Weather Forecast: ನಾಳೆ, ನಾಡಿದ್ದು ಬೆಂಗಳೂರಿನಲ್ಲಿ ಮಳೆ; ಬಿಸಿಲಿನ ಬೇಗೆಗೆ ತಂಪೆರೆವ ಸೂಚನೆ
ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮಾರ್ಚ್ 21 ಮತ್ತು 22 ರಂದು ಲಘು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಮಳೆಯಿಂದಾಗಿ ನಗರದಲ್ಲಿ ತಾಪಮಾನಕ್ಕೆ ಕೊಂಚ ಬ್ರೇಕ್ ಬೀಳಲಿದ್ದು, ಹೆಚ್ಚುತ್ತಿರುವ ತಾಪಮಾನ ಮತ್ತು ನೀರಿನ ಕೊರತೆಯಿಂದ ಬಳಲುತ್ತಿರುವ ನಿವಾಸಿಗಳಿಗೆ ರಿಲೀಫ್ ತರಲಿದೆ.
ನಗರದಲ್ಲಿ ಸದ್ಯ ಮಳೆಯ ಕೊರತೆಯಿಂದಾಗಿ ನೀರಿನ ಬಿಕ್ಕಟ್ಟು ಎದರಾಗಿದ್ದು, ನೀರಿನ ಪೂರೈಕೆಗಾಗಿ ಕೊಳವೆಬಾವಿಗಳು ಮತ್ತು ಕಾವೇರಿ ಜಲಾಶಯವನ್ನು ಹೆಚ್ಚು ಅವಲಂಬಿಸಿದೆ. ತಾಪಮಾನದ ಹೆಚ್ಚಳ ಮತ್ತು ಮಳೆಯಾಗದಿರುವ ಪರಿಣಾಮ ಇದೀಗ ಹಲವಾರು ಕೊಳವೆಬಾವಿಗಳು ಬತ್ತಿದ್ದು, ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರುವರಿಯಲ್ಲಿ ಕನಿಷ್ಠ ಮಳೆ ಬೀಳುತ್ತದೆ. ಸರಾಸರಿ 18.5 ಮಿಮೀ ಮಾಸಿಕ ಮಳೆಯೊಂದಿಗೆ ಮಾರ್ಚ್ ತಿಂಗಳು ಪೂರ್ವ ಮುಂಗಾರು ಋತುವಿನ ಆರಂಭವನ್ನು ಸೂಚಿಸುತ್ತದೆ. ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಮೇ ತಿಂಗಳಿನಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಸ್ಕೈಮೇಟ್ ಹವಾಮಾನ ಸಂಸ್ಥೆ ಪ್ರಕಾರ, ನಗರದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿ 213 ಮಿಮೀ ಮಳೆಯಾಗಲಿದೆ ಎಂದಿದೆ.
ಇದೀಗ ಹವಾಮಾನ ಇಲಾಖೆ ಪ್ರಕಾರ, ಮಾರ್ಚ್ 21 ರಿಂದ 23ರ ನಡುವೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.
ಗಣನೀಯ ಮಳೆಯಾಗುವ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ, ಸದ್ಯದ ನೀರಿನ ಬಿಕ್ಕಟ್ಟಿನಿಂದ ಪರಿಹಾರಕ್ಕಾಗಿ ಕಾತರದಿಂದ ಕಾಯುತ್ತಿರುವ ಬೆಂಗಳೂರಿನ ನಿವಾಸಿಗಳಿಗೆ ಈ ಮುನ್ಸೂಚನೆಯು ಭರವಸೆಯ ಕಿರಣವನ್ನು ನೀಡುತ್ತದೆ.