ಬೆಂಗಳೂರು: ಪ್ರೇಯಸಿ ಬೇರ್ಪಟ್ಟಿದ್ದಕ್ಕೆ ಬೇಸತ್ತು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಹರ್ಷಿತ್ಗೆ ತನ್ನ ಪ್ರೇಯಸಿಯ ಸಂಬಂಧಿಯೊಬ್ಬರು ಕರೆ ಮಾಡಿ, ಆಕೆಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ಆಕೆಯಿಂದ ದೂರ ಉಳಿಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಯುವತಿ ಹರ್ಷಿತ್ ಜೊತೆ ಮಾತನಾಡುವುದನ್ನು ನಿಲ್ಲಿಸಿ, ಆಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದ್ದಾಳೆ. ಬಳಿಕ ಹರ್ಷಿತ್ ಕರೆಗಳನ್ನು ನಿರ್ಲಕ್ಷಿಸಿದ್ದಾಳೆ. ಇದರಿಂದ ನೊಂದ ಆತ ಆನೇಕಲ್ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು ಸೇರಿಕೊಂಡಿದ್ದ ಹರ್ಷಿತ್, ತನಗೆ ಬೆದರಿಕೆ ಹಾಕಿರುವ ಸಂಬಂಧಿಯ ಫೋನ್ ನಂಬರ್ ಅನ್ನು ತನ್ನ ತಾಯಿಗೆ ವಾಟ್ಸಾಪ್ ಮಾಡಿದ್ದಾನೆ. ಬಳಿಕ ಆತನ ತಾಯಿ ಅದೇ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದು, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಸಂತ್ರಸ್ತನ ಪೋಷಕರು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದು, ಹರ್ಷಿತ್ ಯುವತಿಯೊಂದಿಗೆ ಸುಮಾರು ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು ಮತ್ತು ಮಗನ ಸಾವಿಗೆ ಆಕೆಯ ಸಂಬಂಧಿಕರೇ ಕಾರಣ ಎಂದು ದೂರಿದ್ದಾರೆ.
ಹರ್ಷಿತ್ ಕೆಲಸ ಮಾಡಲು ಆರಂಭಿಸಿದಾಗಿನಿಂದ ಹುಲಿಮಂಗಲದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ. ಆತನ ಪ್ರೇಯಸಿ ಕುಟುಂಬ ಕೂಡ ಹುಲಿಮಂಗಲದಲ್ಲಿ ವಾಸವಾಗಿದ್ದು, ಘಟನೆ ಬಗ್ಗೆ ತಿಳಿದ ನಂತರ ಅವರು ಮತ್ತು ಯುವತಿ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement