
ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ದ್ವೇಷ ಹರಡುವ, ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಅಂತವರ ವಿರುದ್ದ ಸೈಬರ್ ಕ್ರೈಂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಟ, ನಿರ್ದೇಶಕ ಇಂದ್ರಜೀತ್ ಲಂಕೇಶ್ ಅವರು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಯಾವುದೇ ಬೆಳವಣಿಗೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿದೆ. ಆದರೆ, ಕೆಲವರು ಈ ವೇದಿಕೆಯಲ್ಲಿ ದ್ವೇಷ ಹರಡುವ, ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಅಂತವರ ವಿರುದ್ದ ಸೈಬರ್ ಕ್ರೈಂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪೊಲೀಸರು ಸೈಬರ್ ಅಪರಾಧಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಂಡಿದ್ದರೂ ಅವು ಸಂತ್ರಸ್ತರಿಗೆ ಎಂದಿಗೂ ಪ್ರಯೋಜನ ನೀಡಿಲ್ಲ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ಇಂತಹ ಶಕ್ತಿಗಳನ್ನು ಎದುರಿಸಲು ಗಟ್ಟಿಧ್ವನಿ ಹೊಂದಿರುತ್ತಾರೆ. ಆದರೆ, ಸಾಮಾನ್ಯ ಜನರು ಅಂತಹ ಶಕ್ತಿಗಳಿಗೆ ಬಲಿಯಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ದರ್ಶನ್ ಪ್ರಕರಣ ಸಂಬಂಧ ಮಾತಾಡಿ, ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ, ಆದರೆ, ಅವರ (ದರ್ಶನ್) ಕುಟುಂಬ ಸದಸ್ಯರಿಗೆ ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಶಕ್ತಿಯನ್ನು ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದರು.
ಇದೇ ವೇಳೆ ದರ್ಶನ್ ಮತ್ತು ಅವರ ಗ್ಯಾಂಗ್ ನಿಂದ ಕೊಲೆಯಾದ ರೇಣುಕಾಸ್ವಾಮಿ ಅವರ ಪತ್ನಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಇಂತಹ ಪ್ರಕರಣದಲ್ಲಿ ಭಾಗಿಯಾದವರು ನಟ, ರಾಜಕಾರಣಿ ಯಾರೇ ಆದರೂ ಅವರಿಗೆ ರಾಜಮರ್ಯಾದೆ ಕೊಡಬಾರದು. ರೇಣಾಕಾಸ್ವಾಮಿ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದು, ಅವರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಮಾಧ್ಯಮದವರು ವಾಸ್ತವ ವರದಿ ಮಾಡಿದ್ದರಿಂದ ರೇಣುಕಾಸ್ವಾಮಿ ಪ್ರಕರಣ ಗಂಭೀರತೆ ಪಡೆದಿದೆ. ಇಲ್ಲದಿದ್ದರೆ ಇದನ್ನು ಕಸದ ಬುಟ್ಟಿಗೆ ಎಸೆಯುವ ಸಾಧ್ಯತೆ ಇತ್ತು. ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದ್ದು ಖಂಡನೀಯ. ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು
Advertisement