Brand Bengaluru ಅಡಿಯಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿ: ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್
ನಗರಾಭಿವೃದ್ಧಿ ಇಲಾಖೆಯ (ಯುಡಿಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಎಸ್.ಆರ್. ಉಮಾಶಂಕರ್ ಏಪ್ರಿಲ್ ಅಂತ್ಯದಲ್ಲಿ ನಿವೃತ್ತರಾಗಲಿದ್ದು, ಈ ನಡುವೆ ನಗರದಲ್ಲಿ ಘೋಷಿಸಲಾದ ಹಲವಾರು ಮೂಲಸೌಕರ್ಯ ಯೋಜನೆಗಳಿಂದ ಹಿಡಿದು 1ನೇ ಮತ್ತು 2ನೇ ಹಂತದ ನಗರಗಳಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಕೈಗೊಂಡ ಉಪಕ್ರಮಗಳ ಕುರಿತು ಮಾತನಾಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡದೊಂದಿಗಿನ ಸಂವಾದದಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಉಮಾಶಂಕರ್ ಅವರು ಮಾತನಾಡಿದರು.
ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸುಮಾರು ಒಂದು ವರ್ಷ ಸೇವೆ ಸಲ್ಲಿಸಿದ ನಂತರ ಸೇವೆಯಿಂದ ನಿವೃತ್ತರಾಗುತ್ತಿದ್ದೀರಿ. ನಿಮ್ಮ ಅಧಿಕಾರಾವಧಿಯಲ್ಲಿ ಯಾವೆಲ್ಲಾ ಬದಲಾವಣೆಗಳಾಗಿವೆ?
ನಗರಾಭಿವೃದ್ಧಿ ಇಲಾಖೆಯ (ಯುಡಿಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನನ್ನ ಕೆಲಸವು ಮುಖ್ಯವಾಗಿ ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಅದರ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ. ಪ್ರಸ್ತುತ, ನಗರದ ಜನಸಂಖ್ಯೆ 1.4 ಕೋಟಿ ಎಂದು ನಾವು ಅಂದಾಜಿಸಿದ್ದೇವೆ. ಹಾಗಿರುವಾಗ, ಸಮಸ್ಯೆಯನ್ನು ಪತ್ತೆಹಚ್ಚುವುದು ಮುಖ್ಯ. ನಮ್ಮ ಮೂಲಸೌಕರ್ಯ ವ್ಯವಸ್ಥೆ 10 ವರ್ಷಗಳ ಹಿಂದೆ ಇದೆ. ಹೀಗಾಗಿ ನಗರಕ್ಕಾಗಿ ಏನಾದರೂ ದೊಡ್ಡ ಯೋಜನೆಯನ್ನು ಪ್ರಾರಂಭಿಸಲು ನಾನು ಸಲಹೆ ನೀಡಿದ್ದೆ. ಈ ಯೋಜನೆ ಈಗಲೇ ಕೈಗೆತ್ತಿಕೊಳ್ಳದಿದ್ದರೆ ಮೂರು ವರ್ಷಗಳಲ್ಲಿ ನಾವು ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದೆ. ಹೀಗಾಗಿಯೇ ಸರ್ಕಾರ 'ಬ್ರ್ಯಾಂಡ್ ಬೆಂಗಳೂರು' ಅನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಎಂಟು ವಲಯಗಳಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಮೂಲಸೌಕರ್ಯ ಪ್ರಮುಖ ವಿಚಾರವಾಗಿದೆ.
ಇದಲ್ಲದೆ, 2025-26ರಲ್ಲಿ, ರಾಜ್ಯ ಮತ್ತು ಬಿಬಿಎಂಪಿ ಬಜೆಟ್ನಲ್ಲಿ, ಹಲವಾರು ದೊಡ್ಡ ಯೋಜನೆಗಳನ್ನು ಘೋಷಿಸಿದ್ದೇವೆ. 73 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ 27,000 ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಲಾಗಿದೆ. ಬಿಬಿಎಂಪಿ ಮತ್ತು ಬಿಡಿಎ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ನಾವು ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದು ಸಾಲದ ಮೊರೆ ಹೋದೆವು. ಇದೀಗ ಭೂಸ್ವಾಧೀನವನ್ನು ಪ್ರಾರಂಭಿಸಿದ್ದೇವೆ. ಬಹುಶಃ ಮೂರು ವರ್ಷಗಳಲ್ಲಿ, ಯೋಜನೆ ಪೂರ್ಣಗೊಂಡಾಗ, ಸಂಚಾರ ಸುಗಮವಾಗಬಹುದು. ನಾವು ಕೈಗೆತ್ತಿಕೊಂಡಿರುವ ಮತ್ತೊಂದು ಬೃಹತ್ ಯೋಜನೆಯೆಂದರೆ ಸುರಂಗ ರಸ್ತೆ.
ಸುರಂಗ ರಸ್ತೆ ಯೋಜನೆಯನ್ನು ಪ್ರಾರಂಭಿಸುವ ಮೊದಲು ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲಾಗುತ್ತಿದೆಯೇ?
