ಕೌಶಲ್ಯಧಾರಿತ ಮಾನವ ಸಂಪನ್ಮೂಲ ಹೊಂದಿರುವ ದೇಶದ 4ನೇ ದೊಡ್ಡ ರಾಜ್ಯ ಕರ್ನಾಟಕ- ಡಿಸಿಎಂ ಡಿಕೆ ಶಿವಕುಮಾರ್

ಕೌಶಲ್ಯಧಾರಿತ ಮಾನವ ಸಂಪನ್ಮೂಲ ಹೊಂದಿರುವ ದೇಶದ 4 ನೇ ದೊಡ್ಡ ರಾಜ್ಯ ಕರ್ನಾಟಕವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೌಶಲ್ಯಧಾರಿತ ಮಾನವ ಸಂಪನ್ಮೂಲ ಹೊಂದಿರುವ ದೇಶದ 4 ನೇ ದೊಡ್ಡ ರಾಜ್ಯ ಕರ್ನಾಟಕವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ನಡೆದ 54 ನೇ ವಿಶ್ವ ವ್ಯಾಪಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಡಿಕೆ ಶಿವಕುಮಾರ್, ಭಾರತದ ನಾನಾ ಮೂಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರು ದೇಶದ ಶೈಕ್ಷಣಿಕ ರಾಜಧಾನಿಯಾಗಿ ಬೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು, 234 ಎಂಜಿನಿಯರಿಂಗ್ ಕಾಲೇಜುಗಳು, 55 ಮೆಡಿಕಲ್, 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ ಎಂದು ಅವರು ತಿಳಿಸಿದರು.

ಡಿಸಿಎಂ ಡಿಕೆ ಶಿವಕುಮಾರ್
ರಾಜ್ಯದಲ್ಲಿ ಕೊಳಗೇರಿಗಳನ್ನು ಇಲ್ಲವಾಗಿಸಲು ನಗರ ವಸತಿ ಯೋಜನೆಗಳೇ ಪರಿಹಾರ: ಡಿಕೆ ಶಿವಕುಮಾರ್

ಕಳೆದ ಎರಡು ವರ್ಷಗಳಲ್ಲಿ 27 ಸಾವಿರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ಸಂವಹನ ಪದವಿ ಪಡೆದಿದ್ದಾರೆ. 20 ಸಾವಿರಕ್ಕೂ ಹೆಚ್ಚು ಆಟೋಮೋಟಿವ್ ವಿನ್ಯಾಸಕಾರರು, ಚಿಪ್ ತಂತ್ರಜ್ಞರು, 10 ಸಾವಿರ ಇತರೇ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ ಎಂದು ಹಾರ್ವರ್ಡ್ ಉದ್ಯಮ ಸಮೀಕ್ಷಾಕಾರರು ತಿಳಿಸಿದ್ದಾರೆ‌. 1 ಲಕ್ಷಕ್ಕೂ ಹೆಚ್ಚು ಪಿಎಚ್‌ ಡಿ ಪದವೀಧರರನ್ನು ಹೊಂದಿರುವ ರಾಜ್ಯ ನಮ್ಮದು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಬೆಂಗಳೂರು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ. ಮೈಸೂರು ಅರಸರು 1909 ರಲ್ಲಿಯೇ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ವಿದ್ಯಾ ಸಂಸ್ಥೆಗಳ ಸ್ಥಾಪನೆಗೆ ಭೂಮಿ ನೀಡಿದ್ದರು.

