
ಬೆಂಗಳೂರು: ಉತ್ತರಾಖಂಡದ ಸಹಸ್ರತಾಲ್'ಗೆ ಟ್ರೆಕ್ಕಿಂಗ್'ಗೆ ತೆರಳಿ ಪ್ರತಿಕೂಲ ಹವಾಮಾನದಿಂದ ಮೃತಪಟ್ಟಿದ್ದ ನಗರದ 9 ಮಂದಿ ಚಾರಣಿಗರ ಶವಗಳೂ ಪತ್ತೆಯಾಗಿದ್ದು, ಹಿಮಗಾಳಿಯಲ್ಲಿ ಸಿಲುಕಿ ಬದುಕುಳಿದ 13 ಮಂದಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ರಕ್ಷಣೆಗೊಳಗಾದವರು ಗುರುವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಹಿಮಗಾಳಿಗೆ ಸಿಲುಕಿ ಸಾವನ್ನಪ್ಪಿದ 9 ಮಂದಿಯಲ್ಲಿ ಬುಧವಾರ ಐವರ ಶವ ಪತ್ತೆಯಾಗಿದ್ದವು. ಗುರುವಾರ ಮುಂಜಾನೆ ಕಾರ್ಯಾಚರಣೆ ನಡೆಸಿ ಇನ್ನುಳಿದ ನಾಲ್ವರ ಶವಗಳನ್ನೂ ಪತ್ತೆ ಹಚ್ಚಲಾಗಿದ್ದು, ಇದು ಪಾರ್ಥೀವ ಶರೀರಗಳನ್ನು ನಗರಕ್ಕೆ ಕರೆತರಲಾಗುತ್ತಿದೆ.
ಪವಾಡಸದೃಶವಾಗಿ ಬದುಕುಳಿದ 13 ಚಾರಣಿಗರು ಗುರುವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸುರಕ್ಷಿತವಾಗಿ ಆಗಮಿಸಿದರು.
ಈ ನಡುವೆ ಮನೇರಿಯ ಟ್ರೆಕ್ಕಿಂಗ್ ಏಜೆನ್ಸಿ ಹಿಮಾಲಯನ್ ವ್ಯೂ ಅಡ್ವೆಂಚರ್ನ ಗೈಡ್ಗಳಲ್ಲಿ ಒಬ್ಬರಾದ ರಘುವೀರ್ ಅವರು ಕರಾಳ ಕ್ಷಣಗಳನ್ನು ನೆನೆದಿದ್ದು, ಚಾರಣಿಗರ ರಕ್ಷಣೆಗೆ ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ ಎಂದು ಹೇಳಿದ್ದಾರೆ.
ಜೂನ್.2 ರಂದು ದುರ್ಘಟನೆ ಸಂಭವಿಸಿದ್ದು, ಘಟನೆಯಿಂದ ರಘುವೀರ್ ಅವರು ಆಘಾತಕ್ಕೊಳಗಾಗಿದ್ದಾರೆ. ಕಳೆದ 15 ವರ್ಷಗಳಿದ ಚಾರಣಿಗರನ್ನು ಚಾರಣಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಈ ರೀತಿಯ ಘಟನೆ ಸಂಂಭವಿಸಿರುವುದು ಇದೇ ಮೊದಲು. ಕಳೆದ ವರ್ಷ ಉತ್ತರಕಾಶಿಯ ದ್ರೌಪದಿ ಕಾ ದಂಡಾ ಚಾರಣದಲ್ಲಿ ಹಿಮಕುಸಿತ ಸಂಭವಿಸಿತ್ತು. ಈ ದುರ್ಘಟನೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಸಿತ್ತು.
ದ್ರೌಪದಿ ಕಾ ದಂಡ ಶಿಖರವು ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯಲ್ಲಿ 5,670 ಮೀಟರ್ಗಳಷ್ಟು ಎತ್ತರದಲ್ಲಿದೆ. ಸೆಪ್ಟೆಂಬರ್ 2023 ರಲ್ಲಿ, ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ನ ಬೋಧಕರು ಸೇರಿದಂತೆ 29 ಚಾರಣಿಗರು ಅಲ್ಲಿ ಸಿಕ್ಕಿಬಿದ್ದಿದ್ದರು. ಅವರಲ್ಲಿ 27 ಮಂದಿ ಸಾವನ್ನಪ್ಪಿದರು. ಉಳಿದ ಎರಡು ಶವಗಳು ಅಕ್ಟೋಬರ್ನಲ್ಲಿ ಪತ್ತೆಯಾಗಿದ್ದವು.
ಬೆಂಗಳೂರಿನಿಂದ ಬಂದ ತಂಡಕ್ಕೆ ಮಾರ್ಗದರ್ಶನ ನೀಡುವ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಹಿಮಗಾಳಿ ಆರಂಭವಾದಾಗ ಸಹಾಯಕ್ಕಾಗಿ ಸುಮಾರು 25-30 ಕಿ.ಮೀ ಸುತ್ತಾಡಿದೆ. ಬಳಿಕ ಸ್ನೇಹಿತ ಸಹಾಯ ಪಡೆಯಲು ತೆರಳಿದ. ಈ ವೇಳೆ ಚಾರಣಿಗರ ರಕ್ಷಣೆಗೆ ನನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದೆ. ಹವಾಮಾನ ಅತ್ಯಂತ ಕೆಟ್ಟದಾಗಿದ್ದರಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ. ಗೋಚರತೆ ಶೂನ್ಯವಾಗಿತ್ತು. ಇತರರು ಹೇಗೆ ಬದುಕುಳಿದರು ಎಂಬುದನ್ನು ನೆನೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಪ್ರಯತ್ನಗಳ ನಡುವಲ್ಲೂ 9 ಮಂದಿ ಮೃತಪಟ್ಟಿದ್ದು, ಅತೀವ್ರ ದುಃಖ ತಂದಿದೆ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಹವಾಮಾನ ವುದೇ ಸಮಯದಲ್ಲಿ ಬದಲಾಗಬಹುದು. ನಾವೆಷ್ಟೇ ಸಿದ್ಧತೆಯಿಂದ ಹೋಗಿದ್ದರೂ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಚಾರಣಕ್ಕೆ ಹೋದಾಗ ಎಲ್ಲವೂ ಸರಿಯಿತ್ತು. ಆದರೆ, ಶಿಬಿರಕ್ಕೆ ಹಿಂತಿರುಗುವ ವೇಳೆ ದುರ್ಘಟನೆ ಸಂಭವಿಸಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement