Kusum-C ಯೋಜನೆ: ಮೊದಲ ಹಂತ ಪೂರ್ಣಕ್ಕೆ ಗಡುವು ನೀಡಿದ ಸರ್ಕಾರ

ಮುಂದಿನ ಜನವರಿಯಿಂದಲೇ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಕುಸುಮ್‌–ಸಿ ಅಡಿ ಪ್ರಗತಿಯಲ್ಲಿರುವ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಬೇಗ ಪೂರ್ಣಗೊಳಿಸಿ, ಫೀಡರ್‌ಗಳಿಗೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು.
Minister KJ George
ಇಂಧನ ಸಚಿವ ಕೆಜೆ ಜಾರ್ಜ್
Updated on

ಬೆಂಗಳೂರು: ‘ಕುಸುಮ್‌– ಸಿ’ ಯೋಜನೆಯ ಮೊದಲ ಹಂತದಲ್ಲಿ ಸ್ಥಾಪಿಸುತ್ತಿರುವ ಫೀಡರ್‌ ಮಟ್ಟದ ಸೋಲಾರ್‌ ವಿದ್ಯುತ್‌ ಘಟಕಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಇಂಧನ ಇಲಾಖೆ ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್‌ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕುಸುಮ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.

ಮುಂದಿನ ಜನವರಿಯಿಂದಲೇ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಕುಸುಮ್‌–ಸಿ ಅಡಿ ಪ್ರಗತಿಯಲ್ಲಿರುವ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಬೇಗ ಪೂರ್ಣಗೊಳಿಸಿ, ಫೀಡರ್‌ಗಳಿಗೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕುಸುಮ್‌ ಸಿ ಯೋಜನೆಯಡಿ ಮೊದಲ ಹಂತದ ಅನುಷ್ಠಾನವನ್ನು ತ್ವರಿತಗೊಳಿಸುವ ಜೊತೆಗೆ, ಎರಡನೇ ಹಂತದ ಯೋಜನೆಗೆ ಟೆಂಡರ್‌ ಪ್ರಕ್ರಿಯೆಯನ್ನ ತ್ವರಿತವಾಗಿ ಆರಂಭಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ, ಎಷ್ಟು ಫೀಡರ್‌ಗಳಿಗೆ ಯಾವ ಪ್ರಮಾಣದಲ್ಲಿ ವಿದ್ಯುತ್‌ ಪೂರೈಸಲಾಗುತ್ತದೆ ಎಂಬ ಬಗ್ಗೆ ಕೆಪಿಟಿಸಿಎಲ್‌ಗೆ ಮಾಹಿತಿ ನೀಡಬೇಕು. ಅದರನ್ವಯ, ಅಗತ್ಯಕ್ಕೆ ತಕ್ಕಂತೆ ಸಬ್‌ಸ್ಟೇಷನ್‌ಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಕುಸುಮ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಉಪಕ್ರಮವಾಗಿದ್ದು, ರೈತರ ಇಂಧನ ಅಗತ್ಯಗಳನ್ನು ಪರಿಹರಿಸಲು ಮತ್ತು ಕೃಷಿಯನ್ನು ಹೆಚ್ಚು ಸಮರ್ಥನೀಯವಾಗಿಸಲು ಪ್ರಾರಂಭಿಸಲಾಗಿದೆ. ಸೌರಶಕ್ತಿಯು ರೈತರಿಗೆ ಆರ್ಥಿಕ ಮತ್ತು ನೀರಿನ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

Minister KJ George
ಬೇಸಿಗೆಯಲ್ಲಿ ಬೇಡಿಕೆ ತೀವ್ರ ಹೆಚ್ಚಳದ ನಡುವೆಯೂ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಕೆ: ಕೆಜೆ ಜಾರ್ಜ್

ಕುಸುಮ್‌– ಬಿ ಯೋಜನೆಯಡಿ ರಾಜ್ಯಕ್ಕೆ 40 ಸಾವಿರ ಸೋಲಾರ್‌ ಪಂಪ್‌ಸೆಟ್‌ಗಳು ಮಂಜೂರಾಗಿವೆ. ಈ ಗುರಿ ತಲುಪಲು ಫೀಡರ್‌ಗಳಿಂದ 500 ಮೀಟರ್‌ಗೂ ಹೆಚ್ಚು ದೂರವಿರುವ ಅನಧಿಕೃತ ಪಂಪ್‌ಸೆಟ್‌ಗಳ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ಹಂತದಲ್ಲಿ ಹೆಚ್ಚುವರಿ ಸೋಲಾರ್‌ ಪಂಪ್‌ಸೆಟ್‌ಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಬೇಕು ಎಂದು ತಿಳಿಸಿದರು.

ಅಕ್ರಮ ಪಂಪ್‍ಸೆಟ್‍ಗಳನ್ನು ಹೊಂದಿರುವ 10,151 ಅರ್ಜಿಗಳು ಕುಸುಮ್ ಬಿ ಅಡಿ ನೋಂದಣಿಯಾಗಿವೆ. ಅದೇ ರೀತಿ ಹೊಸದಾಗಿ, 27,820 ಅರ್ಜಿಗಳು ಬಂದಿದ್ದು, ಒಟ್ಟು 37,971 ಅರ್ಜಿಗಳಿಗೆ ಸಂಬಂಧಿಸಿದಂತೆ ಸೋಲಾರ್ ಪಂಪ್‍ಸೆಟ್‍ಗಳನ್ನು ಕಾಲಮಿತಿಯಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಇದೇ ವೇಳೆ ಮುಂಬರುವ ಬೇಸಿಗೆಯಲ್ಲಿ ಸಾಕಷ್ಟು ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಜಾರ್ಜ್ ಅವರು ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.

ವಿದ್ಯುತ್ ಪೂರೈಕೆ ಪರಿಸ್ಥಿತಿ ಕುರಿತು ಎಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಕಳೆದ ಬೇಸಿಗೆಯಲ್ಲಿ ಬರದ ನಡುವೆಯೂ ವಿದ್ಯುತ್ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಮುಂದಿನ ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಅಗತ್ಯ ವಿದ್ಯುತ್ ಲಭ್ಯವಿರಲಿದೆ. ಹೀಗಾಗಿ ಅದನ್ನು ಸಮರ್ಪಕವಾಗಿ ಒದಗಿಸಲು ಟ್ರಾನ್ಸ್‍ಫರ್ಮರ್‍ಗಳು, ವಿದ್ಯುತ್ ವಿತರಣಾ ಫೀಡರ್‌ ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಬಳಿಕ ದಸರಾ ದೀಪಾಲಂಕಾರ ಮತ್ತು ಡ್ರೋನ್ ಶೋ ಕುರಿತಂತೆ ಸೆಸ್ಕ್ ಕಾರ್ಯವೈಖರಿಯನ್ನು ಸಚಿವರು ಶ್ಲಾಘಿಸಿದರು.

ಹಿಂದೆಂದಿಗಿಂತಲು ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಷಣೀಯವಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಾಲಂಕಾರ ಯಶಸ್ಸಿಗೆ ದುಡಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಅಭಿನಂದಾರ್ಹರು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com