ತುಮಕೂರು: ಬಿಸಿಎಂ ಹಾಸ್ಟೆಲ್​ಗಳಿಗೆ ಅಕ್ಕಿ ಪೂರೈಸದ ಸರ್ಕಾರ; ವಿದ್ಯಾರ್ಥಿಗಳ ನೆರವಿಗೆ ನಿಂತ ಸಿದ್ಧಗಂಗಾ ಮಠ!

ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿ ಪೂರೈಸದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಸಿದ್ದಗಂಗಾ ಮಠ ನೆರವು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತುಮಕೂರು: ಜಿಲ್ಲೆಯ ಬಿಸಿಎಂ ಹಾಸ್ಟೆಲ್​ಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿ ಪೂರೈಸದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳಿಗೆ ಸಿದ್ದಗಂಗಾ ಮಠ ನೆರವು ನೀಡಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿ ಹಂಚಿಕೆ ತಡವಾಗುತ್ತಿರುವ ಹಿನ್ನೆಲೆ ಹಾಸ್ಟೆಲ್‌ ವಿದ್ಯಾರ್ಥಿಗಳ ಊಟಕ್ಕೆ ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆ ಸಿದ್ಧಗಂಗಾ ಮಠ ಹಾಸ್ಟೆಲ್‌ಗಳಿಗೆ ಅಕ್ಕಿಯನ್ನು ನೀಡಿದೆ.

ಸಿರಾ ಮತ್ತು ತುಮಕೂರಿನ ಒಬಿಸಿ ಹಾಸ್ಟೆಲ್‌ಗಳು ಅಕ್ಕಿ ಕೊರತೆಯನ್ನು ಎದುರಿಸುತ್ತಿವೆ. ಆದರೆ, ತುಮಕೂರಿನ ಅಧಿಕಾರಿಗಳು ಡಿಸೆಂಬರ್‌ನಲ್ಲಿ ಸಿದ್ಧಗಂಗಾ ಮಠದಿಂದ 180 ಕ್ವಿಂಟಾಲ್‌ ಅಕ್ಕಿಯನ್ನು ಸಾಲವಾಗಿ ಪಡೆದಿದ್ದಾರೆ. ಇದರಿಂದ 18 ಹಾಸ್ಟೆಲ್‌ನ ಸುಮಾರು 2000 ವಿದ್ಯಾರ್ಥಿಗಳಿಗೆ ಆಹಾರ ಒದಗಿಸಲಾಗಿದೆ. ಇನ್ನು, ಕೆಲ ತಾಲೂಕುಗಳಲ್ಲಿ ಅಧಿಕಾರಿಗಳು ಬೇರೆ ಹಾಸ್ಟೆಲ್‌ಗಳಿಂದ ಅಕ್ಕಿಯನ್ನು ಸಾಲವಾಗಿ ಪಡೆದಿದ್ದರೆ, ಮತ್ತೊಂದಿಷ್ಟು ಕಡೆ ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಅಕ್ಕಿಯನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಊಟ ಒದಗಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸಂಗ್ರಹ ಚಿತ್ರ
ಸಿದ್ಧಗಂಗಾ ಮಠದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ ಜಿಲ್ಲೆಗೆ ಅಕ್ಕಿಯನ್ನು ಮಂಜೂರು ಮಾಡುತ್ತದೆ. ಜಿಲ್ಲೆಯ ಅಧಿಕಾರಿಗಳು ಭಾರತೀಯ ಆಹಾರ ನಿಗಮದ ಗೋದಾಮುಗಳಿಂದ ಪ್ರತಿ ಕೆಜಿಗೆ 6 ರೂಪಾಯಿಯಂತೆ ಸಬ್ಸಿಡಿಯಲ್ಲಿ ಅಕ್ಕಿ ಖರೀದಿಸುತ್ತಾರೆ. ಈ ನಿಯಮದಂತೆ ತುಮಕೂರು ಜಿಲ್ಲೆಯು 2023ರ ಅಕ್ಟೋಬರ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಕಿಯನ್ನು ಪಡೆಯಬೇಕಾಗಿತ್ತು. ಆದರೆ, ಆ ಅಕ್ಕಿ ನಮಗೆ 2024ರ ಜನವರಿಯಲ್ಲಿ ಸಿಕ್ಕಿದೆ. ತುಮಕೂರು ತಾಲೂಕಿಗೆ ಮಠದಿಂದ ಸಿದ್ಧಗಂಗಾ ಮಠದಿಂದ ಅಕ್ಕಿ ಬಂದಿದ್ದರಿಂದ, ಗೋದಾಮುಗಳಲ್ಲಿ ದಾಸ್ತಾನು ಮಾಡಲು ಜಾಗವಿಲ್ಲದ್ದರಿಂದ ಎಫ್‌ಸಿಐನಿಂದ ಹೆಚ್ಚಿನ ಅಕ್ಕಿಯನ್ನು ಖರೀದಿಸಲಿಲ್ಲ. ನಮಗೆ ಮಂಜೂರು ಮಾಡಿರುವ ಅಕ್ಕಿ ಸುರಕ್ಷಿತವಾಗಿ ಎಫ್‌ಸಿಐ ಗೋದಾಮುಗಳಲ್ಲಿಯೇ ಇದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಗಂಗಪ್ಪ ಹೇಳಿದ್ದಾರೆ.