ಹೌದು, ಪರೀಕ್ಷೆಗಳು ನಡೆದಿವೆ. ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಇದು ಪಿಪಿಪಿ ಯೋಜನೆಯಾಗಿದ್ದು, ಹೂಡಿಕೆದಾರರ ತಾಂತ್ರಿಕ ಸಲಹೆಗಳ ಆಧಾರದ ಮೇಲೆ ಆರಂಭಿಕ ಮಾತುಕತೆಗಳನ್ನು ನಡೆಸಲಾಗಿದೆ. ಡಿಪಿಆರ್ ಇನ್ನೂ ಆಗಿಲ್ಲ, ಇದು ಮಣ್ಣಿನ ಪರೀಕ್ಷೆಗಳು ಮತ್ತು ಅಂತಿಮ ವೆಚ್ಚದ ಅಂದಾಜುಗಳನ್ನು ಒಳಗೊಂಡಿರುತ್ತದೆ. ಯೋಜನೆಗೆ ಸುಮಾರು 40,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ. ನಮ್ಮಲ್ಲಿ ದೊಡ್ಡ ಸುರಂಗ ಮಾರ್ಗ ನಿರ್ಮಾಣಕ್ಕೆ ಯಂತ್ರಗಳ ಕೊರತೆಯಿದ್ದು, ಹೀಗಾಗಿ ತಲಾ ಮೂರು ಪಥಗಳನ್ನು ಹೊಂದಿರುವ ಅವಳಿ ಸುರಂಗಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನ ಭೂವೈಜ್ಞಾನಿಕ ಹೊರಪದರವು ಸುರಂಗ ನಿರ್ಮಾಣಕ್ಕೆ ಸೂಕ್ತವಾಗಿದೆಯೇ?
ಹೌದು, ಬೆಂಗಳೂರಿನ ಹೊರಪದರವು ಸುರಂಗ ಮಾರ್ಗಕ್ಕೆ ಅನುಕೂಲಕರವಾಗಿದೆ, ಏಕೆಂದರೆ ಇದು ಗಟ್ಟಿಯಾದ ಬಂಡೆಯನ್ನು ಒಳಗೊಂಡಿದೆ, ಇದು ಈಗಾಗಲೇ ಮೆಟ್ರೋ ನಿರ್ಮಾಣದ ಮೂಲಕ ಸಾಬೀತಾಗಿದೆ. ಭೂವಿಜ್ಞಾನಿಗಳು ಅದನ್ನು ಅನುಮೋದಿಸಿದ್ದಾರೆ. ಆದಾಗ್ಯೂ, ಚಿಕ್ಕ ಮತ್ತು ಆಳವಿಲ್ಲದ ಮೆಟ್ರೋ ಸುರಂಗಗಳಿಗೆ ಹೋಲಿಸಿದರೆ, 50-60 ಅಡಿ ಆಳದ ಸುರಂಗದಿಂದ ಸವಾಲುಗಳು ಉದ್ಭವಿಸಬಹುದು.
ಇತ್ತೀಚೆಗೆ ಸಿಎಂ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ನಡುವಿನ ಸಭೆಯಲ್ಲಿ ಹೆದ್ದಾರಿಗಳನ್ನು ಸಂಪರ್ಕಿಸುವ ಹೆಚ್ಚುವರಿ ಸುರಂಗ ರಸ್ತೆಯ ಪ್ರಸ್ತಾಪದ ಬಗ್ಗೆ ಚರ್ಚಿಸಲಾಗಿದೆಯೇ?
ಕೇಂದ್ರ ಸಚಿವರು ಸುರಂಗ ರಸ್ತೆಗಳನ್ನು ಉತ್ತಮ ಪರಿಹಾರವೆಂದು ಅನುಮೋದಿಸಿದ್ದಾರೆ. ಈ ಪ್ರಸ್ತಾಪಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆರಂಭದಲ್ಲಿ ಸವಾಲುಗಳನ್ನು ಎದುರಿಸಿ ಕಾಲಾನಂತರದಲ್ಲಿ ಸುಧಾರಿಸಿದ ಮೆಟ್ರೋದಂತೆ, ಸುರಂಗ ಯೋಜನೆಗೂ ಆರಂಭದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆದರೆ, ಅನುಭವ ಮತ್ತು ಹಣಕಾಸು ಸುಧಾರಿಸಿದಂತೆ ಇದರ ದಾರಿ ಕೂಡ ಸುಗಮವಾಗುತ್ತದೆ.
ಅತ್ಯುತ್ತಮ ಮತ್ತು ವೇಗದ ಸಾರಿಗೆ ವಿಧಾನಗಳಲ್ಲಿ ಒಂದೆಂದು ಪರಿಗಣಿಸಲಾದ ಮೆಟ್ರೋ ಸೇವೆಗಳ ಆವರ್ತನವನ್ನೇಕೆ ಸುಧಾರಿಸಲು ಸಾಧ್ಯವಿಲ್ಲ?
