ಕಾರ್‌ಪೂಲಿಂಗ್‌: ಮಾರ್ಗಸೂಚಿ ತರಲು ಕೇಂದ್ರದ ನೀತಿಗಾಗಿ ಕಾಯುತ್ತಿರುವ ರಾಜ್ಯ ಸಾರಿಗೆ ಇಲಾಖೆ

ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ಗೆ ತನ್ನದೇ ಆದ ಮಾರ್ಗಸೂಚಿಯನ್ನು ರೂಪಿಸಬೇಕಿದ್ದ ರಾಜ್ಯ ಸಾರಿಗೆ ಇಲಾಖೆ ಈ ಸಂಬಂಧ ಕೇಂದ್ರ ಸರ್ಕಾರದ ನೀತಿಗಾಗಿ ಕಾಯುತ್ತಿದ್ದು, ಇನ್ನೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಲ್ಲ.
ಕಾರ್ ಪೂಲಿಂಗ್ (ಸಾಂದರ್ಭಿಕ ಚಿತ್ರ)
ಕಾರ್ ಪೂಲಿಂಗ್ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ಗೆ ತನ್ನದೇ ಆದ ಮಾರ್ಗಸೂಚಿಯನ್ನು ರೂಪಿಸಬೇಕಿದ್ದ ರಾಜ್ಯ ಸಾರಿಗೆ ಇಲಾಖೆ ಈ ಸಂಬಂಧ ಕೇಂದ್ರ ಸರ್ಕಾರದ ನೀತಿಗಾಗಿ ಕಾಯುತ್ತಿದ್ದು, ಇನ್ನೂ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಲ್ಲ.

