
ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಪುತ್ರಿಯ ಮೇಲೆ ಎಫ್ಐಆರ್ ದಾಖಲಾಗಿದೆ.
ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ, ಸಹೋದರಿ ಕೃತಿ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 103(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ದಾಖಲಾದ ಬೆನ್ನಲ್ಲೇ ಪತ್ನಿ ಪಲ್ಲವಿ ಮತ್ತು ಕೃತಿಯನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಕಳೆದ ಒಂದು ವಾರದಿಂದ ತಾಯಿ ಪಲ್ಲವಿಯನ್ನು ತಂದೆಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಬಳಿಕ ತಾಯಿ ಹಾಗೂ ತಂಗಿ ಇಬ್ಬರೂ ಅಲ್ಲಿಗೆ ಹೋಗಿ, ಪೀಡಿಸಿ ಕರೆ ತಂದಿದ್ದರು.
ಏ.20ರ ಸಂಜೆ 5 ಗಂಟೆಯ ವೇಳೆ ನಾನು ದೊಮ್ಮಲೂರಿನಲ್ಲಿರುವ ಗಾಲ್ಫ್ ಅಸೋಸಿಯೇಷನ್ನಲ್ಲಿದ್ದಾಗ ನಮ್ಮ ಮನೆಯೆ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ತಂದೆಯ ದೇಹ ಕೆಳಗಡೆ ಬಿದ್ದಿದೆ ಎಂದು ತಿಳಿಸಿದರು.
ಕೂಡಲೇ ಅಲ್ಲಿಂದ ಹೊರಟು ಸಂಜೆ 5:45ಕ್ಕೆ ಮನೆಗೆ ಆಗಮಿಸಿದೆ. ಈ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರು ಇದ್ದರು.
ತಂದೆಯ ತಲೆಯಿಂದ ರಕ್ತ ಬರುತ್ತಿತ್ತು. ದೇಹದ ಪಕ್ಕದಲ್ಲಿ ಬಾಟಲ್ ಮತ್ತು ಚಾಕು ಇತ್ತು. ನನ್ನ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರ್ತಿಕೇಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಮಾಜಿ ಡಿಜಿಪಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ. ಅವರ ಪತ್ನಿ (ಪಲ್ಲವಿ) ಅವರನ್ನು ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ವಿವರವಾದ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದ್ದಾರೆ.
ಇನ್ನು ಓಂ ಪ್ರಕಾಶ್ ಅವರ ಅಂತ್ಯಕ್ರಿಯೆ ಮತ್ತು ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3:30 ರ ಸುಮಾರಿಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿ ನಡೆಯಲಿದೆ.
Advertisement