ತಾಂತ್ರಿಕ ನಿರ್ಬಂಧಗಳಿಂದಾಗಿ ಆವರ್ತನವನ್ನು ಮಿತಿಗಿಂತ ಹೆಚ್ಚಿಸಲು ಸಾಧ್ಯವಿಲ್ಲ. ಪ್ರಸ್ತುತ, ಜನದಟ್ಟಣೆಯ ಸಮಯದಲ್ಲಿ ಪ್ರತಿ 5 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತವೆ. ಕಡಿಮೆ ಅಂತರವು ಸಿಗ್ನಲಿಂಗ್ ಮತ್ತು ಯಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಅಪಘಾತಗಳಿಗೆ ಕಾರಣವಾಗಬಹುದು.
ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಬೋಗಿಗಳನ್ನು ಸೇರಿಸಲು ಸಾಧ್ಯವಿಲ್ಲವೇ?
ಇಲ್ಲ, ಹೆಚ್ಚಿನ ಬೋಗಿಗಳನ್ನು ಸೇರಿಸುವುದು ಕಾರ್ಯಸಾಧ್ಯವಲ್ಲ. ಪ್ಲಾಟ್ಫಾರ್ಮ್ಗಳು ಮತ್ತು ಟ್ರ್ಯಾಕ್ಗಳನ್ನು ಸ್ಥಿರ ಹೊರೆಯನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಮೆಟ್ರೋ ಎತ್ತರದಲ್ಲಿ ಇರುವುದರಿಂದ, ರಚನಾತ್ಮಕ ಮಿತಿಗಳಿಂದಾಗಿ ಲೆಕ್ಕಹಾಕಿದ ಹೊರೆಗಿಂತ ಹೆಚ್ಚಿನ ತೂಕವನ್ನು ಅದು ನಿರ್ವಹಿಸುವುದಿಲ್ಲ. ಸುರಕ್ಷತಾ ಅಂಶಗಳು ಮತ್ತು ವ್ಯವಸ್ಥೆಯ ವಿನ್ಯಾಸವನ್ನೂ ಕೂಡ ನಾವು ಪರಿಗಣಿಸಬೇಕಾಗಿದೆ, ಹಳಿಗಳು ನೆಲಮಟ್ಟದ ರೈಲ್ವೆಗಳಂತೆ ಅತಿಯಾದ ಹೊರೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ.
ಮೆಟ್ರೋವನ್ನೇಕೆ ಹೆಚ್ಚು ಕೈಗೆಟುಕುವಂತೆ ಮಾಡಲು ಸಾಧ್ಯವಿಲ್ಲ?
ಸರ್ಕಾರವು ಸಬ್ಸಿಡಿ ನೀಡಲು ಸಮರ್ಥವಾಗಿದ್ದರೆ ಕೈಗೆಟುಕುವಂತೆ ಮಾಡಬಹುದು. ಆದಾಗ್ಯೂ, ಕೇಂದ್ರ ಸರ್ಕಾರವು ಒಟ್ಟು ವೆಚ್ಚದ ಕೇವಲ ಶೇ.13ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಇದಕ್ಕೆ ಸಬ್ಸಿಡಿ ನೀಡಲು ಹೆಚ್ಚಿನ ಅಗತ್ಯವಿರುತ್ತದೆ. ಮೆಟ್ರೋ ಪ್ರಯಾಣ ದರಗಳನ್ನು ಹಲವು ವರ್ಷಗಳಿಂದ ಹೆಚ್ಚಿಸಲಾಗಿಲ್ಲ, ಕಾರ್ಯಾಚರಣೆಯ ವೆಚ್ಚದಲ್ಲಿನ ಹೆಚ್ಚಳವನ್ನೂ ನೋಡಬೇಕಿದೆ.
ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವತಂತ್ರವಾಗಲು ಮುಂದಿರುವ ಸವಾಲುಗಳೇನು?
ನಗರಕ್ಕೆ ಪ್ರವೇಶಿಸುವ ಸರಕುಗಳ ಮೇಲಿನ ತೆರಿಗೆಯಾದ ಆಕ್ಟ್ರಾಯ್ ಅನ್ನು ರದ್ದುಪಡಿಸಲಾಯಿತು. ಆಕ್ಟ್ರಾಯ್ ಮುಂದುವರಿಯಲು ಬಿಟ್ಟರೆ, ಸ್ಥಳೀಯ ಸಂಸ್ಥೆಗಳು ಹಣಕಾಸಿನ ಬಗ್ಗೆ ಚಿಂತಿಸಬೇಕಾಗುವುದಿಲ್ಲ. ಉದಾಹರಣೆಗೆ, ಬೆಂಗಳೂರು ಜಿಎಸ್ಟಿಯಿಂದ ತೆರಿಗೆ ರೂಪದಲ್ಲಿ ಸುಮಾರು 5 ಲಕ್ಷ ಕೋಟಿ ರೂ.ಗಳನ್ನು ಗಳಿಸುತ್ತಿದೆ. ಬಿಬಿಎಂಪಿಯಂತಹ ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಪ್ರಮುಖ ಆದಾಯಗಳಲ್ಲಿ ಒಂದಾಗಿದೆ. ಇದರಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ವಸೂಲಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸದೆ, ಲಕ್ಷಾಂತರ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವತ್ತ ಕೆಲಸ ಮಾಡಲಾಗುತ್ತಿದೆ.