ಕಾರ್‌ಪೂಲಿಂಗ್ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳ ಬಳಕೆಯ ಮೇಲೆ ನಿಷೇಧ ಹೇರಲು ಸಾರಿಗೆ ಇಲಾಖೆ ಸಜ್ಜಾಗುತ್ತಿದೆಯಾದರೂ ಈ ಸಂಬಂಧ ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿ ಹೊರಡಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಖಾಸಗಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಂದ ಪದೇ ಪದೇ ದೂರುಗಳು ಬರುತ್ತಿದ್ದು, ಕಾರ್‌ಪೂಲಿಂಗ್‌ನಲ್ಲಿ ತೊಡಗಿರುವ ವಾಣಿಜ್ಯೇತರ (ವೈಟ್‌ಬೋರ್ಡ್) ವಾಹನಗಳು ತಮ್ಮ ಆದಾಯವನ್ನು ಕಸಿದುಕೊಳ್ಳುತ್ತಿವೆ ಮತ್ತು ಅದನ್ನು 'ಅಕ್ರಮ' ಎಂದು ಆರೋಪಿಸಿರುವ ಟ್ಯಾಕ್ಸಿ ಚಾಲಕರು ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರವು ಕ್ವಿಕ್ ರೈಡ್, ಜೂಮ್, ರೈಡ್ ಶೇರ್‌ನಂತಹ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರುವ ಕುರಿತು ಆಲೋಚಿಸುತ್ತಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅಕ್ಟೋಬರ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಕಾರ್ ಪೂಲಿಂಗ್ ಮೇಲೆ ಯಾವುದೇ ನಿಷೇಧ ಹೇರಬಾರದು ಎಂದು ಒತ್ತಾಯಿಸಿದ್ದರು. ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ಹಳೆಯದಾಗಿದೆ ಎಂದು ಸೂಚಿಸಿದ ಸಂಸದ ಸೂರ್ಯ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಖಾಸಗಿ ವಾಹನಗಳಿಗೆ ಕಾರ್‌ಪೂಲಿಂಗ್‌ಗೆ ಅನುಮತಿ ನೀಡಲು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಹತ್ತು ದಿನಗಳಲ್ಲಿ ಸಾರಿಗೆ ಇಲಾಖೆ ಮಾರ್ಗಸೂಚಿ ತರಲಿದೆ ಎಂದು ಹೇಳಿದ್ದರು. ಆದರೆ 10 ದಿನಗಳು ಮುಕ್ತಾಯವಾದರೂ ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಹೊರಬಂದಿಲ್ಲ. ಇದರ ನಡುವೆಯೂ ಗೊಂದಲದಲ್ಲೇ ನಗರದಲ್ಲಿ ಸದ್ದಿಲ್ಲದೇ ಕಾರ್‌ಪೂಲಿಂಗ್ ಸೇವೆ ಮುಂದುವರಿಯುತ್ತಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಅಧ್ಯಕ್ಷ ನಟರಾಜ್‌ ಶರ್ಮಾ ಮಾತನಾಡಿ, ‘ವೈಟ್‌ ಬೋರ್ಡ್‌ ವಾಹನಗಳನ್ನು ಕಾರ್‌ಪೂಲಿಂಗ್‌ ಉದ್ದೇಶಕ್ಕೆ ಬಳಸುವುದರಿಂದ ಖಾಸಗಿ ಟ್ಯಾಕ್ಸಿ ಮತ್ತು ಆಟೊ ಚಾಲಕರಿಗೆ ನಷ್ಟವಾಗುತ್ತಿದೆ. ಟ್ಯಾಕ್ಸಿ ಮತ್ತು  ಆಟೋ ಯೂನಿಯನ್‌ಗಳ ಒತ್ತಾಯಕ್ಕೆ ಸರ್ಕಾರ ಕಿವಿಗೊಟ್ಟು ಸಮಸ್ಯೆ ಪರಿಹರಿಸಬೇಕು. ಈ ಸಂಬಂದ ಶೀಘ್ರದಲ್ಲೇ ಸಭೆಗೆ ಕರೆಯಲಾಗುವುದು ಮತ್ತು ವೈಯಕ್ತಿಕ ವಾಹನಗಳನ್ನು ಬಳಸಿ ಕಾರ್‌ಪೂಲಿಂಗ್ ಅನ್ನು ನಿಷೇಧಿಸಲಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಇನ್ನು ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಕಾರ್ ಪೂಲಿಂಗ್ ಬಳಕೆದಾರರೊಬ್ಬರು, "ಕಚೇರಿ ಹೋಗುವವರಿಗೆ ಕಾರ್‌ಪೂಲಿಂಗ್ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ನಾಲ್ಕರಿಂದ ಐದು ಕಾರುಗಳ ಸ್ಥಳದಲ್ಲಿ ಒಂದನ್ನು ಮಾತ್ರ ಗಮ್ಯಸ್ಥಾನವನ್ನು ತಲುಪಲು ಬಳಸಲಾಗುತ್ತಿದೆ. ಇದು ನಗರದಲ್ಲಿ ಈಗಾಗಲೇ ಹೆಚ್ಚಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಜನರು ಆಟೋದಂತೆ ಕಾರ್‌ಪೂಲಿಂಗ್ ಗೂ ಆದ್ಯತೆ ನೀಡುತ್ತಾರೆ. ಆಟೋಗಳಲ್ಲಿ ಚಾಲಕರು ಮನಸೋ ಇಚ್ಛೆ ಹಣ ಕೇಳುತ್ತಾರೆ. ಅದು ಪಾಕೆಟ್ ಸ್ನೇಹಿಯಲ್ಲ ಎಂದು ಹೇಳಿದರು.

ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ''ಕಾರ್ ಪೂಲಿಂಗ್‌ನ ಸಾಧಕ-ಬಾಧಕಗಳನ್ನು ತಿಳಿಯಲು ನಾವು ಮಧ್ಯಸ್ಥಗಾರರ ಮಾತುಗಳನ್ನು ಆಲಿಸುತ್ತೇವೆ. ಇವೆಲ್ಲವನ್ನೂ ಇಟ್ಟುಕೊಂಡು ರಾಜ್ಯ ಸಾರಿಗೆ ಇಲಾಖೆ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ರಚಿಸಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಾರ್ಪೂಲಿಂಗ್ ನೀತಿ ಒಂದು ನಿಲುವಿಗೆ ಬರಲಿದೆ ಎಂದು ಹೇಳಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com