
ಬೆಂಗಳೂರು: ರಾಜ್ಯದಲ್ಲಿ ಸರಣಿ ಹತ್ಯೆ, ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ್, ಅಂಜಲಿ ಅಂಬಿಗೇರ, ಕೊಡಗಿನ ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾ ಕೊಲೆ, ನಿನ್ನೆ ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿದ್ದ ಯುವತಿ ಶವ ಪ್ರಕರಣ ಬೆನ್ನಲ್ಲೇ ಬೆಂಗಳೂರಿನ ಮತ್ತೊಬ್ಬ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಹರ್ಷಿತಾ (18ವ) ಮೃತದೇಹ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಬೆಂಗಳೂರು ಹೊರವಲಯ ಚಂದಾಪುರ ಸಮೀಪದ ಹೀಲಲಿಗೆಯಲ್ಲಿನ ಕಾಲೇಜ್ ಅಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಳು. ಕಾಲೇಜಿನ ವಸತಿ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.
ಇಂದು ನಡೆದಿದ್ದೇನು?: ಇಂದು ಬೆಳಗ್ಗೆ ಎಷ್ಟು ಹೊತ್ತಾದರೂ ಹರ್ಷಿತಾ ಕೋಣೆಯಿಂದ ಹೊರಬಂದಿರಲಿಲ್ಲ. ಪಕ್ಕದ ಕೋಣೆಯಲ್ಲಿದ್ದ ಪ್ರಗತಿ ಎಂಬ ವಿದ್ಯಾರ್ಥಿನಿ ಹರ್ಷಿತಾ ಇದ್ದ ಕೋಣೆಯ ಬಾಗಿಲನ್ನು ಸಾಕಷ್ಟು ಸಾರಿ ಬಡಿದರೂ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡ ಪ್ರಗತಿ ಸ್ಟೂಲ್ ಮೇಲೆ ಹತ್ತಿ, ಕಿಟಕಿಯಿಂದ ಇಣುಕಿ ನೋಡಿದಾಗ ಹರ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೆ ಪ್ರಗತಿ ಅಕ್ಕ-ಪಕ್ಕದ ಕೋಣೆಯಲ್ಲಿದ್ದ ಸಹಪಾಠಿಗಳಿಗೆ ವಿಷಯ ತಿಳಿಸಿದಳು. ಬಳಿಕ ಎಲ್ಲರೂ ಸೇರಿ ಬಾಗಿಲು ಮುರಿದು ಹರ್ಷಿತಾ ಕೋಣೆಯೊಳಗಡೆ ಹೋಗಿ, ಆಕೆಯನ್ನು ನೇಣು ಕುಣಿಕೆಯಿಂದ ಕೆಳಗೆ ಇಳಿಸಿ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಹರ್ಷಿತಾ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
Advertisement