ಜಾತಿ ಸಮೀಕ್ಷೆ ವೈಜ್ಞಾನಿಕವಾಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕೋಲಾರ: ಜಾತಿ ಸಮೀಕ್ಷೆಯು ವೈಜ್ಞಾನಿಕವಾಗಿ ನಡೆದಿದೆ, ಎಲ್ಲ ಜಾತಿಗಳನ್ನು ಪಟ್ಟಿ ಮಾಡಿದರೆ 15 ರಿಂದ 20 ಕೋಟಿ ಜನಸಂಖ್ಯೆಯ ಲೆಕ್ಕಕ್ಕೆ ಬರುತ್ತದೆ. ಇದನ್ನು ಅವೈಜ್ಞಾನಿಕ ಅನ್ನೊದು ಸರಿಯಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ತಾಲೂಕಿನ ಚೌಡದೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಊರಬ್ಬದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮೀಕ್ಷೆ ಕುರಿತು ಈಗಾಗಲೇ ಚರ್ಚೆ ನಡೆದಿದೆ. ಸಚಿವರು ಸಹ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ನಿರ್ಧಾರ ಸಿಎಂ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ವರದಿ ಅಂಗೀಕಾರಕ್ಕೆ ಕೆಲವರು ಸಮಯ ಕೇಳಿದ್ದಾರೆ, ವೈಯಕ್ತಿಕವಾಗಿ ಕೆಲವರು ಹೇಳಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಮುಂದಕ್ಕೆ ಹೋಗಲಾಗುವುದು. ಯಾರ ಅಭಿಪ್ರಾಯದ ಬಗ್ಗೆ ತಕರಾರಿಲ್ಲ, ಪ್ರಜಾ ಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಕೇಳಬೇಕಿದೆ, ಹಾಗಾಗಿ ಮುಕ್ತವಾಗಿ ಅವಕಾಶ ನೀಡಿದ್ದು, ಅಭಿಪ್ರಾಯ ವಿಮರ್ಶೆ ಮಾಡಿ ತಾರ್ಕಿಕ ತೀರ್ಮಾನವಾಗಲಿದೆ ಎಂದರು. ಚರ್ಚೆಗಳ ಕುರಿತು ಸುಳ್ಳು ಪ್ರತಿಕ್ರಿಯೆ, ತಪ್ಪು ಗ್ರಹಿಕೆ, ಚರ್ಚೆ ಎನ್ನಲಾಗಿದೆ, ಇದು ವೈಜ್ಞಾನಿಕವಾಗಿ ಮಾಡಲಾಗಿದೆ, ಆದರೆ ಅವೈಜ್ಞಾನಿಕ ಎಂಬುದನ್ನು ನಾನು ಒಪ್ಪಲ್ಲ, ವಿಚಾರ ಆಧಾರಿತವಾಗಿ ಚರ್ಚೆಯಾಗಲಿ ಅದು ಬಿಟ್ಟು ಅವೈಜ್ಞಾನಿಕ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಗುಡುಗಿದರು.
ಸಮೀಕ್ಷೆಯಲ್ಲಿ 1 ಕೋಟಿ 30 ಲಕ್ಷ ಕುಟುಂಬಗಳು, 5 ಕೋಟಿ 98 ಲಕ್ಷ ಜನ ಭಾಗವಹಿಸಿದ್ದಾರೆ. 1.33 ಲಕ್ಷ ಸರ್ಕಾರಿ ನೌಕರರು ಗಣತಿಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ಒಂದೆ ಜಾತಿ ಜನಾಂಗಕ್ಕೆ ಸೇರಿದವರಿದ್ದಾರೆಯೆ?, ಹಾಗಾದರೆ ಇಷ್ಟು ಜನ ಒಂದೆ ಜಾತಿ, ಧರ್ಮದವರಾ? ಅವರು 30 ಸಾವಿರ ಹಳ್ಳಿಗಳಲ್ಲಿ ಗಣತಿ ಮಾಡಿದ್ದಾರೆ. ಅವರವರ ಜಾತಿಪಟ್ಟಿ ಮಾಡಿ ಕೂಡಿಸಿದರೆ ಆ ಪಟ್ಟಿ 15 ರಿಂದ 20 ಕೋಟಿ ಜನಸಂಖ್ಯೆ ರಾಜ್ಯದಲ್ಲಿ ಬರುತ್ತೆ ಎಂದು ಮಾಹಿತಿ ನೀಡಿದರು.

