ಬೆಂಗಳೂರು: ಮಗನನ್ನು ಕೊಂದು ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಸ್ಟಾರ್ಟ್ ಅಪ್ ಕಂಪನಿ ಮಹಿಳಾ ಸಿಇಒ ಬಂಧನ!

ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗಿನಲ್ಲಿಟ್ಟು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಾಸಗಿ ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಒಬ್ಬರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆ ಸುಚನ ಸೇಠ್
ಬಂಧಿತ ಮಹಿಳೆ ಸುಚನ ಸೇಠ್

ಬೆಂಗಳೂರು: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗಿನಲ್ಲಿಟ್ಟು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಾಸಗಿ ಸ್ಟಾರ್ಟ್ ಅಪ್ ಕಂಪೆನಿಯ ಮಹಿಳಾ ಸಿಇಒ ಒಬ್ಬರನ್ನು ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ‘ಮೈಂಡ್‌ಫುಲ್ ಎಐ ಲ್ಯಾಬ್’ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಹ ಸಂಸ್ಥಾಪಕಿ ಸುಚನಾ ಸೇಠ್ (39) ಬಂಧಿತ ಮಹಿಳೆ. ಕಾರು ಚಾಲಕನೇ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿ ಮಹಿಳೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಉತ್ತರ ಗೋವಾದ ‘ಸೋಲ್ ಬ್ಯಾನಿಯನ್ ಗ್ರ್ಯಾಂಡ್’ ಹೋಟೆಲ್‌ಗೆ ಮಹಿಳೆ ಪುತ್ರನೊಂದಿಗೆ ಶನಿವಾರ ತೆರಳಿದ್ದಳು. ಸೋಮವಾರ ಕೊಠಡಿ ತೆರವುಗೊಳಿಸಿ ಏಕಾಂಗಿಯಾಗಿ ಹೊರಬಂದಿದ್ದಳು. ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಳು. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬಂಧಿಕರ ಮನೆಯಲ್ಲಿ ಬಾಲಕನನ್ನು ಬಿಟ್ಟು ಬಂದಿರುವುದಾಗಿ ಮಹಿಳೆ ಸಬೂಬು ನೀಡಿ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿ ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ.

ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com