ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಬಜೆಟ್ ಕಡಿತ ಕಾರಣ?

ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಬಜೆಟ್ ಕಡಿತ ಕಾರಣ?

ರಾಜ್ಯದಲ್ಲಿ ಐದು ವರ್ಷದೊಳಗಿನ 1.3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಪೈಕಿ 11,674 ತೀವ್ರತರ ಅಪೌಷ್ಟಿಕತೆ (SAM) ಯಿಂದ ಬಳಲುತ್ತಿದ್ದಾರೆ.
Published on

ಬೆಂಗಳೂರು: ರಾಜ್ಯದಲ್ಲಿ ಬರೊಬ್ಬರಿ 1.3 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಐದು ವರ್ಷದೊಳಗಿನ 1.3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಪೈಕಿ 11,674 ತೀವ್ರತರ ಅಪೌಷ್ಟಿಕತೆ (SAM) ಯಿಂದ ಬಳಲುತ್ತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರದಿ ಪಾಲಕರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ.

ಈ ಬೆಳವಣಿಗೆಗೆ ಬಜೆಟ್ ಕಡಿತ ಕೂಡ ಒಂದು ಕಾರಣವೆಂದು ಹೇಳಲಾಗುತ್ತಿದೆ. ಪೌಷ್ಠಿಕಾಂಶದ ಉಪಕ್ರಮಗಳನ್ನು ಬೆಂಬಲಿಸುವ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮಕ್ಕಾಗಿ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡುತ್ತದೆ. ಆದರೆ, 2024 ರ ಬಜೆಟ್‌ನಲ್ಲಿ 300 ಕೋಟಿ ರೂ. ಕಡಿತ ಮಾಡಲಾಗಿದ್ದು. ಇದು ಸಮಸ್ಯೆ ಉಲ್ಬಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿನ 65,911 ಅಂಗನವಾಡಿ ಕೇಂದ್ರಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 32.91 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) SAM ಅನ್ನು ಮಗುವಿನ ಎತ್ತರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ತೂಕವನ್ನು ಹೊಂದಿರುವ ಸ್ಥಿತಿ ಎಂದು ವಿವರಿಸಿದೆ. MAM (moderate acute malnutrition) ಮತ್ತು SAM (severe acute malnutrition) ಎರಡೂ ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಆರೋಗ್ಯ ಪರಿಣಾಮಗಳನ್ನು ಹೊಂದಿವೆ. SAM ನಿಂದ ಬಳಲುತ್ತಿರುವ ಮಕ್ಕಳು ತಮ್ಮ ಎತ್ತರಕ್ಕೆ ತುಂಬಾ ಕಡಿಮೆ ತೂಕವನ್ನು ಹೊಂದಿರುತ್ತಾರೆ ಮತ್ತು ಅವರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ರೋಗಗಳ ಸಂದರ್ಭದಲ್ಲಿ ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಹೆಚ್ಚಿರುತ್ತದೆ. MAM ನಿಂದ ಬಳಲುತ್ತಿರುವವರು ಬಾಲ್ಯದಲ್ಲಿ ಅನಾರೋಗ್ಯ ಮತ್ತು ಮರಣದ ಅಪಾಯವನ್ನು ಹೊಂದಿರುತ್ತಾರೆ.

ಬಡವರು ಮತ್ತು ಕಟ್ಟಕಡೆಯ ಸಮುದಾಯಗಳಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಹೆಚಚಾಗಿದೆ. ಅಪೌಷ್ಟಿಕತೆಯನ್ನು ಎದುರಿಸಲು ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಬಜೆಟ್ ಕಡಿತ ಕಾರಣ?
Gujarat: 5 ವರ್ಷದೊಳಗಿನ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ- Niti Aayog ಕಳವಳ

