
ಬೆಂಗಳೂರು: ಆರೋಗ್ಯ ಸಂಬಂಧಿತ ಚಿಕಿತ್ಸೆಗೆ ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ ಎಂದು ಸಚಿವ ಮುನಿಯಪ್ಪ ಅವರು ಸೋಮವಾರ ಹೇಳಿದರು.
ಸೋಮವಾರ ಇಲ್ಲಿನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸದ್ಯಕ್ಕೆ 1.73 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳ ವಿಲೇವಾರಿ ಬಾಕಿ ಇದ್ದು, ಶೀಘ್ರದಲ್ಲೇ ಈ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಿಂದಿನ ಸರಕಾರದ ಅಂತ್ಯದಲ್ಲಿ 2.95 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇತ್ತು. ಅದರಲ್ಲಿ ನಾವು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದವರಲ್ಲಿ 2,36,162 ಅರ್ಜಿಗಳು ಅರ್ಹವಿದ್ದು, ಬಾಕಿ 56,930 ಅರ್ಜಿದಾರರು ಬಿಪಿಎಲ್ ಕೆಳಗೆ ಬರುವುದಿಲ್ಲ. ಅರ್ಹರಲ್ಲಿ 62 ಸಾವಿರ ಕಾರ್ಡ್ಗಳನ್ನು ಈಗಾಗಲೇ ಪಟ್ಟಿಗೆ ತಂದು ಪಡಿತರ ಕೊಡಲಾಗುತ್ತಿದೆ. ಬಾಕಿ ಕಾರ್ಡ್ಗಳ ಪರಿಶೀಲಿಸುತ್ತಿದ್ದು, ಬಾಕಿ ಇರುವ 1.73ಲಕ್ಷ ಕಾರ್ಡ್ದಾರರಿಗೂ ಆದಷ್ಟು ಬೇಗ ಪಡಿತರ ವಿತರಿಸಲಾಗುತ್ತದೆ.
ಆರೋಗ್ಯ ಸಂಬಂಧಿತ ಚಿಕಿತ್ಸೆಗೆ ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೂ ಎಪಿಎಲ್ ಮತ್ತು ಬಿಪಿಎಲ್ ಸೇರಿ 4 ಕೋಟಿಗೂ ಮೀರಿ ಅಧಿಕ ಕಾರ್ಡ್ಗಳ ವಿತರಣೆ ಮಾಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸುತ್ತಿದ್ದಂತೆ ಕೂಡಲೇ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
Advertisement