
ಬೆಂಗಳೂರು: ಎರಡನೇ ಬಾರಿಗೆ ಜೀವನ ನೀಡಿದ ಜರ್ಮಿನಿ ಮೂಲದ ದಾನಿಯನ್ನು ಥಲಸ್ಸೆಮಿಯಾ ರೋಗದಿಂದ ಬದುಕುಳಿದ ಬೆಂಗಳೂರಿನ ಯುವಕ ಚಿರಾಗ್ ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿದ್ದಾರೆ.
17 ವರ್ಷದ ಚಿರಾಗ್ ಅವರು ಆನುವಂಶಿಕ ರಕ್ತದ ಕಾಯಿಲೆ ಥಲಸ್ಸೆಮಿಯಾದಿಂದ ಬಳಲುತ್ತಿದ್ದರು. ರೋಗದ ಚಿಕಿತ್ಸೆಗಾಗಿ ರಕ್ತದ ಕಾಂಡಕೋಶ ದಾನಿಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಇವರಿಗೆ ಜರ್ಮನಿಯ ಮುನ್ಸಿಂಗನ್ನ 29 ವರ್ಷದ ರೋಮನ್ ಸಿಮ್ನಿಜ್ಕಿ ಅವರು ಸಹಾಯ ಮಾಡಿದ್ದರು. ಈ ವಿಚಾರ ತಿಳಿದ ಚಿರಾಗ್ ಇದೀಗ ರೋಮನ್ ಅವರನ್ನು ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಅಗತ್ಯ ಇರುವವರಿಗೆ ಸಹಾಯ ಮಾಡಿದೆ ಎಂಬುದೇ ಅತ್ಯಂತ ದೊಡ್ಡ ಸಂತಸದ ವಿಚಾರ. ಚಿರಾಗ್ ಆರೋಗ್ಯವಂತ ಮತ್ತು ಹೊಸ ಜೀವನ ಪಡೆದಿರುವುದು ದೊಡ್ಡ ಪ್ರತಿಫಲವಾಗಿದೆ ಎಂದು ರೋಮನ್ ಸಿಮ್ನಿಜ್ಕಿ ಅವರು ಹೇಳಿದ್ದಾರೆ.
ಥಲಸ್ಸೆಮಿಯಾದಿಂದ ಬಳಲುತ್ತಿದ್ದ ನಾನು ನಿಯಮಿತ ರಕ್ತ ವರ್ಗಾವಣೆಯೊಂದಿಗೆ, ಆಗಾಗ್ಗೆ ಆಯಾಸ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಕುಟುಂಬ 10 ವರ್ಷಗಳಿಂದಲೂ ದಾನಿಗಳಿಗಾಗಿ ಹುಡುಕಾಟ ನಡೆಸಿತ್ತು. DKMS (Deutsche Knochenmarkspenderdatei) ಡೇಟಾಬೇಸ್ ಮೂಲಕ 2016ರಲ್ಲಿ ದಾನಿಯೊಬ್ಬರು ಸಿಕ್ಕಿದ್ದರು. ಇದು ನನ್ನ ಜೀವನದ ರೋಚಕ ಕ್ಷಣವಾಗಿದೆ. ನಾನು ಶಾಲೆಗೆ ಹೋಗುತ್ತದ್ದೆ. ರಕ್ತ ವರ್ಗಾವಣೆಗಾಗಿ ಶಾಲೆಯಿಂದ ಬಂದು, ಮರಳಿ ಶಾಲೆಗೆ ಹೋಗುತ್ತಿದ್ದೆ. ಈ ದಿನಗಳು ಭಯಾನಕವಾಗಿತ್ತು. ರಕ್ತದ ಕಾಂಡಕೋಶ ಕಸಿ ಬಳಿಕ ನಾನು ಆರೋಗ್ಯವಾಗಿದ್ದೇನೆ. ಇದೀಗ ಬ್ಯಾಸ್ಕೆಟ್ಬಾಲ್ ಆಡುವುದರಿಂದ ಹಿಡಿದು ಐಐಟಿಗೂ ಸಿದ್ಧತೆ ನಡೆಸುತ್ತಿದ್ದೇನೆ. ಸಮಾಜಕ್ಕೆ ಚಿಕ್ಕದೊಂದು ಕಾಣಿಕೆ ನೀಡುವ ಗುರಿ ಕೂಡ ನನಗಿದೆ ಎಂದು ಚಿರಾಗ್ ಹೇಳಿದ್ದಾರೆ.
ಡಾ.ರೇವತಿ ರಾಜ್, ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್, ಅಪೊಲೊ ಆಸ್ಪತ್ರೆ, ಚೆನ್ನೈ, ಮಾತನಾಡಿ, ನಮ್ಮ ದೇಶದಲ್ಲಿ ಥಲಸ್ಸೆಮಿಯಾ ಗಮನಾರ್ಹ ರೋಗವಾಗಿ ಬೆಳೆಯುತ್ತಿದೆ. ಪ್ರತಿ ವರ್ಷ 10,000 ಕ್ಕೂ ಹೆಚ್ಚು ಮಕ್ಕಳು ಈ ಕಾಯಿಲೆಯೊಂದಿಗೆ ಜನಿಸುತ್ತಿದ್ದಾರೆ. ಬೀಟಾ-ಥಲಸ್ಸೆಮಿಯಾ ಮೇಜರ್ ಕಾಯಿಲೆಯ ತೀವ್ರ ಸ್ವರೂಪವಾಗಿದೆ, ಇದಕ್ಕೆ ನಿಯಮಿತ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಚಿಕಿತ್ಸೆಗಾಗಿ ಕಾಂಡಕೋಶ ಕಸಿ ಮಾಡಬೇಕಾಗುತ್ತದೆ. ರೋಮನ್ ಅವರಂತೆ ಮತ್ತಷ್ಟು ಜನರು ಕಾಂಡಕೋಶ ದಾನಿಗಳಾಗಿ ನೋಂದಾವಣಿ ಮಾಡಲು ಮುಂದೆ ಬರಬೇಕು. ಇದರಿಂದ ಹೆಚ್ಚಿನ ಜನರು ಹೊಸ ಜೀವನ ಪಡೆಯಲು ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ರಕ್ತ ಕಾಂಡಕೋಶ ದಾನಿಯಾಗಿ ನೋಂದಾಯಿಸಲು ವ್ಯಕ್ತಿ 18 ರಿಂದ 55 ವರ್ಷ ವಯಸ್ಸಿನವರಾಗಿರಬೇಕು ಮತ್ತು ಅಂಗಾಂಶ ಕೋಶಗಳನ್ನು ಸಂಗ್ರಹಿಸಲು ಕೆನ್ನೆಯ ಒಳಭಾಗದಿಂದ ಸ್ವ್ಯಾಬ್ ಪರೀಕ್ಷೆಯನ್ನು ನೀಡಬೇಕು. ಅಂಗಾಂಶದ ಮಾದರಿಯನ್ನು ನಂತರ HLA (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಗಾಗಿ ವಿಶ್ಲೇಷಿಸಲು ಲ್ಯಾಬ್ಗೆ ಕಳುಹಿಸಲಾಗುತ್ತದೆ. ನಂತರ ಸ್ಟೆಮ್ ಸೆಲ್ ದಾನಿಗಳನ್ನು ಹೊಂದಿಸಲು ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಟ್ಟಿ ಮಾಡಲಾಗುತ್ತದೆ.
Advertisement