ನಟ ದರ್ಶನ್ಗೆ ಸಾಲು ಸಾಲು ಸಂಕಷ್ಟ: ರಾಜಕಾಲುವೆ ಒತ್ತುವರಿ ಕೇಸ್ಗೆ ಮರುಜೀವ; ತೂಗುದೀಪ ನಿವಾಸಕ್ಕೂ ಸಂಚಕಾರ!
ಬೆಂಗಳೂರು: ಹಿಂಸೆ ಮತ್ತು ಕೊಲೆ ಪ್ರಕರಣದಲ್ಲಷ್ಟೇ ನಟ ದರ್ಶನ್ ಅವರಿಗೆ ಸಂಕಷ್ಟ ಎದುರಾಗಿಲ್ಲ ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್ ಹಾಗೂ ರಾಜಕಾಲುವೆ ಒತ್ತುವರಿ ಪ್ರಕರಣದಲ್ಲೂ ಸಂಕಷ್ಟ ಎದುರಾಗಿದೆ.
ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಅವರಿಗೂ ಕೂಡ ಸಂಕಷ್ಟ ಎದುರಾಗಿದೆ.
ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್ಗೆ ಸಂಬಂಧಿಸಿದ್ದಂತೆ ಎಫ್ಐಆಪ್ ದಾಖಲಾಗಿ, ಅಧಿಕಾರಿಗಳು ನೋಟಿಸ್ ಕೂಡ ನೀಡಿದ್ದರು. ಆದರೆ, ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ.
ಒಂದಲ್ಲಾ ಎರಡಲ್ಲಾ ಒಟ್ಟು ಐದು ನೋಟಿಸ್ ನೀಡಿದ್ದರೂ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ ಕೇಸ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ A1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ನಟ ದರ್ಶನ್ A3 ಸ್ಥಾನದಲ್ಲಿದ್ದಾರೆ.
ನಟ ದರ್ಶನ್ ತೋಟವು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಇದೆ. ಈ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಿಯಮಗಳ ಪ್ರಕಾರ ಬಾರ್ ಹೆಡೆಡ್ ಗೂಸ್ ಸಾಕುವುದು ಕಾನೂನು ಬಾಹಿರವಾಗಿದೆ. ಆದರೆ, ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದರಿಂದ ನಟ ದರ್ಶನ್ನನ್ನು ಬಂಧನಕ್ಕೊಳಪಡಿಸಬೇಕಿತ್ತು. ಆದರೆ, ಸೆಲೆಬ್ರಿಟಿ ಆಗಿದ್ದರಿಂದ ವಿಚಾರಣೆಗೆ ಅವಕಾಶ ನೀಡಲಾಗಿತ್ತು. ನಟ ದರ್ಶನ್ ತಲೆಮರೆಸಿಕೊಳ್ಳದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಬಂಧಿಸಿರಲಿಲ್ಲ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೇಸ್ ಅನ್ನು ಚುರುಕುಗೊಳಿದೆ. ಜೊತೆಗೆ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ರಾಜಾಕಾಲುವೆ ಒತ್ತುವರಿ ಕೇಸ್ ಕೂಡ ಮರುಜೀವಕೊಂಡಿದ್ದು, ಅಕ್ರಮವಾಗಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಬಂಗಲೆಗೂ ಸಂಚಕಾರ ಬಂದಿರುವ ಹಾಗಿದೆ.
ಬೆಂಗಳೂರಿನಲ್ಲಿ 2016ರ ಬೃಹತ್ ಮಳೆಗೆ ನೀರು ಬಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸರಕಾರ ಮತ್ತು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ತೀರ್ಮಾನಿಸಿದ್ದವು.
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಹಣ ಮತ್ತು ಅಧಿಕಾರದ ಪ್ರಭಾವದಿಂದಾಗಿ ಇವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಉಳಿಸಿಕೊಂಡಿದ್ದರು. ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರಲು ಇವರಿಗೆ ಸರ್ಕಾರವೇ ಪರೋಕ್ಷವಾಗಿ ನೆರವಾಗಿತ್ತು. ತಡೆಯಾಜ್ಞೆ ತಂದು 8 ವರ್ಷಗಳಾಗಿದ್ದು, ಇದುವರೆಗೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಇದೀಗ ಬಿಬಿಎಂಪಿ ದರ್ಶನ್ ಸೇರಿದಂತೆ ಅನೇಕ ಮಂದಿ ಹೈಕೋರ್ಟ್ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಸರ್ಕಾರ ಮುಂದಾಗಿದೆ. ಇದುವರೆಗೂ ತಡೆಯಾಜ್ಞೆ ನೀಡಿದ್ದ ಅವಧಿ ಎಷ್ಟು ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಮತ್ತೆ ಪರಿಶೀಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಬಿಬಿಎಂಪಿ ಪ್ರಯತ್ನ ನಡೆಸಲಿದೆ ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.
2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಪ್ರಾಥಮಿಕ ಕಾಲುವೆ, ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಕಟ್ಟಡಗಳ ಪಟ್ಟಿ ಮಾಡಿಕೊಂಡಿತ್ತು. ಸರಕಾರದ ಭೂ ದಾಖಲೆಗಳ ಪ್ರಕಾರ ಆರ್ ಆರ್ ನಗರದ ದರ್ಶನ್ ಅವರ ನಿವಾಸ ಪ್ರಾಥಮಿಕ ಕಾಲುವೆಯ ಬಫರ್ ಝೋನ್ ಮೇಲೆ ನಿರ್ಮಿಸಿರುವುದು ಪತ್ತೆಯಾಗಿತ್ತು.
ಐಡಿಯಲ್ ಹೋಮ್ಸ್, ದರ್ಶನ್, ಶಾಮನೂರು ಅವರ ಆಸ್ಪತ್ರೆ ಸೇರಿದಂತೆ 67 ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸರ್ಕಾರ ನೋಟಿಸ್ ನೀಡುತ್ತಿದ್ದಂತೆ ದರ್ಶನ್ ಮತ್ತಿತರರು ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ನಂತರ 2016 ಅಕ್ಟೋಬರ್ ನಲ್ಲಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು.
ಅಲ್ಲಿಗೆ ಮಳೆಗಾಲವೂ ಮುಗಿದಿತ್ತು. ಸರಕಾರ ಮತ್ತು ಸಾರ್ವಜನಿಕರೆಲ್ಲರೂ ಈ ವಿಷಯವನ್ನು ಮರೆತೇ ಬಿಟ್ಟಿದ್ದರು. ಆದರೆ, ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಇದೇ ರೀತಿ ನಿರ್ಮಿಸಲಾಗಿದ್ದ ಬಡ ಮಧ್ಯಮ ವರ್ಗದ ಜನರ ಮನೆಗಳನ್ನು ನಿರ್ದಾಕ್ಷಿಣಾಗಿ ಕೆಡವಲಾಗಿತ್ತು. ಸರ್ಕಾರದ ಈ ಧೋರಣೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ನಂತರದ ವರ್ಷಗಳಲ್ಲಿ ಅತಿಯಾದ ಮಳೆಯೂ ಸುರಿಯಲಿಲ್ಲ. ಕೆಲವು ವರ್ಷ ಬರಗಾಲ ಆವರಿಸಿತ್ತು. ಹಾಗಾಗಿ ಇವರೆಲ್ಲರೂ ಬಚಾವ್ ಆಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