ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಟಿಕೆಟ್ ಕೇಳಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಕಂಡಕ್ಟರ್ ಹೊನ್ನಪ್ಪನನ್ನ ಸಿದ್ದಾಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಬಸ್ಸಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ಕೇಳಿದ್ದಾರೆ. ಈ ವೇಳೆ ಕಂಡಕ್ಟರ್, ಕೊಡ್ತಿನಿ ಇರಿ ಎಂದಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಕಂಡಕ್ಟರ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು.
ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ ನಡೆಸಿದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹೊನ್ನಪ್ಪನನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಗಲಾಟೆಗೆ ಸಂಬಂಧಿಸಿದಂತೆ ಕಂಡಕ್ಟರ್ ಹೊನ್ನಪ್ಪ ಅವರ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ಇದಕ್ಕೆಲ್ಲ ಉಚಿತ ಬಸ್ ಪ್ರಯಾಣವೇ ಕಾರಣವಾಗಿದೆ. ಹೌದು, ಬಿಳೆಕಳ್ಳಿ ಬಳಿ ಬಸ್ ಹತ್ತಿದ್ದ ಮಹಿಳೆಗೆ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಹೇಳಿದ್ದಾರೆ. ಆದರೆ, ಎರಡು ಸ್ಟಾಪ್ ಬಂದರೂ ಯುವತಿ ತನ್ನ ಆಧಾರ್ ಕಾರ್ಡ್ ತೋರಿಸಿಲ್ಲ. ಬಳಿಕ ನಿಮ್ಮ ಸ್ಟೇಜ್ ಮುಕ್ತಾಯವಾಗುತ್ತೆ ಬೇಗ ಆಧಾರ್ ಕಾರ್ಡ್ ತೋರಿಸಿ, ಇಲ್ಲದಿದ್ದರೆ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಸೂಚಿಸಿದ್ದಾರೆ. ಇದರಿಂದ ಕೆಂಡಾಮಂಡಲವಾದ ಮಹಿಳೆ, ಮಾತಿಗೆ ಮಾತು ಬೆಳೆದು ಕಂಡಕ್ಟರ್ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಂಡಕ್ಟರ್ ಕೂಡ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಘಟನೆ ಬೆನ್ನಲ್ಲೇ ಕಂಡಕ್ಟರ್ನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಘಟಕ -34 ನಿರ್ವಾಹಕರಾಗಿರುವ ಹೊನ್ನಪ್ಪ ನಾಗಪ್ಪ ಅಗಸರ್ ಅವರು ಇಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಹಲ್ಲೆ ಮಾಡಿರುತ್ತಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಹಿನ್ನೆಲೆಯಲ್ಲಿ ಸದರಿ ಅಂತರ್ಜಾಲದ ಸುದ್ದಿಯ ಆಧಾರದ ಮೇಲೆ ಹೊನ್ನಪ್ಪ ನಾಗಪ್ಪ ಅಗಸರ್ ರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದೆ.
Advertisement