೃದ್ಧಿಗೆ ಯಾವ ಸೀಮೆಯ ಉತ್ತೇಜನ ನೀಡುತ್ತದೆ’ ಎಂದು ಪ್ರಶ್ನಿಸಿದರು.

‘ರಾಜ್ಯವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲು ಕೇಂದ್ರ ಸರ್ಕಾರ ಕಾರಣ ಎಂದು ರಾಜ್ಯ ಸರ್ಕಾರ ಪ್ರಚಾರ ಮಾಡುತ್ತಿದೆ. ಸಂಘರ್ಷಕ್ಕೆ ಇಳಿದರೆ ಯಾರಾದರೂ ಗೌರವ ಕೊಡ್ತಾರಾ’ ಎಂದೂ ಪ್ರಶ್ನಿಸಿದರು.

ಹೆಚ್ ಡಿ ಕುಮಾರಸ್ವಾಮಿ
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು ಜನರ ಹಕ್ಕು: ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

‘ತಮಿಳುನಾಡಿನ ರಾಜ್ಯಪಾಲರು ಅಲ್ಲಿನ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ತಿರಸ್ಕರಿಸಿದ್ದರು. ನಮ್ಮ ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣವನ್ನು ಓದಿದ್ದಾರೆ. ತಮಿಳುನಾಡಿನ ರಾಜ್ಯಪಾಲರಂತಹ ಸಂಪ್ರದಾಯ ಇಲ್ಲಿ ನಡೆದಿಲ್ಲ. ಅದಕ್ಕಾಗಿ ರಾಜ್ಯಪಾಲರನ್ನು ಅಭಿನಂದಿಸುತ್ತೇನೆ’ ಎಂದರು.

‘ಎರಡು ಬಾರಿ ಆಕಸ್ಮಿಕವಾಗಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಯುಪಿಎ ಸರ್ಕಾರ ಹಾಗೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ನನಗೆ ಸಹಕಾರ ಸಿಕ್ಕಿತ್ತು. ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ದಿನಗಳ ಸಂಖ್ಯೆ ಹೆಚ್ಚಳ, ರಸ್ತೆ ವಿಸ್ತರಣೆಗೆ ರಕ್ಷಣಾ ಇಲಾಖೆ ಜಮೀನು ಹಸ್ತಾಂತರ ಸೇರಿದಂತೆ ಹಲವು ವಿಚಾರಗಳಲ್ಲಿ ಸಕಾರಾತ್ಮಕ ಸ್ಪಂದನೆ ದೊರಕಿತ್ತು’ ಎಂದು ಇದೇ ವೇಳೆ ಹಲವು ಉದಾಹರಣೆಗಳನ್ನು ನೀಡಿದರು.

‘ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದೀರಿ. 14 ಮತ್ತು 15ನೇ ಹಣಕಾಸು ಆಯೋಗಗಳ ಶಿಫಾರಸುಗಳನ್ನು ಓದಿದ್ದೇನೆ. ನಿತ್ಯ ಆರೋಪ ಮಾಡಿದರೆ ಏಕೆ ಗೌರವ ಕೊಡುತ್ತಾರೆ? ಅನ್ಯಾಯ ಆಗಿರುವುದು ನಿಜವೇ ಆಗಿದ್ದಲ್ಲಿ ನಿಮ್ಮೊಂದಿಗೆ ಪ್ರಧಾನಿಯವರ ಭೇಟಿಗೆ ನಾನು ಸಿದ್ಧ’ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com