ಪಾರ್ಕಿಂಗ್ ತೆರಿಗೆ' ಕುರಿತು ಗೊಂದಲಗಳು ಏರ್ಪಟ್ಟಿವೆ...?
ಸರ್ಕಾರದ ಕ್ರಮ ಸಾರ್ವಜನಿಕರ ಪರವಾಗಿದೆ. ಹಿಂದೆ, ಆಸ್ತಿಯ ಒಟ್ಟು ವಿಸ್ತೀರ್ಣದಲ್ಲಿ ಪಾರ್ಕಿಂಗ್ ಪ್ರದೇಶವನ್ನೂ ಕೂಡ ಲೆಕ್ಕಹಾಕಲಾಗುತ್ತಿತ್ತು, ಇದು ಹೆಚ್ಚಿನ ತೆರಿಗೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಜನರ ಭೂ ಪ್ರದೇಶಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸಲು, ವಸತಿ ಕಟ್ಟಡಗಳಿಗೆ ಪ್ರತಿ ಚದರ ಅಡಿಗೆ 2 ರೂಪಾಯಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಪ್ರತಿ ಚದರ ಅಡಿಗೆ 3 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಅಲ್ಲದೆ, ಸ್ಟಿಲ್ಟ್ ಪಾರ್ಕಿಂಗ್ಗಾಗಿ ಆಸ್ತಿ ಮಾಲೀಕರು 4.5 ಮೀಟರ್ಗಳವರೆಗೆ ಜಾಗವನ್ನು ಬಳಸಲು ಅನುಮತಿಸಲಾಗಿದೆ. ಉದಾಹರಣೆಗೆ ಒಂದು ಕಟ್ಟಡದ ಗರಿಷ್ಠ ಅನುಮತಿಸುವ ವಿಸ್ತೀರ್ಣ 15 ಮೀಟರ್ ಆಗಿದ್ದರೆ, ಅವರು ಇನ್ನೂ 4.5 ಮೀಟರ್ ಸ್ಟಿಲ್ಟ್ ಪಾರ್ಕಿಂಗ್ ಅನ್ನು ಸೇರಿಸಬಹುದು. ಆದ್ದರಿಂದ ಹೊಸ ಪಾರ್ಕಿಂಗ್ ತೆರಿಗೆ ಜನರಿಗೆ ಪ್ರಯೋಜನಕಾರಿಯಾಗಿದೆ.
ಎರಡನೇ ಹಂತದ ನಗರಗಳ ಅಭಿವೃದ್ಧಿಯ ಬಗ್ಗೆ ಏನು ಹೇಳುತ್ತೀರಿ? ಸರ್ಕಾರವು ಅವುಗಳ ಬೆಳವಣಿಗೆಯನ್ನು ಉತ್ತೇಜಿಸಲು ಉದ್ದೇಶಿಸಿದೆಯೇ?
ಉದ್ದೇಶವಿದೆ. ಅದು ನಮ್ಮ ನೀತಿಗಳಲ್ಲಿಯೇ ಪ್ರತಿಫಲಿಸುತ್ತದೆ, ಕೈಗಾರಿಕಾ ಅಥವಾ ಹೂಡಿಕೆಗೆ ಸಂಬಂಧಿಸಿದವುಗಳಾಗಿರಲಿ. ನಾವು ವಿಭಿನ್ನ ವಲಯಗಳಿಗೆ ವಿಭಿನ್ನ ಹೂಡಿಕೆ ನೀತಿಗಳನ್ನು ಹೊಂದಿದ್ದೇವೆಯ ಪ್ರತಿಯೊಂದರಲ್ಲೂ ನಾವು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಿದ್ದೇವೆ. ಆದರೆ ಹೂಡಿಕೆದಾರರು ಸ್ಥಳಾಂತರಗೊಳ್ಳುತ್ತಿಲ್ಲ. ಬೆಂಗಳೂರಿನ ಹೆಸರಿನಿಂದ ಜನರು ಆಕರ್ಷಿತರಾಗುತ್ತಾರೆ. ಕರ್ನಾಟಕವು ಜಾಗತಿಕವಾಗಿ ಗುರುತಿಸಲ್ಪಡಲು ಪ್ರಮುಖ ಕಾರಣ ಬೆಂಗಳೂರಿನ ಆಕರ್ಷಣೆ,
ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮಗೆ ನಿಜವಾಗಿಯೂ ಆರು ಅಥವಾ ಏಳು ಪುರಸಭೆ ನಿಗಮಗಳು ಬೇಕೇ?
ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಬಿಬಿಎಂಪಿ ಭೂಪ್ರದೇಶದ ದೊಡ್ಡದಾಗಿ ಬೆಳೆದಿದೆ. ಒಂದು ಸಮಸ್ಯೆ ಹಿಡಿದು ಮಹದೇವಪುರ ಅಥವಾ ಕೆಂಗೇರಿಯಿಂದ ಜನರು ಕೇಂದ್ರಕ್ಕೆ ಬರಬೇಕಾಗುತ್ತದೆ. ಇದು ತುಂಬಾ ಕಷ್ಟಕರ. ಒಬ್ಬ ಆಯುಕ್ತರಿಂತ ದೂರದ ಸ್ಥಳಗಳ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ, ಆದ್ದರಿಂದ ಆಡಳಿತವನ್ನು ವಿಕೇಂದ್ರೀಕರಿಸುವುದರಿಂದ ಹಲವಾರು ಅನುಕೂಲಗಳಿವೆ.
ದೆಹಲಿಯಲ್ಲಿ ಈ ಮಾದರಿ ವಿಫಲವಾಗಿದೆಯೇ?
ದೆಹಲಿಯನ್ನು ಸಂಪೂರ್ಣವಾಗಿ ಸ್ವತಂತ್ರಗೊಳಿಸಲಾಯಿತು, ಇದು ಸಮನ್ವಯ ಸಮಸ್ಯೆಗಳಿಗೆ ಕಾರಣವಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ (GBA), ನಾವು ಹಳೆಯ ಮಾದರಿಗಳನ್ನು ಅಧ್ಯಯನ ಮಾಡಿದ್ದೇವೆ ಮತ್ತು ನಿರ್ದಿಷ್ಟವಾಗಿ ಬೆಂಗಳೂರಿನ ಸಮಸ್ಯೆಗಳನ್ನು ಪರಿಶೀಲಿಸಿದ್ದೇವೆ. ನಾವು 7 ನಿಗಮಗಳಿಗೆ ನಿಬಂಧನೆಗಳನ್ನು ಮಾಡಿದ್ದೇವೆ, 7 ನಿಗಮಗಳನ್ನೂ ಪ್ರಾರಂಭಿಸುವ ಅಗತ್ಯವಿಲ್ಲ. ಮೊದಲಿಗೆ ಮೂರು ನಿಗಮಗಳೊಂದಿಗೆ ಪ್ರಾರಂಭಿಸುತ್ತೇವೆ. ಇದರಲ್ಲಿ ಗ್ರೇಟರ್ ಬೆಂಗಳೂರು ಪ್ರಮುಖ ಸಂಸ್ಥೆಯಾಗಿರುತ್ತದೆ.
ಈ ನಿಗಮಗಳು 74 ನೇ ತಿದ್ದುಪಡಿಯ ಪ್ರಕಾರ ಸಾಂವಿಧಾನಿಕ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ,. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮನ್ವಯ ಮತ್ತು ಸ್ಥೂಲ-ಮಟ್ಟದ ಯೋಜನೆಯನ್ನು ನಿರ್ವಹಿಸುತ್ತದೆ, ವಿಶೇಷವಾಗಿ ರಸ್ತೆಗಳು ಅಥವಾ ಬಹು ಪ್ರದೇಶಗಳನ್ನು ವ್ಯಾಪಿಸಿರುವ ಮೆಟ್ರೋ ಮಾರ್ಗಗಳಂತಹ ಮೂಲಸೌಕರ್ಯ ಯೋಜನೆಗಳಿಗೆ ಈ ನಿಗಮಗಳಿಂದ ಹಣವನ್ನು ಸ್ವೀಕರಿಸುವುದಿಲ್ಲ; ಬದಲಾಗಿ, ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ ನೇರವಾಗಿ ಹಣಕಾಸು ಒದಗಿಸಲಾಗುವುದು. ಈ ವ್ಯವಸ್ಥೆಯು ಸಮನ್ವಯ ಮತ್ತು ಸ್ಥಳೀಯ ಸ್ವಾಯತ್ತತೆ ಎರಡನ್ನೂ ಖಚಿತಪಡಿಸುತ್ತದೆ, ಇದರಿಂದಾಗಿ ಪ್ರತಿಯೊಂದು ನಿಗಮವು ಪ್ರದೇಶ-ನಿರ್ದಿಷ್ಟ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಬಹುದು.
ಬೆಂಗಳೂರು ಅಂತರರಾಷ್ಟ್ರೀಯ ಖ್ಯಾತಿಯನ್ನು ಹೊಂದಿದ್ದರೂ, ಕಸ ಮತ್ತು ಪ್ರವಾಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆ?
