ನೀರಿನ ಸಮಸ್ಯೆ ನಿರ್ವಹಣೆಗೆ ನಿಯಂತ್ರಣ ಕೊಠಡಿ, ಸಹಾಯವಾಣಿ ಆರಂಭ; ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚನೆ: ಸಿಎಂ

ಕರ್ನಾಟಕವು ಭೀಕರ ಬರಗಾಲದಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾರಣ, ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳು ಮತ್ತು ಸಹಾಯವಾಣಿ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಘೋಷಿಸಿದರು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕವು ಭೀಕರ ಬರಗಾಲದಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾರಣ, ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳು ಮತ್ತು ಸಹಾಯವಾಣಿ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಘೋಷಿಸಿದರು.

ನೀರಿನ ಸಮಸ್ಯೆ ಕುರಿತು ಇಂದು ವಿಧಾನಸೌಧದಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, 'ರಾಜ್ಯದಲ್ಲಿ ಬರಗಾಲವನ್ನು ಎದುರಿಸಲು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ನೀರಿನ ಸಮಸ್ಯೆ ಎದುರಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಕಂಟ್ರೋಲ್ ರೂಂಗಳಿದ್ದು, ಸಹಾಯವಾಣಿ ರಚಿಸಲಾಗುವುದು. ನೀರಿನ ಸಮಸ್ಯೆ ಎದುರಿಸಲು ರಾಜ್ಯ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಹಣದ ಕೊರತೆಯಾಗದಂತೆ ನೋಡಿಕೊಳ್ಳಲಿದೆ ಎಂದು ಹೇಳಿದರು.

ಅಂತೆಯೇ ತಾಲ್ಲೂಕು ಮಟ್ಟದ ಅಂಕಿಅಂಶಗಳ ಮಾಹಿತಿ ನೀಡಿದ ಸಿಎಂ, 'ರಾಜ್ಯದ 236 ತಾಲ್ಲೂಕುಗಳ ಪೈಕಿ ಸುಮಾರು 223 ತಾಲ್ಲೂಕುಗಳು ಬರಪೀಡಿತವಾಗಿದ್ದು, 219 ತೀವ್ರವಾಗಿ ಬಾಧಿತವಾಗಿವೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಕರೆಸಿ ನಿರ್ದೇಶನ ನೀಡಿದ್ದೆವು. ಕುಡಿಯುವ ನೀರು ಒದಗಿಸಲು ಸಾಧ್ಯವಾದಷ್ಟು ಹಣ ನೀಡುತ್ತೇವೆ. ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಿಧಿಯಲ್ಲಿ 854 ಕೋಟಿ ರೂ. 130 ಕೋಟಿ ತಹಶೀಲ್ದಾರರ ಬಳಿ ಇದೆ. ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆಗಳು ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಅಲ್ಲಿನ ಜನರಿಗೆ ಉದ್ಯೋಗವನ್ನು ಖಾತರಿಪಡಿಸುತ್ತವೆ ಎಂದರು.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ
ಜಿಲ್ಲಾಡಳಿತದೊಂದಿಗೆ ಸಿಎಂ ಸಿದ್ದರಾಮಯ್ಯ ವಿಡಿಯೋ ಸಂವಾದ: ಪ್ರತಿ ಜಿಲ್ಲೆಗೆ 2 ಕೋಟಿ ರೂ. ಹೆಚ್ಚುವರಿ ಅನುದಾನ

ಇದುವರೆಗೆ ಈ ಕಾರ್ಯಪಡೆಗಳು ತಾಲೂಕು ಮಟ್ಟದಲ್ಲಿ 646 ಸಭೆಗಳನ್ನು ಕರೆದಿವೆ ಎಂದ ಸಿದ್ದರಾಮಯ್ಯ, ರಾಜ್ಯದಲ್ಲಿ 20 ಬರ ನಿರ್ವಹಣಾ ಅಧಿಕಾರಿಗಳು ಇದುವರೆಗೆ 307 ಸಭೆಗಳನ್ನು ನಡೆಸಿದ್ದಾರೆ. 98 ತಾಲ್ಲೂಕುಗಳ ಸುಮಾರು 412 ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 175 ಗ್ರಾಮಗಳಿಗೆ 204 ನೀರಿನ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 500 ಗ್ರಾಮ ಪಂಚಾಯಿತಿಗಳಲ್ಲಿ 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರದಲ್ಲಿ ನಗರಸಭೆಯ 120 ಟ್ಯಾಂಕರ್‌ಗಳು ಮತ್ತು 232 ಜಲಮಂಡಳಿ ಟ್ಯಾಂಕರ್‌ಗಳು ನೀರು ಸರಬರಾಜು ಮಾಡುತ್ತಿವೆ. ಖಾಸಗಿ ಬೋರ್ ವೆಲ್ ಗಳ ಮೇಲೆ ಸ್ಥಳೀಯ ಆಡಳಿತ ನಿಯಂತ್ರಣ ಸಾಧಿಸಿ, ಒಪ್ಪಂದ ಮಾಡಿಕೊಂಡು ಅದಕ್ಕೆ ತಕ್ಕಂತೆ ಹಣ ಪಾವತಿಸಲಾಗುವುದು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮತಿಯೊಂದಿಗೆ ಹೊಸ ಬೋರ್‌ವೆಲ್‌ಗಳನ್ನು ಕೊರೆಯಲು 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಲ್ಲದೆ ರೈತರ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 33.25 ಲಕ್ಷ ರೈತರಿಗೆ ತಲಾ 2,000 ರೂ.ಗಳ ತ್ವರಿತ ಪರಿಹಾರ ಮೊತ್ತವನ್ನು ಪಾವತಿಸಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 631 ಕೋಟಿ ರೂ. ವ್ಯಯಿಸಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com