ಬೆಂಗಳೂರು: ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನ ಸಮಾರಂಭಕ್ಕೆ ಸಾಕ್ಷಿಯಾಗಲು ರಾಜ್ಯದ ಜನರಿಗೆ ಅವಕಾಶ ನೀಡಬೇಕು. ಇದಕ್ಕಾಗಿ ಅಂದು ರಾಜ್ಯ ಸರ್ಕಾರ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಕೇಂದ್ರ ಸರ್ಕಾರ ರಜೆ ಘೋಷಿಸಿದೆ. ನಾಳೆ ಜಗತ್ತಿನಾದ್ಯಂತ ಐತಿಹಾಸಿಕ ದಿನವಾಗಿದ್ದು, ರಾಜ್ಯ ಸರ್ಕಾರ ರಜೆ ಘೋಷಿಸಬೇಕು. ಈ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಕೂಡ ಇದೇ ರೀತಿಯ ನಿಲುವು ಹೊಂದಿವೆ. ಇಂತಹ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಜನರಿಗೆ ಅವಕಾಶವಿದೆ. ಕರ್ನಾಟಕದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈಗಲೂ ತಡವಾಗಿಲ್ಲ. ರಜೆ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ.
'ರಾಜ್ಯದ ಕಾಂಗ್ರೆಸ್ (Congress) ನಾಯಕರ ಹೇಳಿಕೆಗಳು, ಕೋಲಾರದಲ್ಲಿ ಫ್ಲೆಕ್ಸ್ ಹರಿದ ಪ್ರಕರಣ ಇವೆಲ್ಲ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನದ ಘಟನೆ, ಇದೆಲ್ಲವನ್ನೂ ನೋಡಿದಾಗ ರಾಜ್ಯದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರಾಮಮಂದಿರ (Ram Mandir) ಉದ್ಘಾಟನೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ. ದೇಶದಲ್ಲಿ ರಾಮಜಪ ನಡೆಯುತ್ತಿದ್ದರೆ, ಕರ್ನಾಟಕದಲ್ಲಿ ದುರುದ್ದೇಶದಿಂದಲೇ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಲಾಯಿತು. ವಾತಾವರಣ ಕಲುಷಿತಗೊಳಿಸಬೇಕೆಂಬ ದುರುದ್ದೇಶದಿಂದಲೇ ಬಂಧನ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ರಾಮಮಂದಿರ ಆಹ್ವಾನ ತಿರಸ್ಕರಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂದು ಆಹ್ವಾನ ತಿರಸ್ಕರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ದುಃಖ.. ಆದರೆ ಅದಕ್ಕಿಂತ ಹೆಚ್ಚು ದುಃಖ ಕಾಂಗ್ರೆಸ್ನವರಿಗೆ ಆಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರವನ್ನ ರಾಜ್ಯಪಾಲರ ಮೂಲಕ ಕಂಟ್ರೋಲ್ ಮಾಡಲಾಗುತ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿ.ಕೆ.ಹರಿಪ್ರಸಾದ್ ಅವರನ್ನ ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿದೆಯೋ? ರಾಜ್ಯ ಸರ್ಕಾರ ಟಾರ್ಗೆಟ್ ಮಾಡಿದೆಯೋ? ಮುಂದಿನ ದಿನಗಳಲ್ಲಿ ಅದು ಗೊತ್ತಾಗಲಿದೆ ಎಂದು ಹೇಳಿದರು.
Advertisement