ಸಮಸ್ಯೆಗಳನ್ನು ಒಮ್ಮೆಲೇ ಪರಿಹರಿಸಲು ಬೆಂಗಳೂರು ಸಣ್ಣ ಪಟ್ಟಣವಲ್ಲ, ನಮ್ಮಲ್ಲಿ ಸಮಗ್ರ ಯೋಜನೆಗಳಿವೆ, ಬಹಳಷ್ಟು ಕೆಲಸಗಳು ನಡೆಯುತ್ತಿವೆಯ ಆದರೆ, ವೈಫಲ್ಯಗಳು ಮಾತ್ರ ಎದ್ದು ಕಾಣುತ್ತವೆ. ಪ್ರತಿದಿನ ತ್ಯಾಜ್ಯವನ್ನು ತೆರವುಗೊಳಿಸದಿದ್ದರೆ, ನಗರ ಹೇಗಿರುತ್ತಿತ್ತು ಎಂದು ಊಹಿಸಿ? ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 6,000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಹೀಗಾಗಿ ವಿಲೇವಾರಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಾವು ನಗರದೊಳಗೆ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅದನ್ನು 40-50 ಕಿ.ಮೀ ದೂರ ಸಾಗಿಸಬೇಕಾಗುತ್ತದೆ. ಸಂಗ್ರಹಣೆ ಮತ್ತು ಸಾಗಣೆ ಕೂಡ ಅತ್ಯಂತ ಜಟಿಲ ಮತ್ತು ದುಬಾರಿಯಾಗುತ್ತದೆ. ಮತ್ತೊಂದು ವಿಷಯವೆಂದರೆ ನಾಗರಿಕ ಪ್ರಜ್ಞೆಯ ಕೊರತೆ. ಇನ್ನು ರಾಜಕಾಲುವೆ ವಿಚಾರಕ್ಕೆ ಬಂದರೆ ನಾವು ಚರಂಡಿಗಳನ್ನು ತೆರವುಗೊಳಿಸುತ್ತಿದ್ದೇವೆ. ಎರಡು ವರ್ಷಗಳಲ್ಲಿ ಆ ಕಾರ್ಯ ಪೂರ್ಣಗೊಳ್ಳುವುದು. ಐದು ಪ್ರಮುಖ ಕೆರೆಗಳ ಬಳಿ ಎಸ್ಟಿಪಿಗಳ ನಿರ್ಮಾಗಳು ಪೂರ್ಣಗೊಂಡಿವ. ಇನ್ನೂ 15 ರಿಂದ 17 ಕೆರೆಗಳಲ್ಲಿ ಕೆಲಸ ನಡೆಯುತ್ತಿದೆ. ನಗರವು ಸಾಮಾನ್ಯ ಮಳೆಯನ್ನು ನಿರ್ವಹಿಸಬಲ್ಲದು. ಆದರೆ, ಮೇಘಸ್ಫೋಟದಂತಹ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.
ನಾಗರಿಕ ನಿಯಮಗಳನ್ನೇಕೆ ಜಾರಿಗೊಳಿಸಲಾಗುವುದಿಲ್ಲ?
ಜನರನ್ನು ಹಿಡಿಯಲು ಮತ್ತು ದಂಡ ವಿಧಿಸಲು ಮಾರ್ಷಲ್ಗಳನ್ನು ನೇಮಿಸಲಾಗುತ್ತದೆ. ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತಿದೆ. ಕೆಲವರು ಕೆರೆಗಳಿಗೆ ಕಸ ಸುರಿಯುತ್ತಾರೆ. ನಾವು ಅಂತಹ ಜನರನ್ನು ಹಿಡಿದು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಆದರೂ ಜನರು ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುತ್ತಿಲ್ಲ. ಇದೀಗ ಸಿಸಿಟಿವಿಗಳನ್ನು ಹಾಕಲಾಗಿದ್ದು, ಈ ಮೂಲಕ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ.
ಕಾವೇರಿ ಐದನೇ ಹಂತ ಚಾಲನೆಯೆಲ್ಲಿದೆ, ಮುಂದಿನ ಯೋಜನೆಗಳೇನು?
ಕಾವೇರಿ ಹಂತ VI ಈಗಾಗಲೇ ಚಾಲನೆಯಲ್ಲಿದೆ. ಕೆಆರ್ಎಸ್ ಅಣೆಕಟ್ಟಿನಿಂದ 6 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದೇವೆ, ಈ ನೀರನ್ನು ನೇರವಾಗಿ ತೆಗೆಯಬೇಕು. ಒಮ್ಮೆ ಪಂಪ್ ಮಾಡಿದ ನಂತರ, ಅದು ಗುರುತ್ವಾಕರ್ಷಣೆಯ ಮೂಲಕ ಬೆಂಗಳೂರಿಗೆ ಬರುತ್ತದೆ. ಐದನೇ ಹಂತದಲ್ಲಿ, 110 ಹಳ್ಳಿಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಇದೀಗ ಹೊಸಕೋಟೆ, ದೇವನಹಳ್ಳಿ, ನೆಲಮಂಗಲ, ಮಾಗಡಿ, ಬಿಡದಿವರೆಗೆ ನೀರು ಪೂರೈಸಲು ಮುಂದಾಗಿದ್ದೇವೆ.. ಇದಕ್ಕೆ 6,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚವಾಗುವ ನಿರೀಕ್ಷೆಯಿದೆ.
ಬೆಂಗಳೂರಿಗೆ ಸ್ಕೈಡೆಕ್ನಂತಹ ಯೋಜನೆಗಳು ಬೇಕೇ?
