
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿ ಮೇಲೆ ಮತ್ತೊಂದು ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಮತ್ತು ಸಜಾ ಕೈದಿಗಳು ವಿಚಾರಣಾಧೀನ ಕೈದಿ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಹಲ್ಲೆಗೊಳಗಾದ ನಾಗರಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆತನನ್ನು ಇತ್ತೀಚೆಗೆ ಮಂಡ್ಯದಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು.
ಹೇಳಿದ ಕೆಲಸ ಮಾಡದಿದ್ದರೆ ಸಜಾ ಕೈದಿಗಳು ವಿಚಾರಣಾ ಕೈದಿಗಳ ಮೇಲೆ ಇಲ್ಲ-ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಜೈಲು ಸಿಬ್ಬಂದಿಗೆ ಸುಳ್ಳು ಹೇಳಿ, ವಿಚಾರಣಾ ಕೈದಿಗೆ ಹಲ್ಲೆ ಮಾಡುತ್ತಾರೆ. ಸಜಾ ಕೈದಿಗಳ ಮಾತನ್ನು ನಂಬಿ 15 ಜನ ಜೈಲು ಸಿಬ್ಬಂದಿ ನಾಗರಾಜ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಜೈಲಿನಲ್ಲಿರುವ ಸೀನಿಯರ್ ಕೈದಿ ನಟರಾಜ್ ಎಂಬಾತ ನಾಗರಾಜ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಲ್ಲೆಗಳ ಕುರಿತು ನಾಗರಾಜ್ ವಿಡಿಯೋ ಮಾಡಿ ತನ್ನ ತಾಯಿಗೆ ವಾಟ್ಸಪ್ ಕಳುಹಿಸಿದ್ದನು. ಜೈಲಿನಲ್ಲಿ ಮಗ ನಾಗರಾಜ್ ಪರಿಸ್ಥಿತಿ ಕಂಡು ತಾಯಿ ಕಣ್ಣೀರು ಹಾಕಿ ನ್ಯಾಯಕ್ಕಾಗಿ ವಿಡಿಯೋ ಸಮೇತ ಮಾನವಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
Advertisement