
ಬೆಂಗಳೂರು: ಅಪ್ರಾಪ್ತ ಮಕ್ಕಳುವಾಹನ ಚಲಾಯಿಸುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕಾಲೇಜು ಆಡಿಟೋರಿಯಂನಲ್ಲಿ ಹಮಿಕೊಂಡಿದ್ದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, 18 ವರ್ಷಕ್ಕಿಂತ ಕೆಳಗಿನ ಬಾಲಕ, ಬಾಲಕಿಯರು ಎಷ್ಟೇ ಸ್ಮಾರ್ಟ್ ಇದ್ದರೂ, ಅವರು ಮೊಬೈಲ್, ಇನ್ನಿತರ ತಂತ್ರಜ್ಞಾನ ಬಳಕೆ ಮಾಡಿದರೂ ಅವರು ಪ್ರಬುದ್ಧರಾಗಿರುವುದಿಲ್ಲ. ಒಬ್ಬ ವ್ಯಕ್ತಿಗೆ 18 ವರ್ಷದ ನಂತರ ಡ್ರೈವಿಂಗ್ ಲೈಸೆನ್ಸ್ ಕೊಡಲು ವೈಜ್ಞಾನಿಕ ಕಾರಣಗಳಿವೆ. ಅಪ್ರಾಪ್ತರಿಗೆ ಮೆದುಳು ಹೆಚ್ಚು ಪ್ರಬುದ್ಧತೆ ಹೊಂದಿರುವುದಿಲ್ಲ. ನಮ ಮಕ್ಕಳು ಹೆಚ್ಚು ಬುದ್ಧಿವಂತರು, 10 ವರ್ಷಕ್ಕೇ ದ್ವಿಚಕ್ರ ವಾಹನ, 15 ವರ್ಷಕ್ಕೆ ಕಾರು ಚಲಾಯಿಸುತ್ತಾರೆ ಎಂದು ಪೋಷಕರು ತಮ ಮಕ್ಕಳಿಗೆ ವಾಹನದ ಕೀ ಕೊಟ್ಟರೆ ಅವರ ಕೈಗೆ ಆಯುಧ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಜ್ಯುವಿನೈಲ್ ಜಸ್ಟೀಸ್ ಆ್ಯಕ್ಟ್ನಲ್ಲಿ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು. ಬಾಲನ್ಯಾಯ ಕಾಯಿದೆಯ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪೂಣೆಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಐಷಾರಾಮಿ ಕಾರೊಂದನ್ನು ಉದ್ಯಮಿಯೊಬ್ಬರು ತಮಮ್ಮ ಮಗನಿಗೆ ಕೊಟ್ಟು ಇಬ್ಬರ ಸಾವಿಗೆ ಕಾರಣವಾಗಿದ್ದರು .ಕುಡಿದು ವಾಹನ ಚಲಾಯಿಸುವುದು, ವೀಲಿಂಗ್ನಂತಹ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರು ಭಾಗಿಯಾಗಿದ್ದಲ್ಲಿ ಅವರ ತಂದೆ-ತಾಯಿ ಜೈಲಿಗೆ ಹೋಗಬೇಕಾಗುತ್ತದೆ. ಇಂತಹ ಪ್ರಕರಣದ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.
ಸಾರ್ವಜನಿಕರೊಬ್ಬರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ನಲ್ಲಿ ಅಳವಡಿಸಿರುವ ರಾಡರ್ನಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಈ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ ಹೊಸ ತಂತ್ರಜ್ಞಾನ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement