ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಟ್ರ್ಯಾಕ್‌ಗೆ ಜಿಗಿದ ಮಹಿಳೆ, 15 ನಿಮಿಷ ನಮ್ಮ ಮೆಟ್ರೋ ರೈಲು ಸಂಚಾರ ಸ್ಥಗಿತ

ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಜಿಗಿದ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಪರಿಣಾಮ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.
ಇಂದಿರಾನಗರ ಮೆಟ್ರೋ ನಿಲ್ದಾಣ
ಇಂದಿರಾನಗರ ಮೆಟ್ರೋ ನಿಲ್ದಾಣ

ಬೆಂಗಳೂರು: ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬರು ಟ್ರ್ಯಾಕ್ ಮೇಲೆ ಜಿಗಿದ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಪರಿಣಾಮ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.

ಸೋಮವಾರ ಸಂಜೆ ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ರೈಲಿಗಾಗಿ ಕಾದು ನಿಂತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ತನ್ನ ಮೊಬೈಲ್ ಅನ್ನು ರೈಲು ಹಳಿಗಳ ಮೇಲೆ ಬೀಳಿಸಿದ್ದಾರೆ. ಅದನ್ನು ಹಿಂಪಡೆಯಲು ಆಕೆ ಸಹಜವಾಗಿಯೇ ವಿದ್ಯುದ್ದೀಕರಿಸಿದ ಟ್ರ್ಯಾಕ್‌ಗಳ ಮೇಲೆ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆಕೆಯನ್ನು ಮೇಲಕ್ಕೆ ಎಳೆದುಕೊಂಡಿದ್ದಾರೆ. 

ಪರಿಣಾಮ ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯಿತು. ಇದು ಪರ್ಪಲ್ ಲೈನ್‌ನಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್ ಶಂಕರ್, “ಇಂದಿರಾನಗರ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್ 1 ರಲ್ಲಿ ಬೈಯಪ್ಪನಹಳ್ಳಿ ಕಡೆಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಸಂಜೆ 6.40 ರ ಸುಮಾರಿಗೆ ತಮ್ಮ ಫೋನ್ ಅನ್ನು ಹಳಿ ಮೇಲೆ ಕೈ ತಪ್ಪಿ ಬೀಳಿಸಿಕೊಂಡಿದ್ದಾರೆ. ರೈಲು ಬರುವ ಮೊದಲು ಅದನ್ನು ತೆಗೆದುಕೊಳ್ಳಲು ನಿರ್ಧರಿಸಿ ಟ್ರಾಕ್ ಮೇಲೆ ಹಾರಿದ್ದಾರೆ. ಆದರೆ ಹಿಂತಿರುಗಿ ಮೇಲೆ ಹತ್ತಲು ಸಾಧ್ಯವಾಗಲಿಲ್ಲ, ಮತ್ತು ಇತರ ಪ್ರಯಾಣಿಕರು ಅವಳನ್ನು ಪ್ಲಾಟ್‌ಫಾರ್ಮ್‌ಗೆ ಎಳೆದುಕೊಳ್ಳಲು ಸಹಾಯ ಮಾಡಬೇಕಾಯಿತು. ಪ್ಲಾಟ್‌ಫಾರ್ಮ್‌ನಲ್ಲಿರುವ ಮೆಟ್ರೋ ಅಧಿಕಾರಿಯೊಬ್ಬರು ತುರ್ತು ಟ್ರಿಪ್ ವ್ಯವಸ್ಥೆಯನ್ನು ಒತ್ತಿ ಟ್ರ್ಯಾಕ್‌ಗಳಿಗೆ ಸರಬರಾಜಾಗುತ್ತಿದ್ದ ವಿದ್ಯುತ್ ಸ್ಥಗಿತಗೊಳಿಸಿದರು ಎಂದು ಹೇಳಿದರು.

ಇಂದಿರಾನಗರ ಠಾಣೆಯಲ್ಲಿ ಉಂಟಾದ ಗಲಾಟೆಯಲ್ಲಿ ಮಹಿಳೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. “ನಮ್ಮ ಸಿಸಿಟಿವಿ ಅವಳ ಮುಖ ಮತ್ತು ಕ್ರಿಯೆಯನ್ನು ಸೆರೆಹಿಡಿದಿದೆ. ಭವಿಷ್ಯದಲ್ಲಿ ನಮ್ಮ ಯಾವುದೇ ನಿಲ್ದಾಣಕ್ಕೆ ಬಂದರೂ ಆಕೆ ಸಿಕ್ಕಿಬೀಳುತ್ತಾಳೆ” ಎಂದು ಶಂಕರ್ ಹೇಳಿದರು.

