ಬೆಂಗಳೂರು: ಕಾರೈಕಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವ್ಯಕ್ತಿ ನೇಣಿಗೆ ಶರಣು

ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ(ಎಸ್‌ಎಂವಿಟಿ) ಬುಧವಾರ ಬೆಳಗ್ಗೆ ಕಾರೈಕಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕೋಚ್‌ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ(ಎಸ್‌ಎಂವಿಟಿ) ಬುಧವಾರ ಬೆಳಗ್ಗೆ ಕಾರೈಕಲ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕೋಚ್‌ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಕೇರಳದವರು ಎಂದು ಶಂಕಿಸಲಾಗಿದೆ. ಕೋಚ್ ಅನ್ನು ಪ್ರತ್ಯೇಕಿಸಲಾಗಿದ್ದು, ರೈಲು ಮೂರು ಗಂಟೆ ವಿಳಂಬವಾಗಿ ತೆರಳಿದೆ.

ಸರ್ಕಾರಿ ರೈಲ್ವೆ ಪೊಲೀಸರು(GRP) CrPcಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ಬೆಳಗಿನ ಜಾವ 2 ಗಂಟೆಗೆ ಮೈಸೂರಿನಿಂದ ಪ್ಲಾಟ್‌ಫಾರ್ಮ್ 5ಕ್ಕೆ ಆಗಮಿಸಿದ ಸಂಪೂರ್ಣ ಕಾಯ್ದಿರಿಸದ ರೈಲಿನಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ GRP ಪೋಲೀಸ್ ಒಬ್ಬರು, ಬೆಳಗ್ಗೆ 7 ಗಂಟೆ ಸುಮಾರಿಗೆ ರೈಲು(ಸಂಖ್ಯೆ 16529) ಹತ್ತಿದ ಪ್ರಯಾಣಿಕರೊಬ್ಬರು ಕೋಚ್‌ನ ಮೇಲಿರುವ ಫ್ಯಾನ್‌ಗೆ ವ್ಯಕ್ತಿ ನೇತಾಡುತ್ತಿರುವ ಆಘಾತಕಾರಿ ದೃಶ್ಯವನ್ನು ನೋಡಿದ್ದಾರೆ. ತಕ್ಷಣ ಅವರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದರು.

ಬೆಳಗಿನ ಜಾವ 3 ರಿಂದ 3.30 ರ ನಡುವೆ ರೈಲು ಖಾಲಿಯಾಗಿದ್ದಾಗ ವ್ಯಕ್ತಿ ನೇಣು ಬಿಗಿದುಕೊಂಡಿದ್ದಾರೆ. ಅವರ ಬಳಿ ಯಾವುದೇ ಗುರುತಿನ ಚೀಟಿ ಇಲ್ಲ. ಯಾವುದೇ ನಾಪತ್ತೆ ಪ್ರಕರಣಗಳು ದಾಖಲಾಗಿದ್ದರೆ ನಮಗೆ ಮಾಹಿತಿ ನೀಡಲು ಎಲ್ಲಾ ರೈಲ್ವೆ ನಿಲ್ದಾಣಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ರೈಲ್ವೆ ಪೊಲೀಸರಿಗೆ ಸೂಚಿಸಿಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.

ಮೃತ ವ್ಯಕ್ತಿಯಲ್ಲಿ ಪತ್ತೆಯಾದ ಕಾಯ್ದಿರಿಸದ ಟಿಕೆಟ್ ಪ್ರಕಾರ, ಅವರು ಜನವರಿ 16 ರಂದು ತ್ರಿಶೂರ್‌ನಿಂದ ಕೆಎಸ್‌ಆರ್ ಬೆಂಗಳೂರಿಗೆ ಮತ್ತು ನಂತರ ಮೈಸೂರಿಗೆ ಪ್ರಯಾಣಿಸಿದ್ದಾರೆ.

ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಿ ಯಾರ್ಡ್‌ಗೆ ಕೊಂಡೊಯ್ಯಲಾಗಿದೆ. ಮೃತದೇಹವನ್ನು ಸಿವಿ ರಾಮನ್ ನಗರದ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ  ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com