ಸ್ಕೈಡೆಕ್ ಅನ್ನು ಪ್ರಮುಖ ಆಕರ್ಷಣೆಯೆಂದು ಗುರುತಿಸಲಾಗಿದೆ, ವಿಶೇಷವಾಗಿ ಮನರಂಜನಾ ಆಯ್ಕೆಗಳ ಕೊರತೆಯನ್ನು ಪರಿಗಣಿಸಿದರೆ ನಗರವಾಸಿಗಳಿಗೆ ವಿಶ್ರಾಂತಿಗಾಗಿ ಇಂತಹ ಸ್ಥಳಗಳು ಅತ್ಯಗತ್ಯ. ಮನರಂಜನೆಯನ್ನು ನಗರ ಪ್ರದೇಶದ ಮೂಲಭೂತ ಅವಶ್ಯಕತೆ ಎಂದು ಗುರುತಿಸಲಾಗಿದೆ. ಜನರು ಒಟ್ಟುಗೂಡಲು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ದಿನನಿತ್ಯದ ಒತ್ತಡದಿಂದ ಪರಿಹಾರ ಕಂಡುಕೊಳ್ಳಲು ಉತ್ತಮ ಪರಿಹಾರವಿದು, ನಗರದಲ್ಲಿ ಬಹುಪಯೋಗಿ ಸ್ಥಳಗಳ ಅಗತ್ಯ ಹೆಚ್ಚುತ್ತಿದೆ. ಸ್ಕೈಡೆಕ್ ಅನ್ನು ಅಂತಹ ಒಂದು ಸ್ಥಳವೆಂದು ಕಲ್ಪಿಸಲಾಗಿದೆ. ಈಗಾಗಲೇ ಒಂದು ಸಾಂಪ್ರದಾಯಿಕ ಗೋಪುರವನ್ನು ಪ್ರಸ್ತಾಪಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುವ ಬೆಂಗಳೂರಿನಂತಹ ನಗರಕ್ಕೆ ಈಗ ವಿಶ್ವ ದರ್ಜೆಯ ಸೌಲಭ್ಯಗಳು ಅಗತ್ಯವೆಂದು ಪರಿಗಣಿಸಲಾಗಿದೆ. ಇದರ ಪ್ರಗತಿಗೆ ಕನಿಷ್ಠ ಎರಡರಿಂದ ಮೂರು ವರ್ಷಗಳು ಬೇಕಾಗುತ್ತದೆ.
ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮುಕ್ತ ಸ್ಥಳಗಳು ಇರಬೇಕಲ್ಲವೇ?
ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮುಕ್ತ ಸ್ಥಳಗಳ ಅಗತ್ಯವಿರುವುದು ನಿಜ. ನಗರದ ವಿವಿಧ ಪ್ರದೇಶಗಳಲ್ಲಿ ಅಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ನಡೆಯುತ್ತಿವೆ.
ತ್ಯಾಜ್ಯದ ಉತ್ತಮ ನಿರ್ವಹಣೆಗೆ ಯಾವುದಾದರೂ ಯೋಜನೆಗಳಿವೆಯೇ?
ಹೆಚ್ಚುತ್ತಿರುವ ತ್ಯಾಜ್ಯ ಉತ್ಪಾದನೆಯೊಂದಿಗೆ, ನಾಲ್ಕು ವಿಭಿನ್ನ ದಿಕ್ಕುಗಳಲ್ಲಿ ಸುಮಾರು 100 ಎಕರೆ ಭೂಮಿಯ ಅಗತ್ಯವನ್ನು ಗುರುತಿಸಲಾಗಿದೆ. ಈ ಭೂಮಿಯನ್ನು ಡಂಪಿಂಗ್ಗೆ ಬಳಸಲಾಗುವುದಿಲ್ಲ, ಬದಲಿಗೆ ತ್ಯಾಜ್ಯ ಸಂಸ್ಕರಣೆಗೆ ಬಳಸಲಾಗುವುದು. ಹಳೆಯ ಕಸದ ಡಂಪ್ ಸೈಟ್ಗಳಿಂದ ಪರಂಪರಾಗತ ತ್ಯಾಜ್ಯವನ್ನು ತೆಗೆದು ಸಂಸ್ಕರಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಗೆ ಹಲವು ವಿಧಾನಗಳನ್ನು ಬಳಸಲಾಗುತ್ತಿದೆ. ಮರಳಿನಂತಹ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೊರತೆಗೆಯಲಾಗುತ್ತಿದೆ. ಇದು ಮರುಬಳಕೆ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ. ವಿವಿಧ ಸ್ಥಳಗಳಲ್ಲಿ 100 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಕಷ್ಟಕರವಾಗಿದ್ದು, ಇದಕ್ಕೆ ಪರಿಹಾರವಾಗಿ, ದ್ವಿತೀಯ ಕೇಂದ್ರಗಳು ಅಥವಾ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇವು 100 ಟನ್ಗಳಷ್ಟು ತ್ಯಾಜ್ಯವನ್ನು ನಿಭಾಯಿಸಬಲ್ಲವು ಮತ್ತು ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಲು ಸಹಾಯ ಮಾಡುತ್ತವೆ.
ಉಪನಗರ ರೈಲುಗಳ ಪರಿಸ್ಥಿತಿ ಹೇಗಿದೆ?
ಕೆ-ರೈಡ್ ಎಂಬ ಹೊಸ ಹೆಸರಿನಲ್ಲಿ ಉಪನಗರ ರೈಲು ಸೇವೆಯನ್ನು ಪ್ರಾರಂಭಿಸಲಾಗಿದ್ದು, ಇದು ಈಗಾಗಲೇ ಚಾಲನೆಯಲ್ಲಿದೆ. ಅಸ್ತಿತ್ವದಲ್ಲಿರುವ ರೈಲು ಮಾರ್ಗಗಳ ಜೊತೆಗೆ ಹೆಚ್ಚುವರಿ ರೈಲು ಮಾರ್ಗಗಳನ್ನು ಸೇರಿಸಲಾಗುತ್ತಿದ್ದು, ಎರಡು ಹೊಸ ಮಾರ್ಗಗಳನ್ನು ನಗರ ಸಂಚಾರಕ್ಕೆ ಮಾತ್ರ ಮೀಸಲಿಡಲಾಗಿದೆ. ಈ ಮಾರ್ಗಗಳನ್ನು ನಗರ ಮಿತಿಗಳನ್ನು ಮೀರಿ ವಿಸ್ತರಿಸಲು ಯೋಜಿಸಲಾಗಿದೆ. ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ, ನಿಲ್ದಾಣಗಳನ್ನು ಸ್ಥಾಪಿಸಲು ಮತ್ತು ಅಂತರ-ಸಂಪರ್ಕವನ್ನು ಸುಧಾರಿಸಲು ಸಣ್ಣ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದಾಗ್ಯೂ, ರೈಲು ಮಾರ್ಗವು ಬೆಂಗಳೂರು ನಗರವನ್ನು ಮೀರಿ ಇತರ ನಗರಗಳಿಗೆ ವಿಸ್ತರಿಸುತ್ತದೆ. ಈಗಿರುವ ಪ್ರಶ್ನೆ ಎಂದರೆ ದಕ್ಷಿಣದಲ್ಲಿ ರಾಮನಗರ, ವಾಯುವ್ಯದಲ್ಲಿ ನೆಲಮಂಗಲ ಅಥವಾ ಉತ್ತರದಲ್ಲಿ ಚಿಕ್ಕಬಾಣಾವರದಂತಹ ನಗರಗಳಿಗೆ ರೈಲು ಮಾರ್ಗವನ್ನು ವಿಸ್ತರಿಸಬೇಕೇ ಎಂಬುದು.
ಬೆಂಗಳೂರಿನಿಂದ ಇತರ ನಗರಗಳು ಕಲಿಯಬೇಕಾದ ಪಾಠಗಳೇನು?
ನಾವು ಖಂಡಿತವಾಗಿಯೂ ಅನುಭವ ಮತ್ತು ಪಾಠ ಎರಡನ್ನೂ ಕಲಿಯಬೇಕಾಗಿದೆ. ತ್ಯಾಜ್ಯ ನಿರ್ವಹಣೆಯಂತಹ ಹಲವಾರು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಹೆಚ್ಚಿನ ನಗರಗಳು ಒಳಚರಂಡಿ ಸಂಸ್ಕರಣಾ ಘಟಕಗಳು, ನಗರ ಒಳಚರಂಡಿ ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಹೊಂದಿವೆ. ಅನೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ಶೇ 80 ರಷ್ಟು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 215 ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿವೆ.
ತ್ಯಾಜ್ಯ ನಿರ್ವಹಣೆಯಲ್ಲಿ ಮಾತ್ರವಲ್ಲದೆ, ನೀರು ಸರಬರಾಜು, ಸಂಚಾರ ಮತ್ತು ಇತರ ನಗರ ಸಮಸ್ಯೆಗಳಲ್ಲೂ ಪ್ರಮುಖ ಸವಾಲನ್ನು ಒಡ್ಡುತ್ತಿದೆ. ನಮ್ಮಲ್ಲಿ ಸುಮಾರು 10 ಪ್ರಮುಖ ಪುರಸಭೆ ನಿಗಮಗಳಿವೆ, ಇತ್ತೀಚೆಗೆ 2-3 ಹೆಚ್ಚಿನವುಗಳನ್ನು ಸೇರಿಸಲಾಗಿದೆ. ಇವು ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಂತಹ ಕಾರ್ಯಕ್ರಮಗಳ ಮೂಲಕ ಅನುದಾನ ಪಡೆಯುತ್ತಿವೆ. 15ನೇ ಹಣಕಾಸು ಆಯೋಗವೂ ಬೆಂಬಲವನ್ನು ನೀಡಿದೆ. ಅವುಗಳನ್ನು ಮತ್ತೊಂದು ಬೆಂಗಳೂರನ್ನಾಗಿ ಮಾಡಲು ಬಯಸುವುದಿಲ್ಲ.