ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಬಿಜೆಪಿ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರಾಜ್ಯದಲ್ಲಿ ಅಧಿಕಾರ ಬಂದಾಗಿನಿಂದಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ದೇಶ ವಿರೋಧಿ ಶಕ್ತಿಗಳಿಗೆ ಆಡಳಿತ ಪಕ್ಷದ ನಾಯಕರಿಂದ ಬೆಂಬಲ ಸಿಗುತ್ತಿದೆ. ಪೊಲೀಸರ ನೈತಿಕ ಸ್ಥೈರ್ಯ ಕಡಿಮೆಯಾಗಿದೆ ಎಂದರು.
ಪೊಲೀಸರ ವರ್ಗಾವಣೆಯಲ್ಲಿನ ಭಾರೀ ಭ್ರಷ್ಟಾಚಾರವು ಅದಕ್ಷರನ್ನು ಪ್ರಮುಖ ಹುದ್ದೆಗಳಿಗೆ ತಂದಿದೆ. ನಗರದಲ್ಲಿ ಈಗ ಎಲ್ಲಾ ಸಮಾಜಘಾತುಕ ಶಕ್ತಿಗಳು ಓಡಾಡುತ್ತಿದ್ದು, ಬೆಂಗಳೂರು ನಗರದಲ್ಲಿ ಬಾಂಬ್ ಹಾಕುವ ಹುಮ್ಮಸ್ಸು ಬಂದಿದೆ. ಇದು ಉಗ್ರರೊಂದಿಗೆ ನಂಟು ಹೊಂದಿದ್ದು, ಬೆಂಗಳೂರಿನಲ್ಲಿ ಕೆಲವು ಉಗ್ರರಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಹ 15 ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದೇವು. ಈ ಸರ್ಕಾರದ ತುಷ್ಟೀಕರಣ ರಾಜಕಾರಣವೇ ಇದಕ್ಕೆಲ್ಲ ಕಾರಣವಾಗಿದೆ. ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕು ಮತ್ತು ಇದನ್ನು ಮಾಡದಿದ್ದರೆ, ಸರ್ಕಾರ ತೊಲಗಬೇಕು ಎಂದರು.
Advertisement