ಬೆಂಗಳೂರು: ಕೊಳಕು ಬಟ್ಟೆ ಧರಿಸಿದ್ದ ಒಂದೇ ಕಾರಣಕ್ಕೆ ರೈತನಿಗೆ ಮೆಟ್ರೋ ರೈಲು ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ನೋಟಿಸ್ ಜಾರಿ ಮಾಡಿದೆ.
ಬಟ್ಟೆಗಳು ಕೊಳಕಾಗಿವೆ ಎಂದು ಮೆಟ್ರೋ ರೈಲು ಹತ್ತದಂತೆ ರೈತನನ್ನು ನಿಲ್ದಾಣದಲ್ಲಿ ಅಧಿಕಾರಿಯೊಬ್ಬರು ತಡೆದಿದ್ದಾರೆ ಎಂಬ ವರದಿಯ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಬುಧವಾರದಂದು ನೋಟಿಸ್ ಕಳುಹಿಸಿದೆ.
ಈ ಬಗ್ಗೆ ಹೇಳಿಕೆ ಕೂಡ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC), "ಯಾವುದೇ ವ್ಯಕ್ತಿ ಅಥವಾ ಆತ ಧರಿಸಿರುವ ಬಟ್ಟೆಯ ಸ್ವರೂಪದ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಗೆ ಪ್ರವೇಶವನ್ನು ನಿರಾಕರಿಸಲಾಗುವುದಿಲ್ಲ" ಎಂದು ಹೇಳಿದೆ.
ಕರ್ನಾಟಕದ ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಅಧಿಕಾರಿಯೊಬ್ಬರು ಮೆಟ್ರೋ ರೈಲು ಹತ್ತದಂತೆ ರೈತರನ್ನು ತಡೆದರು ಎಂಬ ಮಾಧ್ಯಮ ವರದಿಯನ್ನು ಆಯೋಗವು ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ. ವರದಿಯ ಪ್ರಕಾರ, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಅದು ಹೇಳಿದೆ. ಮಾಧ್ಯಮ ವರದಿಯ ವಿಷಯವು ನಿಜವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆದೆ ಎಂದು NHRC ಗಮನಿಸಿದೆ.
ಯಾರಾದರೂ ಯಾವುದೇ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದರೆ, ಕಾನೂನಿನ ನಿಬಂಧನೆಗಳ ಪ್ರಕಾರ ಮಾತ್ರ ಅವರನ್ನು ತಡೆಯಬಹುದು ಎಂದು ಅದು ಹೇಳಿಕೆಯಲ್ಲಿ ಸೇರಿಸಿದೆ. ಅಂತೆಯೇ ಈ ಸಂಬಂಧ ಮೆಟ್ರೋ ರೈಲು ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
Advertisement