
ಶಿವಮೊಗ್ಗ: ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಕುಟುಂಬಸ್ಥರು, ಸ್ನೇಹಿತರು, ವಿವಿಧ ಪಕ್ಷಗಳ ಮುಖಂಡರು ಮನೆಗೆ ಆಗಮಿಸುತ್ತಿದ್ದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ಮಂಜುನಾಥ್ ಅವರ ತಾಯಿ, ನಿನ್ನೆ ಟಿವಿ ವೀಕ್ಷಿಸುತ್ತಿರುವಾಗ ಈ ಸುದ್ದಿ ಸಿಕ್ಕಿತು. ಅನೇಕ ಮುಖಂಡರು ನಮ್ಮನ್ನು ಭೇಟಿಯಾಗಿದ್ದಾರೆ. ಮಂಜುನಾಥ್ ಹಾಗೂ ಅವರ ಪತ್ನಿ ಶುಕ್ರವಾರ ಕಾಶ್ಮೀರಕ್ಕೆ ತೆರಳಿದ್ದರು. ಅಲ್ಲಿಗೆ ಹೋಗಬೇಡಿ ಅಂತಾ ಹೇಳಿದ್ದೆ. ಆದರೆ ನನ್ನ ಮನವೊಲಿಸಿ ಕಾಶ್ಮೀರಕ್ಕೆ ತೆರಳಿದ್ದರು ಎಂದು ತಿಳಿಸಿದರು.
ಮೊನ್ನೆ ಕಾಲ್ ಮಾಡಿದ್ದ ಮಂಜುನಾಥ್, ರಿಮೋಟ್ ಪ್ರದೇಶದಲ್ಲಿ ವಿಹಾರ ನಡೆಸುತ್ತಿರುವುದಾಗಿ ಹೇಳಿದ್ದರು. ಆದರೆ. ಕಳೆದ ಎರಡು ದಿನಗಳಿಂದ ನಮಗೆ ಕರೆ ಮಾಡಿಲ್ಲ ಎಂದು ಹೇಳುವ ಮೂಲಕ ಗದ್ಗದಿತರಾದರು.
ಮಂಜುನಾಥ್ ಸಹೋದರಿ ಮಾತನಾಡಿ, ಇದೇ ತಿಂಗಳ 8 ರಂದು ಹೋಗಿದ್ದರು. 24 ರಂದು ವಾಪಸ್ಸಾಗುತ್ತಾರೆ ಅಂದುಕೊಂಡಿದ್ದೇವು. ಕುಟುಂಬದ ವಾಟ್ಸಾಪ್ ಗ್ರೂಪ್ಗೆ ಮೇಸೆಜ್ ಮಾಡಿ, ನಮ್ಮ ಮಾಮಾ ಅವರ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು. ಪಲ್ಲವಿ ಅವರು ನಮಗೆ ಕರೆ ಮಾಡಿ ಮಾತನಾಡಿದ್ದು, ನಾಳೆ ಬರುವುದಾಗಿ ಹೇಳಿರುವುದಾಗಿ ತಿಳಿಸಿದರು.
ಮೃತ ಮಂಜುನಾಥ್ ಅವರ ಸಂಬಂಧಿ ಬಾಮೈದ ಪ್ರದೀಪ್ ಮಾತನಾಡಿ, ನಿನ್ನೆ ನಮ್ಮ ಕುಟುಂಬಕ್ಕೆ ಕೆಟ್ಟ ದಿನವಾಗಿತ್ತು. ನನ್ನ ಸಹೋದರಿ ಮತ್ತು ಅವರ ಮಗ ಚೆನ್ನಾಗಿದ್ದಾರೆ, ಆದರೆ ಅವರ ಪತಿ ಸಾವನ್ನಪ್ಪಿದ್ದಾರೆ, ನಾಳೆ ಬೆಳಗ್ಗೆ ಮೃತದೇಹ ಆಗಮಿಸುವ ನಿರೀಕ್ಷೆಯಿದೆ ಎಂದರು.
Advertisement