Spa Extortion Case: ಕೇರಳದಲ್ಲಿ ಬೆಂಗಳೂರು ಪೊಲೀಸರ ಕಾರ್ಯಾಚರಣೆ, ಕನ್ನಡ ಟಿವಿ ನಿರೂಪಕಿ Divya Vasantha ಬಂಧನ

ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ.
Divya Vasantha
ದಿವ್ಯಾ ವಸಂತ
Updated on

ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ (Divya Vasantha)ಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ʻಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು’ ಎಂದು ಹೇಳಿ ವೈರಲ್‌ ಆಗಿದ್ದ ಮಾಜಿ ನಿರೂಪಕಿ ದಿವ್ಯಾ ವಸಂತ ಇಂದಿರಾನಗರದ ಮಸಾಜ್ ಪಾರ್ಲರ್ ನಲ್ಲಿ ಶ್ರೀಮಂತ ಗ್ರಾಹಕರಿಗೆ ಗಾಳಹಾಕಿ ಬೆದರಿಕೆ ಹಾಗೂ ಸುಲಿಗೆ ಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು.

ಈ ಪ್ರಕರಣ ಬಯಲಾಗುತ್ತಲೇ ಆಕೆ ತಲೆಮರೆಸಿಕೊಂಡಿದ್ದರು. ಆಕೆಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇದೀಗ ನೆರೆಯ ಕೇರಳದಲ್ಲಿ ಆಕೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭೀಮಾನಗರ ಪೊಲೀಸರು ಕಳೆದೊಂದು ವಾರದಿಂದ ದಿವ್ಯಾ ವಸಂತ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದ ದಿವ್ಯಾ ವಸಂತರನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊದಲು ತಮಿಳುನಾಡಿಗೆ ಪರಾರಿಯಾಗಿದ್ದ ದಿವ್ಯಾ ವಸಂತ ಅಲ್ಲಿಂದ ಕೇರಳಕ್ಕೆ ತೆರಳಿದ್ದರು ಎನ್ನಲಾಗಿದೆ. ಇದೀಗ ಕೇರಳದಿಂದಲೇ ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಇದೀಗ ಕೇಸ್‌ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?

ಇಂದಿರಾನಗರದ ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮಾಲೀಕನನ್ನು ಒಳಗೊಂಡ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಸುಲಿಗೆ ಪ್ರಕರಣದಲ್ಲಿ ದಿವ್ಯ ವಸಂತ ಆರೋಪಿಯಾಗಿದ್ದಾರೆ. ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಗೆ ತಮ್ಮ ಗುಂಪಿಗೆ ಸೇರಿದ ಯುವತಿಯನ್ನು ಕೆಲಸಕ್ಕೆ ಸೇರಿಸಿ ಈ ತಂಡ ಸುಲಿಗೆಗೆ ಯತ್ನಿಸಿತ್ತು ಎನ್ನಲಾಗಿದೆ. ಜೆ. ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಈ ಮುಂಚೆ ಪೊಲೀಸರು ಮೂವರನ್ನು ಬಂಧಿಸಿದ್ದರು.

ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Divya Vasantha
ಬೆಂಗಳೂರು: ಹಣಕ್ಕಾಗಿ ಸ್ಪಾ ಮಾಲೀಕರಿಗೆ ಬ್ಲ್ಯಾಕ್ ಮೇಲ್; ಟಿವಿ ಚಾನೆಲ್ ಸಿಇಒ ಬಂಧನ, ನಿರೂಪಕಿ ನಾಪತ್ತೆ

ಶ್ರೀಮಂತರ ಹನಿಟ್ರ್ಯಾಪ್

ಶ್ರೀಮಂತರು, ಮಸಾಜ್ ಪಾರ್ಲರ್‌ಗಳು ಹಾಗೂ ವೈದ್ಯರೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದ್ದರು. ಹನಿಟ್ರ್ಯಾಪ್ ರೀತಿ ಹಣವುಳ್ಳವರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿತ್ತು. ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com