ಮಕ್ಕಳ ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಯನ್ನು ಬೆಂಬಲಿಸುವ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ಈ ಕೇಂದ್ರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಆದರೆ. ಬಹುತೇಕ ಅಂಗನವಾಡಿ ಕೇಂದ್ರಗಳು ಕಳಪೆ ಸ್ಥಿತಿಯಲ್ಲಿವೆ. ಹಲವಾರು ಸಣ್ಣ ಮತ್ತು ಇಕ್ಕಟ್ಟಿನ ಸ್ಥಳದಲ್ಲಿರುವ ಕೇಂದ್ರಗಳು ಸುರಕ್ಷಿತ ಕುಡಿಯುವ ನೀರು ಸೇರಿದಂತೆ ಇದರೆ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳಲ್ಲಿ ಉತ್ತಮ ಆರೋಗ್ಯವನ್ನು ಉತ್ತೇಜಿಸಲು ಸರ್ಕಾರ ಇತ್ತೀಚೆಗೆ ಅಂಗನವಾಡಿ ಊಟದ ಮೆನುವನ್ನು ಸುಧಾರಿಸಿದೆ, ರಾಗಿ ಲಡ್ಡುಗಳು ಮತ್ತು ಖಿಚಡಿಯಂತಹ ಪೌಷ್ಟಿಕಾಂಶಗಳನ್ನು ಸೇರಿಸಿದೆ. ಆದರೆ, ಸಾಕಷ್ಟು ಮಕ್ಕಳು ಈ ಆಹಾರ ತಿನ್ನಲು ಇಷ್ಟಪಡುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ಜಯಂತಿ ಎನ್‌ ಎಂಬುವವರು ಮಾತನಾಡಿ, ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಹಲವು ಶಿಶುಗಳಿಗೆ ಎರಡು ವರ್ಷ ತುಂಬುವವರೆಗೆ ಎದೆಹಾಲಿನ ಜೊತೆಗೆ ಪೂರಕ ಆಹಾರ ಸಿಗುತ್ತಿಲ್ಲ. ಪಾಲಕರು ತಮ್ಮ ಶಿಶುಗಳ ಆರೈಕೆಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಇತರರೊಂದಿಗೆ ಒಟ್ಟಿಗೆ ಊಟ ಮಾಡಬಹುದಾದರೂ, ಮನೆಯಲ್ಲಿಯೂ ಉತ್ತಮ ಆಹಾರ ನೀಡುವುದನ್ನು ಪೋಷಕರು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಚೈಲ್ಡ್ ರೈಟ್ಸ್ ಟ್ರಸ್ಟ್‌ನ ನಿರ್ದೇಶಕ ನಾಗಸಿಂಹ ಜಿ ರಾವ್ ಅವರು ಮಾತನಾಡಿ, ಅಪೌಷ್ಟಿಕತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ನಿಯಮಿತ ತಪಾಸಣೆ, ಮಗುವಿನ ಆಹಾರ ಕ್ರಮವನ್ನು ತಪಾಸಣೆ ಮಾಡಬೇಕು. ಜೊತೆಗೆ ಗರ್ಭಾವಸ್ಥೆಯಲ್ಲಿ ತಾಯಿಯ ಆಹಾರದ ಮಹತ್ವ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾವಾರು ಮೆನುಗಳನ್ನು ಸರಕಾರ ಪರಿಗಣಿಸಬೇಕು. ರಾಜ್ಯದ ಕೆಲವು ಭಾಗಗಳಲ್ಲಿ, ಅಕ್ಕಿ ಪ್ರಧಾನ ಆಹಾರವಾಗಿದ್ದರೆ, ಇತರೆಗೆ ರಾಗಿ ಅಥವಾ ಸಿರಿಧಾನ್ಯವನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರ ಪದ್ಧತಿಯಲ್ಲಿನ ಈ ವ್ಯತ್ಯಾಸದಿಂದ ಮಕ್ಕಳು ಮನೆಯಲ್ಲಿ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಸೇವನೆಗೆ ನಿರಾಕರಿಸುತ್ತಾರೆ. ಇದಲ್ಲದೆ, ಅಂಗನವಾಡಿ ಶಿಕ್ಷಕರು ಆಹಾರ ವಿತರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ದಿನ ಬಡಿಸುವ, ಸೇವಿಸಿದ ಮತ್ತು ಉಳಿದಿರುವ ಆಹಾರದ ಪ್ರಮಾಣವನ್ನು ಪರಿಶೀಲಿಸುವ ಮೂಲಕ ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ಗುರುತಿಸಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com