ಸಿದ್ಧಗಂಗಾ ಮಠ ಸಮೀಪವೇ ಇರುವುದರಿಂದ ಮಠದಿಂದ ಅಕ್ಕಿಯನ್ನು ಪಡೆಯುವುದು ಸಹಜವಾಗಿದೆ. ನಮಗೆ ಮಂಜೂರಾಗಿರುವ ಅಕ್ಕಿಯನ್ನು ಎಫ್‌ಸಿಐನಿಂದ ತೆಗೆದುಕೊಳ್ಳದೆ ಹೋದರೇ ಅದು ವಾಪಸ್‌ ಹೋಗುತ್ತದೆ ಎಂದು ತಿಳಿಸಿದ್ದಾರೆ.

ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹಾಸ್ಟೆಲ್‌ಗಳಿಗೆ ಅಕ್ಕಿಯನ್ನು ನೀಡಿರುವುದನ್ನು ಖಚಿತಪಡಿಸಿದ್ದಾರೆ.

ಸಂಗ್ರಹ ಚಿತ್ರ
ಶೀಘ್ರವೇ ಮಾರುಕಟ್ಟೆಗೆ ಭಾರತ್ ಅಕ್ಕಿ; ಪ್ರತಿ ಕೆ.ಜಿ.ಗೆ 29 ರೂಪಾಯಿ!

ಬಿಸಿಎಂ ಹಾಸ್ಟೆಲ್‌ಗಳಿಗೆ ಮಠದಿಂದ ಅಕ್ಕಿಯನ್ನು ಸಾಲವಾಗಿ ಕೊಟ್ಟಿರೋದು ನಿಜ. ಕಳೆದ ಎರಡ್ಮೂರು ತಿಂಗಳಿನಿಂದ ಅಕ್ಕಿ ಕೊಡುತ್ತಿದೇವೆ. ಬಿಸಿಎಂ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಪೂರೈಕೆ ವಿಳಂಬವಾಗಿರುವುದರಿಂದ ಮಠದಿಂದ ಪಡೆದುಕೊಂಡಿದ್ದಾರೆ. ತುಂಬಾ ಬಾರಿ ಸಾಲ ತೆಗೆದುಕೊಂಡು ಹೋಗಿದ್ದಾರೆ. ನಮಗೆ ಅದರ ಲೆಕ್ಕ ಇಲ್ಲ. ಆದರೆ, ಅಕ್ಕಿ ತೆಗೆದುಕೊಂಡು ಹೋಗಿರೋದು ಮಾತ್ರ ಗ್ಯಾರಂಟಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಮುಂದಾಗಿತ್ತು. ಆದರೆ, ಕೇಂದ್ರ ರಾಜ್ಯಕ್ಕೆ ಅಕ್ಕಿಯನ್ನು ಮಾರಾಟ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com