ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಲೋಕಾಯುಕ್ತ ವಿಫಲವಾಗಿದೆ. ದೂರನ್ನು ತನಿಖೆಗೆ ಆದೇಶಿಸುವ ಅಥವಾ ಲೋಕಾಯುಕ್ತ ಠಾಣೆಗೆ ವರ್ಗಾಯಿಸುವ ಬದಲು ಮುಚ್ಚಿ ಹಾಕಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಲೋಕಾಯುಕ್ತ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಕೂಡಲೇ ಕಾರ್ಯಪ್ರವೃತ್ತರಾದ ವಿಧಾನಸೌಧ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಶ್ರೀರಾಮ ಸೇನೆಯ ನಗರಾಧ್ಯಕ್ಷರೂ ಆಗಿರುವ ಕಾರ್ಯಕರ್ತ ಎಸ್ ಭಾಸ್ಕರನ್ ಅವರು ವಿದ್ಯುತ್ ತಪಾಸಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದು, ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಮತ್ತು ತಮ್ಮ ಆಸ್ತಿಯ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡದಿರುವ ಆರೋಪದಲ್ಲಿ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಆರೋಪಿಸಿದರು.
“ ಡಿಸೆಂಬರ್ 19 ರಂದು ದೂರು ಸಲ್ಲಿಸಿದ್ದೇನೆ ಮತ್ತು ಜನವರಿ 5 ರಂದು ದೂರನ್ನು ಮುಚ್ಚಿಹಾಕಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಬಗ್ಗೆಗಿನ ದೂರುಗಳು ಲೋಕಾಯುಕ್ತ ಪೊಲೀಸ್ ಅಡಿಯಲ್ಲಿ ಬರುತ್ತವೆ ಎಂದು ಹೇಳಿ,ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಸಂಪರ್ಕಿಸಲು ನನಗೆ ತಿಳಿಸಲಾಗಿದೆ ಎಂದು ಭಾಸ್ಕರನ್ ಆರೋಪಿಸಿದರು. ಹನ್ನೆರಡು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು ಆದರೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
"ಅನೇಕ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರು ಅಥವಾ ವರ್ಗಾವಣೆ ಕೇಸ್ ಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ.ಹೀಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಜನವರಿ 22 ರ ನಂತರ ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ ಎಂದು ಅವರು ಹೇಳಿದರು.
Advertisement