ಹಳಿಗಳಿಗೆ ವಿದ್ಯುತ್ ವ್ಯತ್ಯಯದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. "ಇದು ಗರಿಷ್ಠ ಸಂಜೆಯ ಸಮಯ ಮತ್ತು ಅಡ್ಡಿಯು ಸರಿಸುಮಾರು 6.40 ರಿಂದ 6.55 ರ ನಡುವೆ ಇತ್ತು. ಇದು ಪರ್ಪಲ್ ಲೈನ್ ಮತ್ತು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಜನಸಂದಣಿಯನ್ನು ಉಂಟುಮಾಡಿತು. 

ಕಬ್ಬನ್ ಪಾರ್ಕ್‌ನಿಂದ ಮಾಗಡಿ ರಸ್ತೆಗೆ ತೆರಳುತ್ತಿದ್ದ ಪ್ರಯಾಣಿಕರಾದ ನಾರಾಯಣ ಮೂರ್ತಿ ಈ ಬಗ್ಗೆ ಮಾತನಾಡಿದ್ದು, ‘ರೈಲು ಹಿಡಿಯಲು ಕಬ್ಬನ್ ಪಾರ್ಕ್‌ನಲ್ಲಿ 20 ನಿಮಿಷ ಕಾಯಬೇಕಾಯಿತು. ಇದು ಸಂಜೆಯ ಪೀಕ್ ಅವರ್ ಮತ್ತು ನಾನು ಈ ರೀತಿ ಕಾಯಬೇಕಾಗಿರಲಿಲ್ಲ. ಕೆಂಪೇಗೌಡ ಇಂಟರ್‌ಚೇಂಜ್ ಸ್ಟೇಷನ್‌ನಲ್ಲಿ ಇಳಿದು ಮುಂದಿನ ರೈಲಿನಲ್ಲಿ ಹೋಗಲು ನಮಗೆ ತಿಳಿಸಲಾಯಿತು. ಅಲ್ಲಿ ದೊಡ್ಡ ಜನಸಂದಣಿ ಇತ್ತು ಎಂದು ಹೇಳಿದ್ದಾರೆ.

ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಉಳಿದ ಮಹಿಳೆ
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಈ ಬಗ್ಗೆ ಮಾತನಾಡಿದ್ದು, “ಇದೊಂದು ವಿಚಿತ್ರ ಘಟನೆ. 750 ವೋಲ್ಟ್‌ ವಿದ್ಯುತ್ ಹರಿಯುವ ಹಳಿಗಳಲ್ಲಿ ಮೆಟ್ರೋ ರೈಲು ಸಂಚರಿಸುತ್ತದೆ. ಮಹಿಳೆ ಕೆಳಗೆ ಜಿಗಿಯುವುದನ್ನು ಗಮನಿಸಿದ ನಮ್ಮ ಸಿಬ್ಬಂದಿಯ ಸಮಯ ಪ್ರಜ್ಞೆ ಮೆರೆದು ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಅವರ ಚುರುಕಾದ ಕ್ರಮವೇ ಆಕೆಯ ಜೀವ ಉಳಿಸಿದೆ. ಇದು ಅತ್ಯಂತ ಅಪಾಯಕಾರಿಯಾದ ಕಾರಣ ಟ್ರ್ಯಾಕ್‌ಗಳ ಬಳಿ ಎಲ್ಲೂ ಯಾರನ್ನೂ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು.

ಮೆಟ್ರೋ ಸ್ಪಷ್ಟನೆ
ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ನಿನ್ನೆ ನಡೆದ ಘಟನೆ ಕುರಿತು ಮೆಟ್ರೋ ಅಧಿಕಾರಿ ಶ್ರೀವಾಸ್ ರಾಜಗೋಪಾಲನ್ ಸ್ಪಷ್ಟನೆ ನೀಡಿದ್ದು, ಮಹಿಳೆ ಹಳಿ ಮೇಲೆ ಬಿದ್ದ ಮೊಬೈಲ್ ಫೋನ್ ಹಿಂಪಡೆಯಲು ಹಳಿ ಮೇಲೆ ಹಾರಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ಪ್ರಯಾಣಿಕರ ಸುರಕ್ಷತೆಗಾಗಿ ಭದ್ರತೆಯು ಸುರಕ್ಷತಾ ಸಾಧನಗಳನ್ನು ಸಕ್ರಿಯಗೊಳಿಸಿದ್ದಾರೆ. ಬಳಿಕ ಸಹ ಪ್ರಯಾಣಿಕರ ಸಹಾಯದಿಂದ ಆಕೆ ಮೊಬೈಲ್ ಹಿಂಪಡೆದ ನಂತರ ಪ್ಲಾಟ್‌ಫಾರ್ಮ್‌ಗೆ ಮರಳಿದ್ದಾರೆ. BMRCL ಸಿಬ್ಬಂದಿ ಸೇವೆಗಳ ಮರುಸ್ಥಾಪನೆಗಾಗಿ ಸುರಕ್ಷತಾ ಸಾಧನಗಳನ್ನು ಮರುಹೊಂದಿಸುವಲ್ಲಿ ನಿರತರಾಗಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com