
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳ ಬಹುದಿನಗಳ ಕನಸು ಕೊನೆಗೂ ಈಡೇರಿದ್ದು, ಕಾವೇರಿ 5 ನೇ ಹಂತದ ನೀರಿನ ಯೋಜನೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ (Cauvery Drinking Water Project) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಚಾಲನೆ ನೀಡಿದ್ದು, ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ಈ ಬಹು ನಿರೀಕ್ಷಿತ ಕಾವೇರಿ 5ನೇ ಹಂತದ ಯೋಜನೆಯಿಂದ ಬೆಂಗಳೂರಿನ ಮೂರನೇ ಒಂದು ಭಾಗದಷ್ಟು ನೀರು ಸಿಗುತ್ತದೆ. ಮುಂದಿನ 10 ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲ. 50 ಲಕ್ಷ ಜನಸಂಖ್ಯೆಗೆ ನೀರು ಬರಲಿದೆ. ಈ ಯೋಜನೆಗಾಗಿ ಸುಮಾರು 5000 ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದು, ನಾನು ಏನು ಭರವಸೆ ನೀಡಿದ್ದೆನೋ ಅದನ್ನು ಬೆಂಗಳೂರಿನ ಜನರಿಗೆ ತಲುಪಿಸಿದ್ದೇನೆ ಎಂದರು.
ಭಾರತದಲ್ಲೇ ಅತ್ಯಂತ ದೊಡ್ಡ ಕುಡಿಯುವ ನೀರು ಯೋಜನೆ
ಇನ್ನು ಇಂದು ಲೋಕಾರ್ಪಣೆಯಾದ ಕಾವೇರಿ 5 ನೇ ಹಂತದ ನೀರು ಸರಬರಾಜು ಯೋಜನೆಯು ಭಾರತದಲ್ಲೇ ಅತ್ಯಂತ ದೊಡ್ಡದಾಗಿದ್ದು, ಬೆಂಗಳೂರಿನ ಸುಮಾರು 5 ಮಿಲಿಯನ್ ಜನರಿಗೆ ನೀರು ಸರಬರಾಜು ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರಕ ಯೋಜನೆಯು 775 MLD ಸಾಮರ್ಥ್ಯದ ಭಾರತದ ಅತಿದೊಡ್ಡ ನೀರು ಸಂಸ್ಕರಣಾ ಘಟಕದ ನಿರ್ಮಾಣವನ್ನು ಒಳಗೊಂಡಿದೆ. ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯಿಂದ ಯೋಜನೆಯು ಮತ್ತಷ್ಟು ಬೆಂಬಲಿತವಾಗಿದೆ.
ವಿಶೇಷತೆ ಏನು?
TK ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಸುಧಾರಿತ ಬೂಸ್ಟರ್ ಪಂಪಿಂಗ್ ಸ್ಟೇಷನ್ಗಳನ್ನು ನಿರ್ಮಿಸಲಾಗಿದ್ದು, ಇದು 450 ಮೀಟರ್ ಎತ್ತರಕ್ಕೆ ನೀರನ್ನು ಪಂಪ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಪೈಪ್ಗಳು ಬೆಂಗಳೂರಿಗೆ ನೀರನ್ನು ತಲುಪಿಸಲು ಸುಮಾರು 110 ಕಿಲೋಮೀಟರ್ಗಳಷ್ಟು ದೂರವನ್ನು ಕ್ರಮಿಸುತ್ತವೆ. ಯೋಜನೆಯು 145,000 ಮೆಟ್ರಿಕ್ ಟನ್ ಉಕ್ಕು ಮತ್ತು 2.4 ಕೋಟಿ ಸಮಯದ ಬಳಕೆಯನ್ನು ಪೂರ್ಣಗೊಳಿಸಲು ಅಗತ್ಯವಿದೆ, ಇದು ಆಧುನಿಕ ಎಂಜಿನಿಯರಿಂಗ್ನ ಸಾಧನೆಯಾಗಿದೆ ಎಂದು ಸಚಿವರು ಬಣ್ಣಿಸಿದರು.
ಕಾವೇರಿ 5ನೇ ಹಂತದ ಯೋಜನೆಯ ಮೂಲಕ ಬೆಂಗಳೂರಿನ ಉಪನಗರಗಳಾದ್ಯಂತ ಸ್ಟೀಲ್ ಟ್ರಂಕ್ ಮುಖ್ಯ ಪೈಪ್ಲೈನ್ ಮೂಲಕ ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಎಸ್ಎಂವಿ 6ನೇ ಬ್ಲಾಕ್, ಕಾಡುಗೋಡಿ ಮತ್ತು ಚೊಕ್ಕನಹಳ್ಳಿ ಜಲಾಶಯಗಳನ್ನು ತಲುಪಲಿದೆ. ಈ ಜಲಾಶಯಗಳಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಮತ್ತು ಬೊಮ್ಮನಹಳ್ಳಿ ಪ್ರದೇಶಗಳಿಗೆ ನೀರು ಹರಿದು, ಗುರುತಿಸಲಾದ ಪ್ರದೇಶಗಳಲ್ಲಿನ ಪ್ರತಿ ಮನೆಗೂ ನೀರು ತಲುಪುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
6ನೇ ಹಂತಕ್ಕೆ ಡಿಪಿಆರ್ ಸಿದ್ಧ
ಇದೇ ವೇಳೆ ಈ ಯೋಜನೆಯ ಮುಂದಿನ ಹಂತ ಅಂದರೆ ಕಾವೇರಿ 6ನೇ ಹಂತಕ್ಕೂ ಡಿಪಿಆರ್ ಸಿದ್ಧವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು. 'ಕಾವೇರಿ 6ನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು. ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.
ಲೋಕಾರ್ಪಣೆಗೂ ಮುನ್ನ ಪೂಜಾ ಕೈಂಕರ್ಯ
ಇನ್ನು ಯೋಜನೆಯನ್ನು ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಮಂಗಳಾರತಿ ನೆರವೇರಿಸಲಾಯಿತು. ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ ಸೇರಿದಂತೆ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾ ಮಂಗಳಾರತಿ ಸೇರಿ ಹೋಮ-ಹವನ ನೆರವೇರಿಸಲಾಯತು. ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್ ಪೂಜಾ ಕೈಂಕಾರ್ಯ ನೆರವೇರಿಸಿದರು. ಡಿಕೆಶಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಾಥ್ ನೀಡಿದರು. ಇದೇ ವೇಳೆ ಜಾನಪದ ಕಲಾ ತಂಡಗಳ ಮೆರವಣಿಗೆಯೂ ನಡೆಯಿತು.
Advertisement