2023 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 8.4 ರಷ್ಟಿದೆ. ಕರ್ನಾಟಕ ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದೆ. ಸರ್ಕಾರ, ನಾಗರಿಕ ಸಂಘಟನೆಗಳು, ಉದ್ಯಮಿಗಳು ಸೇರಿಕೊಂಡು ಬೆಂಗಳೂರಿನ ಸಮಸ್ಯೆಗಳ ನಿವಾರಣೆಗೆ ಪಯತ್ನ ಮಾಡುತ್ತಿದ್ದೇವೆ. ರೋಮ್ ನಗರವನ್ನು ಒಂದೇ ದಿನ ಕಟ್ಟಲಿಲ್ಲ. ಅದೇ ರೀತಿ ಬೆಂಗಳೂರನ್ನು ವಿಶ್ವಮಾನ್ಯ ನಗರವನ್ನಾಗಿ ಹಂತ, ಹಂತವಾಗಿ ನಿರ್ಮಾಣ ಮಾಡಲಾಗುವುದು. ದೇಶದ ಅಭಿವೃದ್ಧಿಗೆ ಕರ್ನಾಟಕ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಂಗಳೂರು ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ತನ್ನದೇ ಆದ ಸಂಸ್ಕೃತಿ ಹೊಂದಿದೆ. ಶೈಕ್ಷಣಿಕ ನಗರವಾಗಿ ಬೆಳೆಯುತ್ತಿದೆ. ಬೆಂಗಳೂರು ಕೇವಲ ಐಟಿ ಉದ್ಯಮದ ನಗರವಾಗಿ ಮಾತ್ರ ಬೆಳೆದಿಲ್ಲ. ಅದರ ಆಚೆಗೂ ಬೆಳೆದಿದೆ. ಅತ್ಯಂತ ದೊಡ್ಡ ಹಾಗೂ ಶ್ರೀಮಂತಿಕೆಯ ಇತಿಹಾಸ ನಮ್ಮದು. ಅತ್ಯುತ್ತಮ ಯುವ ಮಾನವ ಸಂಪನ್ಮೂಲ ಬೆಂಗಳೂರಿನಲ್ಲಿದೆ. ಅತ್ಯುತ್ತಮ ಗ್ರಾಹಕ ಮಾರುಕಟ್ಟೆಯಿದೆ. ಐಟಿ, ಸ್ಟಾರ್ಟ್ ಆಪ್ ಗಳ ಸ್ವರ್ಗವಾಗಿರುವ ಕರ್ನಾಟಕ ಶೇ. ಶೇ 60 ರಷ್ಟು ಬಯೋ ಟೆಕ್ನಾಲಜಿಗೆ ಕ್ಷೇತ್ರಕ್ಕೆ ಕೊಡುಗೆ ನೀಡುತ್ತದೆ. ಶೇ40 ರಷ್ಟು ಸಾಫ್ಟ್‌ವೇರ್ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದೇವೆ. ನವೋಧ್ಯಮ ಸ್ಥಾಪನೆಯಲ್ಲಿ ಜಗತ್ತಿನಲ್ಲಿಯೇ 20 ನೇ ಸ್ಥಾನದಲ್ಲಿ ಇದ್ದೇವೆ ಎಂದರು.

ಬೆಂಗಳೂರು ಅತ್ಯಂತ ಸುರಕ್ಷಿತವಾದ ನಗರ. ಅಮೆರಿಕಾ ಭಯೋತ್ಪಾದಕ ದಾಳಿಯ ನಂತರ ಇಡೀ ಜಗತ್ತೇ ಬೆಂಗಳೂರಿನ ಕಡೆಗೆ ನೋಡುವಂತಾಯಿತು. ಕೋಮು ಸಂಘರ್ಷಗಳು ಇಲ್ಲ, ಯಾವುದೇ ಸಂಘರ್ಷಗಳು ನಡೆಯುವುದಿಲ್ಲ.ಕರ್ನಾಟಕ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಯಲ್ಲಿ ಕ್ರಾಂತಿ ಮಾಡಿದೆ. ಕೃಷಿ ಉತ್ಪಾದನೆಯಲ್ಲಿ ಸಾಕಷ್ಟು ಮುಂದುವರೆದಿದೆ. 70 ಕ್ಕೂ ಹೆಚ್ಚು ವಿಮಾನಗಳು ಅಲಂಕಾರಿಕ ಪುಷ್ಪಗಳು, ತರಕಾರಿಗಳು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳನ್ನು ಬೆಂಗಳೂರಿನಿಂದ ಇತರೇ ದೇಶಗಳಿಗೆ ತೆಗೆದುಕೊಂಡು ಹೋಗುತ್ತವೆ. ಇದು ನಮ್ಮ ಹೆಗ್ಗಳಿಕೆ ಎಂದು ತಿಳಿಸಿದರು.

ಈ ಹಿಂದೆ ಇಂಧನ ಸಚಿವನಾಗಿದ್ದಾಗ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳದೇ 2,500 ಮೆ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಬೆಂಗಳೂರನ್ನು ಪರಿಸರ, ಶೈಕ್ಷಣಿಕ, ಔದ್ಯೋಗಿಕ ಸ್ನೇಹಿ ನಗರವನ್ನಾಗಿ ನಿರ್ಮಾಣ ಮಾಡುತ್ತದೆ. ಪ್ರಮುಖ ಉದ್ಯಮಿಗಳು ನಮ್ಮ ಜೊತೆ ಕೈ ಜೋಡಿಸಿ ಮುನ್ನಡೆಯಬೇಕು ಎಂದು ಮನವಿ ಮಾಡುತ್ತೇನೆ. ಎಲ್ಲರೂ ಒಗ್ಗೂಡಿ, ಒಂದಾಗಿ, ಪ್ರಗತಿ ಸಾಧಿಸೋಣ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com